ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಹಠಾತ್ತನೆ ವಿದ್ಯಮಾನಗಳು ಗರಿಗೆದರಿವೆ. ಕೋವಿಡ್ ಸಂಕಟ ಕಾಲದಲ್ಲೂ ಕೆಲವು ನಾಯಕರು ಸೋಮವಾರ ದೆಹಲಿಯಾತ್ರೆ ಕೈಗೊಂಡು ಅಚ್ಚರಿಗೆ ಕಾರಣರಾಗಿದ್ದಾರೆ. ಈ ಬೆಳವಣಿಗೆ ನಾಯಕತ್ವ ಬದಲಾವಣೆ ಪ್ರಕ್ರಿಯೆಗೆ ಮುನ್ನುಡಿಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕೋವಿಡ್ ನಿರ್ವಹಣೆಯಲ್ಲಿನ ಸಿಎಂ ಯಡಿಯೂರಪ್ಪ ಅವರ ನಡೆ ಕೇಂದ್ರದ ಪಾಲಿಗೆ ಸಮಾಧಾನ ತಂದಿದ್ದರೂ ಜಿಂದಾಲ್ ಪ್ರಕರಣವು ಸವಾಲು ಎಂಬಂತಾಗಿದೆ. ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಜಿಂದಾಲ್ಗೆ ಜಮೀನು ಹಂಚಿಕೆ ಮಡುವುದಕ್ಕೆ ವಿರೋಧ ಮಾಡಿದ್ದ ಬಿಜೆಪಿ ಇದೀಗ ಏಕಾಏಕಿ ಜಿಂದಾಲ್ ಪರವಾಗಿ ನಿಲುವು ತಾಳಿರುವುದೇ ಆರೆಸ್ಸೆಸ್ ನಾಯಕರಿಗೂ ಅಚ್ಚರಿಯ ವಿಚಾರ. ಈ ಪ್ರಕರಣ ಇದೀಗ ಕೋರ್ಟ್ ಮೆಟ್ಟಿಲೇರಿದ್ದು ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೂ ಉತ್ತರಿಸಲಾಗದ ಪ್ರಶ್ನೆಯಂತೆ ಕಾಡುತ್ತಿದೆಯಂತೆ.
ಈ ನಡುವೆ, ಈ ವಿವಾದ ಕುರಿತಂತೆ ಸಮರಕ್ಕಿಳಿದಿರುವ ಶಾಸಕರ ಒಂದು ಗುಂಪು ಶಾಸಕಾಂಗ ಪಕ್ಷದ ಸಭೆ ಕರೆಯುವ ಸನ್ನಿವೇಶವನ್ನು ಎದುರು ನೋಡುತ್ತಿದೆ. ಜಿಂದಾಲ್ ವಿಚಾರದಲ್ಲಿ ಸ್ಪಷ್ಟತೆ ತಿಳಿಯುವುದು ಈ ಶಾಸಕರ ಗುಂಪಿನ ಉದ್ದೇಶ ಎನ್ನಲಾಗುತ್ತಿದೆ. ಹಾಗೊಂದು ವೇಳೆ ಶಾಸಕಾಂಗ ಪಕ್ಷದ ಸಭೆ ನಡೆದಿದ್ದೇ ಆದರೆ ನಾಯಕತ್ವ ಬದಲಾವಣೆಯ ಅನಿವಾರ್ಯತೆ ಸೃಷ್ಟಿಯಾಗುವ ಆತಂಕವೂ ಬಿಎಸ್ವೈ ನಿಷ್ಠರನ್ನು ಕಾಡತೊಡಗಿದೆ.
ಜೂನ್ 7ರ ನಂತರದ ಕೌತುಕ..
ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಕಠಿಣ ನಿಯಮ ಮತ್ತಷ್ಟು ದಿನ ವಿಸ್ತರಣೆಯಾಗದಿದ್ದಲ್ಲಿ ಜೂನ್ 7ರ ನಂತರ ಶಾಸಕಾಂಗ ಸಭೆ ನಡೆಯುವ ಸಾಧ್ಯತೆಗಳಿವೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಆದರೆ, ಪ್ರಸ್ತುತ ಯಡಿಯೂರಪ್ಪ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎನ್ಬುತ್ತಿರುವ ಆರೆಸ್ಸೆಸ್ನ ಕೆಲವು ನಾಯಕರು, ಜಿಂದಾಲ್ ವಿಚಾರದಲ್ಲಿ ಮೃದು ನಿಲುವು ತಾಳುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈ ವಿಚಾರದಲ್ಲಿ ಕಾನೂನು ಸಮರ ಕೈಗೊಂಡವರನ್ನು ಸಮಾಧಾನಪಡಿಸುವ ಪ್ರಯತ್ನಕ್ಕಿಳಿದಿದ್ದಾರೆ.
ಸಂಘದಲ್ಲಿನ ವಾತಾವರಣ ಹೀಗಿರುವಾಗ ಹಾಗೂ ಪ್ರಸ್ತುತ ಕೋವಿಡ್ ಸನ್ನಿವೇಶದಲ್ಲಿ ನಾಯಕತ್ವ ಬದಲಾವಣೆಯ ನಿರ್ಧಾರ ಕಷ್ಟಸಾಧ್ಯ ಎಂಬುದು ಕೇಸರಿ ಪಾಳಯದ ಹಿರಿತಲೆಗಳ ಮಾತು. ಆದರೂ ಈ ಹಿಂದೆ ಹತ್ತಾರು ಅಚ್ಚರಿಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ಬಿಜೆಪಿಯಲ್ಲಿ ಯಾವುದೂ ಕಷ್ಟವಿಲ್ಲ ಎಂಬುದು ಪಕ್ಷನಿಷ್ಟರ ಅಭಿಪ್ರಾಯ.