ದಾವಣಗೆರೆ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯಭೇರಿ ಖಚಿತವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ದಾವಣಗೆರೆ ನಮ್ಮ ಶಕ್ತಿಯ ಕೇಂದ್ರ. 8 ವರ್ಷಗಳ ಅವಧಿಯಲ್ಲಿ ಮೋದಿಜಿ ಅವರ ನೇತೃತ್ವದಲ್ಲಿ ಕೇಂದ್ರ, ರಾಜ್ಯದ ಬಿಜೆಪಿ ಸರಕಾರವು ಯಡಿಯೂರಪ್ಪ, ಬೊಮ್ಮಾಯಿ ಅವರ ನೇತೃತ್ವದಲ್ಲಿ ಡಬಲ್ ಎಂಜಿನ್ ಸರಕಾರಗಳು ಗಮನಾರ್ಹ ಸಾಧನೆ ಮಾಡಿವೆ. ಅದನ್ನು ಜನರಿಗೆ ತಿಳಿಸಲು ತೆರಳಿದ್ದ 4 ಯಾತ್ರೆಗಳು ಜನಮನ್ನಣೆ ಪಡೆದಿವೆ. ಬಿಜೆಪಿಗೆ ಅಭೂತಪೂರ್ವ ಜಯಭೇರಿ ಖಚಿತವಾಗಿದೆ ಎಂದರು.
ಸಾಮಾಜಿಕ ನ್ಯಾಯ ನೀಡುವ ಕೆಲಸವನ್ನು ಬೊಮ್ಮಾಯಿಯವರ ಸರಕಾರ ನಿನ್ನೆ ಮಾಡಿದೆ ಎಂದು ಅಭಿನಂದನೆ ಸಲ್ಲಿಸಿದರು. ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚು ಅನುದಾನ ಕೊಟ್ಟ ಪ್ರಧಾನಿಯವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಬಿಜೆಪಿ 150 ಸ್ಥಾನ ಪಡೆಯಲಿದೆ ಎಂದು ತಿಳಿಸಿದರು.
ಹಿರಿಯ ನಾಯಕ- ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲು ಬೆಂಬಲ ನೀಡಿ ಎಂದು ಮನವಿ ಮಾಡಿದರು. ಇನ್ನು ಎರಡು ತಿಂಗಳು ಬಿಜೆಪಿಯನ್ನು ಸಂಪೂರ್ಣ ಬಹುಮತದ ಜೊತೆ ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಚುನಾವಣೆಯಲ್ಲಿ ಗೆಲ್ಲುವವರೆಗೆ ಮನೆ ಸೇರುವುದಿಲ್ಲ ಎಂದು ತಿಳಿಸಿದರು.
ಹಣ, ತೋಳಬಲ, ಹೆಂಡದ ಬಲದಿಂದ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ಸಿಗರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಮೋದಿಜಿ- ರಾಜ್ಯ ಸರಕಾರದ ಸಾಧನೆಯನ್ನು ತಿಳಿಸಿ ಜನರ ಮನವನ್ನು ಗೆಲ್ಲಬೇಕು ಎಂದು ತಿಳಿಸಿದರು. ವಿಜಯ ಯಾತ್ರೆಯ ಆರಂಭವಿದು ಎಂದು ವಿಶ್ಲೇಷಣೆ ಮಾಡಿದರು. ವಿರೋಧ ಪಕ್ಷದ ನಾಯಕರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ವಿದ್ಯಾನಿಧಿ, ರೈತ ಶಕ್ತಿ ಯೋಜನೆ, ಶೂನ್ಯ ಸಾಲದ ಮೊತ್ತ ಹೆಚ್ಚಳ ಮಾಡಿದ್ದೇವೆ. ರೈತಪರ, ಯುವಜನರ ಪರ, ಮಹಿಳೆಯರಿಗೆ ಸ್ತ್ರೀಸಾಮಥ್ರ್ಯ ಯೋಜನೆ ಸೇರಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ವಿವರಿಸಿದರು. ಕರ್ನಾಟಕವನ್ನು ಸಮರ್ಥವಾಗಿ ಅಭಿವೃದ್ಧಿ ಪರವಾಗಿ ಕಟ್ಟಲು ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಜನಪರ- ಜನಕಲ್ಯಾಣ ಇರುವ ಬಿಜೆಪಿ ಸರಕಾರದ ಸಂಕೇತ ಇಲ್ಲಿ ಕಾಣುತ್ತಿದೆ. ಪಾಕಿಸ್ತಾನದ ಜನರೂ ಮೋದಿಜಿ ಅವರ ನಾಯಕತ್ವ ಬಯಸುತ್ತಿದೆ. ಚೀನಾದ ಪತ್ರಿಕೆಗಳೂ ಇದನ್ನೇ ಹೇಳುತ್ತಿವೆ. ಆದರೆ, ಕಾಂಗ್ರೆಸ್ ನಾಯಕರು ಮೋದಿಜಿ ಕುರಿತು ಹೀಗಳೆಯುವ, ಪ್ರಜಾಪ್ರಭುತ್ವವನ್ನು ಅವಹೇಳನ ಮಾಡುತ್ತಿದ್ದಾರೆ. ದೇಶದ್ರೋಹಿಗಳ ನಾಯಕತ್ವ ನಮಗೆ ಬೇಕೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿಗರಿಗೆ ದೇಶದ ಕಾಳಜಿ, ಗೌರವ ಇಲ್ಲ. ನಮ್ಮ ಕೇಂದ್ರ ಸರಕಾರ ಹಿಂದಿನ ಸರಕಾರಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚು ಅನುದಾನ ಸಿಕ್ಕಿದೆ ಎಂದು ತಿಳಿಸಿದರು. ಹೈವೇ, ರೈಲ್ವೆ, ಅಪ್ಪರ್ ಭದ್ರಾ ಯೋಜನೆ ಸೇರಿ ಅನೇಕ ಯೋಜನೆಗಳಿಗೆ ನಮ್ಮ ಕೇಂದ್ರ ಸರಕಾರ ಹೆಚ್ಚು ಅನುದಾನ ನೀಡಿದೆ ಎಂದು ವಿವರಿಸಿದರು.
ಮೋದಿಜಿ ಅವರ ನಾಯಕತ್ವಕ್ಕೆ ಅಮೇರಿಕವೂ ತಲೆ ಬಾಗುತ್ತಿದೆ. ದೇಶದ ಅಮೃತ ಕಾಲವನ್ನಾಗಿ ಮಾಡುವ ಶಕ್ತಿ ಮೋದಿಜಿ ಅವರಿಗೆ ಇದೆ ಎಂದು ತಿಳಿಸಿದರು. ಬಿಜೆಪಿ ಶಕ್ತಿ, ದಿಗ್ವಿಜಯದ ಸಂಕೇತದಂತೆ ಈ ಬೃಹತ್ ಸಮಾವೇಶ ಕಾಣುತ್ತಿದೆ. ಇಲ್ಲಿ ಬಿಜೆಪಿ ಸುನಾಮಿ ಎದ್ದಿದೆ ಎಂದು ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ಲಭಿಸಲು ಮೋದಿಜಿ ಅವರು ಕಾರಣ. ಜಲಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ನಳ್ಳಿನೀರು ಸಿಗುವಂತಾಗುತ್ತಿದೆ. ಇದು ಜಲಕ್ರಾಂತಿಯ ದೊಡ್ಡ ಸಾಹಸ. ನಾವು ನುಡಿದಂತೆ ನಡೆಯುತ್ತಿದ್ದೇವೆ. ಇದನ್ನು ಗಮನಿಸಿ ಬಿಜೆಪಿಯನ್ನು ಗೆಲ್ಲಿಸಿ ಎಂದು ವಿನಂತಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್, ಕೇಂದ್ರ- ರಾಜ್ಯದ ಸಚಿವರು, ರಾಜ್ಯ, ಜಿಲ್ಲೆಯ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.























































