ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರ ದುಪ್ಪಟ್ಟಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ (ಕೆಎಸ್ಸಿಎ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಬೆಳವಣಿಗೆ ಅಚ್ಚರಿಗೆ ಕಾರಣವಾಗಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ (ಕೆಎಸ್ಸಿಎ) ಅಧ್ಯಕ್ಷ ಆರ್. ಮಂಜುನಾಥ್ ಮತ್ತು ಜಿ.ಎಂ. ರವೀಂದ್ರ ಅವರು ಸಹಿ ಮಾಡಿದ ಪತ್ರದಲ್ಲಿ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಯಾವುದೇ ಲಂಚ ಇರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಳಿ ಹೇಳಿಕೊಂಡಿದ್ದಾರೆ.
ನಿರ್ಮಿತಿ ಕೇಂದ್ರಗಳು ಮತ್ತು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಆರ್ಐಡಿಎಲ್) ಅಡಿಯಲ್ಲಿರುವ ಯೋಜನೆಗಳನ್ನು ಶಾಸಕರು ಮತ್ತು ಸಚಿವರ ಅನುಯಾಯಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಅವರು ಯೋಜನೆಗಳನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸುತ್ತಾರೆ ಮತ್ತು ಲಂಚ ಪಡೆಯಬೇಕೆಂದು ಒತ್ತಾಯಿಸುತ್ತಾರೆ ಎಂದು ಪಾತ್ರದಲ್ಲಿ ಆರೋಪಿಸಲಾಗಿದೆ.
“ಯೋಜನೆಗಳನ್ನು ನಮಗೆ ಉಪಗುತ್ತಿಗೆ ನೀಡಿದಾಗ ಕೆಲಸದ ಗುಣಮಟ್ಟವನ್ನು ಖಚಿತಪಡಿಸುವುದು ಕಷ್ಟ” ಎಂದು ಪತ್ರದಲ್ಲಿ ಗಮನಸೆಳೆಯಲಾಗಿದೆ. “ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟವು ಪಾತ್ರ ವಹಿಸಿತ್ತು ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತೇವೆ” ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಗುತ್ತಿಗೆದಾರರು, ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘವು ಶೇ. 40 ರಷ್ಟು ಕಮಿಷನ್ ಆರೋಪಗಳನ್ನು ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಆಗ ಪ್ರಧಾನಿ ನರೇಂದ್ರ ಮೋದಿಗೆ ಕೆಎಸ್ಸಿಎ ಪತ್ರವನ್ನೂ ಬರೆದಿತ್ತು. ಬಿಜೆಪಿ ವಿರುದ್ಧದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ಶೇ. 40 ರಷ್ಟು ಕಮಿಷನ್ ಅನ್ನು ಮುಖ್ಯ ಕಾರ್ಯಸೂಚಿಯನ್ನಾಗಿ ಮಾಡಿತ್ತು ಎಂದು ನೆನಪಿಸಿದೆ.
32,000 ಕೋಟಿ ರೂ. ಮೊತ್ತದ ಬಾಕಿ ಬಿಲ್ಗಳ ಕುರಿತು ಬೆಳಕು ಚೆಲ್ಲಿರುವ ಪತ್ರವು, “ಪ್ರತಿ ಬಾರಿ ನೀವು (ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ) ನಮಗೆ ಭರವಸೆ ನೀಡಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ನಿರ್ದೇಶಿಸುತ್ತೀರಿ. ನಿಮ್ಮ ಮೇಲಿನ ನಮ್ಮ ಗೌರವದಿಂದ, ನೀವು ನಮ್ಮ ಸಮಸ್ಯೆಯನ್ನು ಪರಿಹರಿಸುತ್ತೀರಿ ಎಂಬ ಭರವಸೆಯೊಂದಿಗೆ ನಾವು ತಾಳ್ಮೆಯಿಂದ ಇದ್ದೇವೆ. ಆದರೆ, ಇಲ್ಲಿಯವರೆಗೆ, ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ” ಎಂಬ ಅಸಮಾಧಾನವನ್ನು ಬಿಚ್ಚಿಟ್ಟಿದ್ದಾರೆ.
ಬಿಲ್ಗಳ ಕ್ಲಿಯರೆನ್ಸ್ ವಿಷಯಕ್ಕೆ ಬಂದಾಗ, ಇಲಾಖೆಗಳು ಹಿರಿತನವನ್ನು ಅನುಸರಿಸುತ್ತಿಲ್ಲ. ಬಾಕಿ ಬಿಲ್ಗಳಲ್ಲಿ ಕೇವಲ ಶೇ. 15 ರಿಂದ 20 ರಷ್ಟು ಮಾತ್ರ ಮೂರು ತಿಂಗಳಿಗೊಮ್ಮೆ ಕ್ಲಿಯರ್ ಆಗುತ್ತವೆ. ಪೌರಾಡಳಿತ, ನಗರಾಭಿವೃದ್ಧಿ ಮತ್ತು ಕಾರ್ಮಿಕ ಇಲಾಖೆಗಳು ಭ್ರಷ್ಟ ಟೆಂಡರ್ ಪದ್ಧತಿಗಳಲ್ಲಿ ತೊಡಗಿವೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಗುತ್ತಿಗೆಗಳನ್ನು ತಮ್ಮ ಪ್ರಬಲ ಗುತ್ತಿಗೆದಾರರಿಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಟೆಂಡರ್ಗಳನ್ನು ಪ್ಯಾಕೇಜ್ಗಳಾಗಿ ಪರಿವರ್ತಿಸುತ್ತಿದ್ದಾರೆ ಮತ್ತು ಸಂಬಂಧಪಟ್ಟ ಮಂತ್ರಿಗಳು ಅದನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಗಮನಾರ್ಹ.
ರಾಜ್ಯ ಗುತ್ತಿಗೆದಾರರ ಸಂಘದ ಈ ಪತ್ರವು ರಾಜ್ಯ ರಾಜಕಾರಣದಲ್ಲಿ ಸಂಘರ್ಷ ಹುಟ್ಟುಹಾಕುವಂತಿದೆ.



























































