‘ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಹುಬ್ಬಳ್ಳಿಯ ಬಿವಿಬಿ ಕಾಲೇಜು.. ಅಕ್ಷರಶಃ ವಿದ್ಯಾರ್ಥಿಗಳಾದ ಸಿ.ಎಂ.ಬೊಮ್ಮಯಿ, ಸಚಿವ ನಿರಾಣಿ.. ಹಳೆಯ ನೆನಪುಗಳನ್ನು ಹಂಚಿಕೊಂಡ ಉಭಯ ನಾಯಕರು.. ಸರಳತೆಯ ಮೂಲಕ ಸಭಿಕರ ಹೃದಯ ಗೆದ್ದ ಸಚಿವದ್ವಯರು..
ಹುಬ್ಬಳ್ಳಿ: ಅದೊಂದು ಅಪರೂಪದ ಕ್ಷಣ.! ಅಲ್ಲಿ ಅಧಿಕಾರದ ಹಮ್ಮು- ಬಿಮ್ಮು, ದೊಡ್ಡವರು, ಚಿಕ್ಕವರು ಯಾವುದೂ ಇರಲಿಲ್ಲ. ಬದಲಿಗೆ ವಿಧೇಯಕ ವಿದ್ಯಾರ್ಥಿಗಳಂತೆ ಅವರೆಲ್ಲರೂ ಬೆರೆತರು. ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ ಪ್ರತಿಷ್ಠಿತ ಬಿವಿಬಿ ಎಂಜಿನಿಯರಿಂಗ್ ಕಾಲೇಜು. ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75ನೇ ವರ್ಷಾಚರಣೆ ಹಾಗೂ ಕೆಎಲ್ಇ ಟೆಕ್ ಪಾರ್ಕ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ.
ವಿಶೇಷತೆ ಎಂದರೆ ಈ ಇಬ್ಬರೂ ಇದೇ ಕಾಲೇಜಿನ ಸಹಪಾಠಿಗಳು. ಹಾಗಾಗಿಯೇ ಇಂದು ಅವರು ಉನ್ನತ ಸ್ಥಾನಮಾನದಲ್ಲಿದ್ದರೂ ತಾವು ಕಾಲೇಜಿನ ಹಳೆಯ ವಿದ್ಯಾರ್ಥಿಗಳು. ಸ್ನೇಹದ ಮುಂದೆ ಅಧಿಕಾರ ಗೌಣ ಎಂಬುದನ್ನು ಅಕ್ಷರಶಃ ತೋರಿಸಿಕೊಟ್ಟರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಾಲೇಜಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಪ್ರಾಧ್ಯಾಪಕರು, ಹಿರಿಯ-ಕಿರಿಯ ಸಹಪಾಠಿಗಳನ್ನು, ಹಾಜರಾಗದ ಪ್ರಯೋಗಾಲಯಗಳು, ಪುಸ್ತಕ ಪಡೆಯದ ಗ್ರಂಥಾಲಯಗಳು, ಹಾಸ್ಟೆಲು, ಕ್ಯಾಂಪಸ್, ಕ್ಯಾಂಟೀನ್ ಎಲ್ಲವನ್ನೂ ವಿನೋದವಾಗಿ ನೆನಪಿಸಿಕೊಂಡರು. ಹಿಂದೆ ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ವಿವಿ ಕುಲಪತಿಗಳಾಗಿದ್ದ ಡಾ.ಡಿ.ಎಂ.ನಂಜುಂಡಪ್ಪ ಅವರ ಕಾಠಿಣ್ಯ ಶಿಸ್ತು, ಬದ್ಧತೆಯಿಂದ ನಮ್ಮ ವ್ಯಾಸಂಗ ಪೂರ್ಣವಾಗಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.
