ಬೆಂಗಳೂರು: ಬಿಎಸ್ವೈ ನಾಯಕತ್ವಕ್ಕೆ ಒಂದೆಡೆ ಜಿಂದಾಲ್ ವಿವಾದದ ತೂಗುಗತ್ತಿ ಆತಂಕ ಸೃಷ್ಟಿಸಿದ್ದರೆ ಇನ್ನೊಂದೆಡೆ ಆರೆಸ್ಸೆಸ್ ಸಿದ್ದಾಂತಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ವಕೀಲರೇ ಹೈಕೋರ್ಟ್ನಲ್ಲೂ, ಹೈಕಮಾಂಡ್ ಮಟ್ಟದಲ್ಲೂ ಹೈವೋಲ್ಟೇಜ್ ಸನ್ನಿವೇಶ ಸೃಷ್ಟಿಸಿದ್ದಾರೆ. ಜಿಂದಾಲ್ ಕುರಿತಂತೆ ಸಾಮಾಜಿಕ ಹೋರಾಟಗಾರ ಕೆ ಪಾಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರವಾಗಿ ವಕೀಲರಾಗಿರುವುದು ಆರೆಸ್ಸೆಸ್ ನಾಯಕರಾಗಿ, ಸಂಘದ ಚಿಂತನೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಅತೀ ಹೆಚ್ಚು ವಾದ ಮಂಡಿಸಿರುವ ವಕೀಲ ದೊರೆರಾಜು.
ಜಿಂದಾಲ್ಗೆ ರಾಜ್ಯ ಸರ್ಕಾರ 3664 ಎಕರೆ ಜಮೀನು ಮಂಜೂರು ಮಾಡುವ ತೀರ್ಮಾನ ಕೈಗೊಂಡಿರುವ ವಿವಾದ ಕುರಿತ ಈ ಅರ್ಜಿ ಮುಖ್ಯ ನ್ಯಾಯಮೂರ್ತಿ ಓಕಾ ಅವರನ್ನೊಳಗೊಂಡ ಹೈಕೋರ್ಟ್ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿದೆ. ಸರ್ಕಾರದ ನಿಲುವಿನ ವಿರುದ್ದ ವಾದ ಮಂಡಿಸಿದ ದೊರೆರಾಜು, ಪರಿಸರ ಹಿತಕ್ಕೆ, ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರಬಹುದಾದ ಕ್ರಮ ಇದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸರ್ಕಾರ ಜಿಂದಾಲ್ ಪರವಾಗಿ ಕೈಗೊಂಡಿರುವುದೇ ತಪ್ಪು ನಿರ್ಧಾರ. ಇದು ನ್ಯಾಯಾಲಯಗಳ ಈ ಹಿಂದಿನ ನಿಲುವುಗಳಿಗೂ ವಿರುದ್ದವಾಗಿದೆ ಎಂದು ದೊರೆರಾಜು ಅವರು ನ್ಯಾಯಮೂರ್ತಿಗಳ ಗಮನಸೆಳೆದಿದ್ದಾರೆ. ಒರಿಸ್ಸಾದ ಪ್ಯಾರಾಡಿಪ್ನಲ್ಲಿ ಜಿಂದಾಲ್ ಕಂಪನಿಗೆ ಜಮೀನು ಮಂಜೂರಾತಿ ವಿಚಾರದಲ್ಲಿನ ಕೋರ್ಟ್ನ ನಿರ್ದೇಶನವನ್ನು ಗಮನಕ್ಕೆ ತಂದರು. ಈ ಹಿಂದೆ ಟಾಟಾ ಸಂಸ್ಥೆಗೆ ಜಮೀನು ನೀಡಿರುವ ವಿವಾದದಲ್ಲಿ ಮಧ್ಯ ಪ್ರವೇಶಿಸಿದ್ದ ಕೋರ್ಟ್ ಸರ್ಕಾರದ ಕ್ರಮವನ್ನೇ ರದ್ದುಪಡಿಸಿ, ಜಮೀನನ್ನು ಮೂಲ ವ್ಯಕ್ತಿಗಳಿಗೇ ವಾಪಸ್ ಮಾಡಿಸಿರುವ ಬೆಳವಣಿಗೆಯನ್ನೂ ಉದಾಹರಿಸಿದರು.
