ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿದ ಆಪತ್ಪಾಂಧವ.. ನಮ್ಮ ಸಂಸ್ಥೆಯ ಹೆಮ್ಮೆ, ಗೌರವದ ಪ್ರತೀಕ ನಮ್ಮ ಚಾಲಕ.. ತಮ್ಮ ಪಾಳಯಕ್ಕೆ ಚಾಲಕರೇ ಹೆಮ್ಮೆ ಅಂತಿದೆ KSRTC ಸಮೂಹ..
ದಿನಾಂಕ 29.01.2023 ರಂದು ತುಮಕೂರು ವಿಭಾಗದ ಶಿರಾ ಘಟಕದ ಚಾಲಕರಾದ ಶ್ರೀ ಮಂಜುನಾಥ್ ಬಿಲ್ಲೆ ಸಂಖ್ಯೆ 697 ರವರು ತುಮಕೂರು ವಿಭಾಗದ ಮಾರ್ಗದಲ್ಲಿ ಬಸ್ಸು ಕಾರ್ಯಾಚರಣೆ ಮಾಡುತ್ತಿದ್ದಾಗ, ಸಮೀಪದ ಹಂದಿ ಕುಂಟೆ ಅಗ್ರಹಾರ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಜೀವವನ್ನು, ತಮ್ಮ ಪ್ರಾಣಪಾಯವನ್ನು ಸಹ ಲೆಕ್ಕಿಸದೆ ರಕ್ಷಿಸಿ ಶೌರ್ಯ ಕಾರ್ಯವನ್ನು ಮೆರೆದ ಚಾಲಕನ ಮಾನವೀಯ ಕಾರ್ಯವನ್ನು ಮೆಚ್ಚಿ ಇಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ ಅನ್ಬುಕುಮಾರ್ ಅವರು, ಚಾಲಕರನ್ನು ಇಂದು ಕೆ ಎಸ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ಅವರ ಕುಟುಂಬದವರ ಸಮ್ಮಖದಲ್ಲಿ ಸನ್ಮಾನಿಸಿ ರೂ.10,000 ನಗದು ಪುರಸ್ಕಾರ ಮತ್ತು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್ ರವರು ನಡೆದ ಘಟನೆ ಬಗ್ಗೆ ವಿವರಿಸಿದರು. ನಂತರ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು , ಇನ್ನೂ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಉಳಿದಿವೆ ಎಂಬುದಕ್ಕೆ ನಮ್ಮ ಚಾಲಕ ಮಂಜುನಾಥರವರು ಜೀವಂತ ಉದಾಹರಣೆಯಾಗಿದ್ದಾರೆ. ಈಜು ಬರುವ ಎಷ್ಟೋ ಜನ ದಿಢೀರನೆ ನೀರಿನಲ್ಲಿ ಧುಮುಕಿ, ಇತರರ ಪ್ರಾಣ ಉಳಿಸುವ ಕಾರ್ಯ ಮಾಡಲು ಹಲವು ಬಾರಿ ಯೋಚಿಸುತ್ತಾರೆ, ಹಿಂಜರಿಯುತ್ತಾರೆ ಆದರೆ ಮಂಜುನಾಥ್ ರವರು, ಆ ಎರಡು ಹೆಣ್ಣುಮಕ್ಕಳ ತಾಯಿ ಕೆರೆಯಿಂದ ರಸ್ತೆವರೆಗೆ ಓಡುತ್ತಾ, ಯಾರು ಜನರೇ ಕಾಣದ ಆ ಸ್ಥಳದಲ್ಲಿ, ಹತಾಶರಾಗಿ ಅಳುತ್ತಾ ಬಂದು ರಸ್ತೆಯಲ್ಲಿ ಹೋಗುತ್ತಿದ್ದ ನಮ್ಮ ಬಸ್ಸನ್ನು ಕಂಡೊಡನೆ ತಡೆದು ನಿಲ್ಲಿಸಿ, ಮಕ್ಕಳ ಪ್ರಾಣ ಉಳಿಸಲು ಕೋರಿದಾಗ ಆ ಬಸ್ಸಿನಲ್ಲಿ 40 ಜನ ಪ್ರಯಾಣಿಕರಿದ್ದರು, ಆದರೆ ಯಾರೊಬ್ಬರು ಮಂಜುನಾಥ್ ಮಾಡಿದ ಕಾರ್ಯ ಮಾಡಲು ಮುಂದೆ ಬರಲಿಲ್ಲ, ಆದರೆ ನಮ್ಮ ಚಾಲಕ ಒಂದು ಕ್ಷಣವೂ ಯೋಚಿಸದೆ ತಕ್ಷಣವೇ ಬಸ್ಸನ್ನು ನಿಲ್ಲಿಸಿ, ಕೆರೆಗೆ ಹಾರಿ ಆ ಎರಡು ಹೆಣ್ಣು ಮಕ್ಕಳ ಜೀವವನ್ನು ಉಳಿಸಿದ್ದಾನೆ. ಜೀವಕ್ಕೆ ಬೆಲೆ ಕಟ್ಟುವುದಕ್ಕೆ ಯಾವುದರಿಂದಲೂ ಸಾಧ್ಯವಿಲ್ಲ. ಆ ಎರಡು ಹೆಣ್ಣುಮಕ್ಕಳ ತಾಯಿಗೆ ಮಕ್ಕಳ ಜೀವದ ಬೆಲೆ ಆ ಪರಿಸ್ಥಿತಿಯಲ್ಲಿ ತಿಳಿದಿರುತ್ತದೆ. ನಿಗಮವು ನೀಡಿರುವ ನಗದು ಪುರಸ್ಕಾರ ಮಂಜುನಾಥ್ ರವರ ಮಾನವೀಯ ಕಾರ್ಯಕ್ಕೆ ಯಾವ ರೀತಿಯಿಂದಲೂ ಸಮನಾಗದಿದ್ದರೂ ಅವರನ್ನು ಗೌರವಿಸಿ ಪ್ರೋತ್ಸಾಹಿಸುವ ಕೆಲಸ ನಮ್ಮ ಕರ್ತವ್ಯವಾಗಿದೆಯೆಂದು ನಾವು ಭಾವಿಸಿ, ಇಂದು ಅವರ ಸಕುಟುಂಬ ಪರಿವಾರವನ್ನು ಕೇಂದ್ರ ಕಛೇರಿಗೆ ಆಹ್ವಾನಿಸಿ, ಅಭಿನಂದಿಸಿದ್ದೇವೆ. ಇವರ ಈ ಮಾದರಿ ಕಾರ್ಯ ಇತರರಿಗೆ ಪ್ರೇರಕ ಶಕ್ತಿಯಾಗಲಿ , ಮಂಜುನಾಥ್ ಅವರಿಗೆ ಮತ್ತು ಅವರ ಕುಟುಂಬದವರಿಗೆ ಆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.
ಈ ಅಭಿನಂದನಾ ಕಾರ್ಯಕ್ರಮದಲ್ಲಿ.ಪ್ರಶಾಂತ್ ಕುಮಾರ್ ಮಿಶ್ರ, ನಿರ್ದೇಶಕರು (ಸಿಬ್ಬಂದಿ & ಜಾಗೃತ), ಇಲಾಖಾ ಮುಖ್ಯಸ್ಥರುಗಳು, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು ವಿಭಾಗ, ಘಟಕ ವ್ಯವಸ್ಥಾಪಕ, ಶಿರಾ ಘಟಕ ರವರುಗಳು ಭಾಗವಹಿಸಿದ್ದರು.