ಕಾರ್ಯಕ್ರಮಕ್ಕೆ ಮತ್ತಷ್ಟು ಸೊಬಗು ತಂದವರು
ಸಚಿವ ಮುರುಗೇಶ್ ಆರ್. ನಿರಾಣಿ. ಇದೇ ಕಾಲೇಜಿನ ವಿದ್ಯಾರ್ಥಿಯಾಗಿ ಇಂದು ದೇಶದ ಹೆಮ್ಮೆಯ ಕೈಗಾರಿಕೋದ್ಯಮಿಯಾಗಿರುವ ಬೃಹತ್, ಮಧ್ಯಮ ಕೈಗಾರಿಕೆ ಸಚಿವರಾಗಿರುವ ಮುರುಗೇಶ್ ನಿರಾಣಿ ಅವರು ತಮ್ಮ ಕಾಲೇಜಿನ ಹಳೆಯ ದಿನಗಳನ್ನು ಮೆಲುಕು ಹಾಕಿದರು. ನಾನು ಇಂಜಿನಿಯರಿಂಗ್ನಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಂಡಿದ್ದರೆ ಪ್ರೊಫೆಸರ್ ಅಥವಾ ಹೆಚ್ಚೆಂದರೆ ಎಇಇ ಆಗುತ್ತಿದ್ದೆ. ಆದರೆ ನಾವು 35 ಮಾಕ್ಸ್ ಕೆಟಗೆರಿಯವರು. ಅದಕ್ಕೆ ಕೈಗಾರಿಕಾ ಸಚಿವನಾದೆ ಎಂದು ಹೇಳುತ್ತಿದ್ದಂತೆ ಸಭಿಕರಿಂದ ಜೋರಾದ ಚಪ್ಪಾಳೆಯ ಸುರಿಮಳೆಯಾಯಿತು. ಈ ಚಪ್ಪಾಳೆ ಸನ್ನಿವೇಶಕ್ಕೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ ನಿರಾಣಿ ಅವರು, ನಿಮ್ಮ ಚಪ್ಪಾಳೆ ನೋಡಿದರೆ ಇಲ್ಲಿ ನನ್ನ ಕೆಟಗರಿಯವರೇ ಬಹಳ ಜನ ಇದ್ದಾರೆಂದು ತಿಳಿಯುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಾನು ಈ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಬಹಳ ಖಯಷಿಯಾಗುತ್ತದೆ. ಪ್ರಧಾನಿ,ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೆನೆ. ಅದಕ್ಕಿಂದ ಖುಷಿ ಈ ಕಾರ್ಯಕ್ರಮ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿವಿಬಿ ಕಾಲೇಜು ಸಾಕಷ್ಟು ಜನ ಮೇಧಾವಿಗಳನ್ನು ನೀಡಿದೆ. ವಿಶ್ವದಲ್ಲೇ ಶ್ರೇಷ್ಠ ಐಟಿ ಕಂಪನಿಯಾದ ಇನ್ಫೋಸಿಸ್ನ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ, ಬಿಜೆಪಿಯ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ ಅವರುಗಳು ಈ ಕಾಲೇಜಿನ ವಿದ್ಯಾರ್ಥಿಗಳು ಎಂದು ಹೆಮ್ಮೆಯಿಂದ ಹೇಳಿದರು. ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಇಂದು ರಾಜ್ಯದ ಮುಖ್ಯಮಂತ್ರಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು, ತವರಿಗೆ ಬಂದಿರುವ ಸಂತಸದ ಭಾವನೆ ಮೂಡಿಸಿದೆ ಎಂದು ಭಾವುಕರಾದರು.
ಕೆಎಲ್ಇ ಸಪ್ತರ್ಷಿಗಳ ಪ್ರಯತ್ನದಿಂದ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿಯಾಗಲು, ವಿಶೇಷವಾಗಿ ಮಹಿಳೆಯರು ತಾಂತ್ರಿಕ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. 3-4 ದಶಕಗಳ ಹಿಂದೆ ಕೇವಲ ಸುಮಾರು 500 ರಿಂದ 600 ವಿದ್ಯಾರ್ಥಿಗಳಿದ್ದ ಈ ಕಾಲೇಜು ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು.
ಇಲ್ಲಿ ಸುಮಾರು 6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಕೇವಲ ಉದ್ಯೋಗಿಗಳಾಗದೇ ಮತ್ತೊಬ್ಬರಿಗೆ ಕೆಲಸ ನೀಡುವ ಉದ್ಯಮಪತಿಗಳಾಗಲಿ ಎಂದು ಕರೆ ಕೊಟ್ಟರು. ಸರ್ಕಾರದ ಅನೇಕ ಪ್ರೋತ್ಸಾಹದಾಯಕ ಯೋಜನೆಗಳ ಪ್ರಯೋಜನ ಪಡೆಯಬೇಕು. ಅಕ್ಟೋಬರ್ 15ರಿಂದ ತಮ್ಮ ನಿರಾಣಿ ಸಮೂಹ ಸಂಸ್ಥೆಗಳ ಉದ್ಯಮ ಘಟಕಗಳು ಪುನರಾರಂಭ ಮಾಡಲಿವೆ.ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ಸ್ಫೂರ್ತಿ ಪಡೆಯಲಿ ಕರೆಕೊಟ್ಟರು.



























































