ದೊಡ್ಡಬಳ್ಳಾಪುರ: ತಡರಾತ್ರಿ ಒಂಟಿ ಮನೆ ಗುರಿಯಾಗಿಸಿಕೊಂಡು ಬಾಗಿಲು ಹೊಡೆದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕೆಳಗಿನಜೂಗಾನಹಳ್ಳಿ ಗ್ರಾಮದ ಹೊರವಲಯದ ಮುನಿಯಪ್ಪ ಮತ್ತು ರಾಮಕೃಷ್ಣ ಎಂಬುವವರ ಹೊಲದ ಮನೆಯಲ್ಲಿ ಘಟನೆ. ಮನೆಯ ಮಾಲೀಕರು ಗುರುವಾರ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ತಾವು ಸಾಕಿದ್ದ ನಾಯಿಗಳಿಗೆ ಊಟ ತರಲು ಎರಡು ಕಿಲೋಮೀಟರ್ ದೂರದ ಕೆಳಗಿನಜೂಗಾನಹಳ್ಳಿಗೆ ಹೋಗಿದ್ದಾರೆ.
ಇದನ್ನೇ ಕಾಯುತ್ತಿದ್ದ ಖದೀಮರು ಸೈಜ್ ಕಲ್ಲುಗಳಿಂದ ಬಾಗಿಲುಗಳಿಗೆ ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಕಬ್ಬಿಣದ ಬಾಗಿಲಾದ್ದರಿಂದ ಅವುಗಳನ್ನು ಹೊಡೆಯಲಾಗದೆ, ಮನೆಯ ಮೇಲೆ ಹತ್ತಿ ಛಾವಣಿಗೆ ಹಾಕಲಾಗಿದ್ದ ಕಬ್ಬಿಣದ ಶೀಟುಗಳ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ, ಇದರಿಂದ ಎರಡು ಶೀಟುಗಳು ಹಾಳಾಗಿವೆ. ಕಳ್ಳತನ ಪ್ರಯತ್ನ ಯಶಸ್ವಿಯಾಗದ ಕಾರಣಕ್ಕೆ ಅಲ್ಲಿಂದ ಪರಾರಿಯಾಗಿದ್ದಾರೆ.
ಕಳ್ಳರು ಬಂದ ಸಮಯದಲ್ಲಿ ಮನೆ ಬಳಿ ಯಾರೂ ಇರಲಿಲ್ಲ. ಕಳ್ಳತನಕ್ಕೆ ಅಡ್ಡುಯಾಗಿದ್ದ ನಾಲ್ಕು ನಾಯಿಗಳನ್ನು ಸಾಕಲಾಗಿದ್ದು, ದುಷ್ಕರ್ಮಿಗಳು ಹೊಡೆದು ಪ್ರಾಣಿ ಹಿಂಸೆ ಮಾಡಿ ಅಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮನೆ ಮಾಲಿಕ ಮುನಿಯಪ್ಪ, ಸುಮಾರು 35 ವರ್ಷಗಳಿಂದ ಇಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಬೋರ್ ಹಾಕಿಸಿ ಮನೆ ಕಟ್ಟಿ ಇಲ್ಲೇ ವಾಸ ಮಾಡುತ್ತಿದ್ದೇವೆ. ಎಂದೂ ಇಂತಹ ಘಟನೆ ನಡೆದಿರಲಿಲ್ಲ ಎಂದರು.
ತಡರಾತ್ರಿ ನಾವು ಯಾರೂ ಮನೆಯಲ್ಲಿ ಇಲ್ಲದ ಸಮಯದಲ್ಲಿ ಕಳ್ಳರು ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಸೈಜುಗಲ್ಲಿನಿಂದ ಬಾಗಿಲು ಹೊಡೆಯಲು ಪ್ರಯತ್ನಿಸಿದ್ದಾರೆ, ನಂತರ ಮನೆಯ ಛಾವಣೆ ಮೇಲೆ ಸೈಜು ಕಲ್ಲುಗಳನ್ನು ಎತ್ತಿ ಹಾಕಿದ್ದಾರೆ, ನಾವು ಯಾರಾದರೂ ಮನೆಯಲ್ಲಿ ಇದ್ದಿದ್ದರೆ ನಮಗೂ ಅಪಾಯ ಮಾಡುತ್ತಿದ್ದರು ಎನಿಸುತ್ತದೆ ಎಂದು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.