ಆದರೆ ಸರ್ಕಾರ ಕ್ಯಾಬಿನೆಟ್ನಲ್ಲಿ ಕೈಗೊಂಡಿರುವ ತೀರ್ಮಾನ ಕುರಿತ ದಾಖಲೆಗಳನ್ನು ನೀಡುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ. ದೊರೆರಾಜು ಅವರು ಸಮರ್ಥವಾಗಿ ವಾದ ಮಂಡಿಸಿದರಾದರೂ ನ್ಯಾಯಾಲಯಕ್ಕೆ ಸೂಕ್ತ ಪುರಾವೆಯನ್ನು ನೀಡುವಲ್ಲಿ ಸಫಲರಾಗಿಲ್ಲ. ಹಾಗಾಗಿ ಎಲ್ಲಾ ಸಂಗತಿಗಳನ್ನೊಳಗೊಂಡ ಪರಿಪೂರ್ಣ ಅರ್ಜಿಯನ್ನು ಸಲ್ಲಿಸಲು ಅವಕಾಶ ಕೋರಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಪೀಠ ಪ್ರಸ್ತುತ ವಿಚಾರಣೆಯಲ್ಲಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸಿದೆ ಎಂದು ವಕೀಲ ದೊರೆರಾಜು ತಿಳಿಸಿದ್ದಾರೆ.
ಸರ್ಕಾರಕ್ಕೆ ಸವಾಲಿನ ಹಾದಿ..?
ಸ್ವ ಪಕ್ಷೀಯರ ವಿರೋಧವಿದ್ದರೂ ಪಕ್ಷದ ನಿಲುವು ಹಾಗೂ ಸಿದ್ಧಾಂತಗಳನ್ನು ಮೀರಿ, ಜಿಂದಾಲ್ ಸಂಸ್ಥೆಗೆ ಜಮೀನು ಒದಗಿಸುವ ನಿರ್ಧಾರದಿಂದಾಗಿ ಬಿಎಸ್ವೈ ಸರ್ಕಾರ ಇದೀಗ ಇಕ್ಕಟ್ಟಿಗೆ ಸಿಲುಕಿದೆ. ಬಿಜೆಪಿ ಶಾಸಕರು, ಸಚಿವರು ಈ ನಿರ್ಧಾರದ ವಿರುದ್ದ ಹೈಕಮಾಂಡ್ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದರೆ, ಆರೆಸ್ಸೆಸ್ನ ಹಿರಿಯ ಧುರೀಣರೂ ಆಗಿರುವ ವಕೀಲ ದೊರೆರಾಜು ಅವರು, ಈ ಸಮರವನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್, ಗ್ರೀನ್ ಟ್ರಿಬ್ಯೂನಲ್ನತ್ತ ಕೊಂಡೊಯ್ದು, ಇಡೀ ವಿವಾದಕ್ಕೆ ರೋಚಕತೆ ತುಂಬಿದ್ದಾರೆ. ರಾಷ್ಟ್ರ ರಾಜಕಾರಣದ ಇತಿಹಾಸದಲ್ಲೇ ಅಪೂರ್ವ ಎಂಬಂತೆ ಸ್ವಪಕ್ಷೀಯರಾಗಿರುವ ವಕೀಲರೊಬ್ಬರು ತಮ್ಮ ಸರ್ಕಾರದ ಸಿಎಂ, ಡಿಸಿಎಂ ಸಹಿತ 32 ಸಚಿವರಿಗೆ ಕೋರ್ಟ್ ನೊಟೀಸ್ ನೀಡಿ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ಇದೀಗ ಹೈಕೋರ್ಟ್ಗೆ ಪರಿಷ್ಕೃತ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಮತ್ತೆ ಸವಾಲಿನ ಸನ್ನಿವೇಶ ಎದುರಾಗುವಂತೆ ಮಾಡಿದ್ದಾರೆ ಎಂಬುದು ರಾಜತಾಂತ್ರಿಕ ಪಂಡಿತರ ಪ್ರತಿಕ್ರಿಯೆ.