ಬೆಂಗಳೂರು: ಮುಂದಿನ 50 ದಿನಗಳ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಅನಂತರ ಕಾಂಗ್ರೆಸ್ಗೆ ಅವಕಾಶ ಹೆಚ್ಚಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಹಾಗೂ ಬೀದರ್ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಮುಕ್ತಾಯಗೊಳಿಸಿದ್ದೇವೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಎರಡು ಪಟ್ಟು ಜನರು ನಮ್ಮ ಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ನೀಡಿದ್ದಾರೆ. ಜನರ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಪರಿಹಾರಕ್ಕೆ ಕಾಂಗ್ರೆಸ್ ಸರ್ಕಾರ ತರಲು ಜನರು ತೀರ್ಮಾನಿಸಿದ್ದಾರೆ. ಹಾಸನ ಮತ್ತು ಮಂಡ್ಯದಲ್ಲಿ ನಮ್ಮ ಪಕ್ಷದ ಒಬ್ಬರೂ ಶಾಸಕರು ಇಲ್ಲದಿದ್ದರೂ ನಮ್ಮ ನಿರೀಕ್ಷೆಗೂ ಮೀರಿದ ಜನ ಸೇರಿದ್ದರು ಎಂದರು.
ಮುಂದಿನ 50 ದಿನಗಳ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ನಾವು ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿ ಎರಡು ಮೂರು ಸಮೀಕ್ಷೆ ಮಾಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವು ಮುಂದಿನ ಚುನಾವಣೆಯಲ್ಲಿ 136 ಸೀಟು ಪಕ್ಕಾ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದವರು ತಿಳಿಸಿದರು.
ಟಿಕೆಟ್ ಹಂಚಿಕೆ ವಿಚಾರವಾಗಿ ಗುರುವಾರ ನಡೆದ ಸಭೆ ಮಾಹಿತಿ ನೀಡಿದ ಡಿಕೆಶಿ, ‘ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಲಿದೆ ಎಂದು ಅನೇಕರು ಹೇಳುತ್ತಿದ್ದರು. ಆದರೆ ಒಂದೇ ಒಂದು ಅಪಸ್ವರವಿಲ್ಲದೆ ಸಭೆ ನಡೆಯಿತು. ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಪಟ್ಟಿಯನ್ನು ಸ್ಕ್ರೀನಿಂಗ್ ಕಮಿಟಿಗೆ ನೀಡುತ್ತೇವೆ. ನಂತರ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಅದನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಮಾಡಲಿದೆ’ ಎಂದರು.
ಪ್ರಣಾಳಿಕೆ ವಿಚಾರವಾಗಿ ಸಮಿತಿಯ ಅಧ್ಯಕ್ಷ ಪರಮೇಶ್ವರ ಅವರು ಅಸಮಾಧಾನ ಹೊಂದಿದ್ದಾರಂತೆ ಎಂಬ ಪ್ರಶ್ನೆಗೆ, ‘ಇಂತಹ ಯಾವುದೇ ಅಸಮಾಧಾನವಿಲ್ಲ. ಪರಮೇಶ್ವರ ಅವರು ಪಕ್ಷಕ್ಕೆ ದೊಡ್ಡ ಆಸ್ತಿ. ರಾಜ್ಯದ ಇತಿಹಾಸದಲ್ಲಿ ಸುದೀರ್ಘ ಕಾಲ ಪಕ್ಷದ ಅಧ್ಯಕ್ಷರಾಗಿದ್ದವರು. ಸುರ್ಜೆವಾಲ ಅವರು ಅವರ ಜತೆ ಸಭೆ ಮಾಡಿದ್ದಾರೆ. ನಾನು ಆ ಸಭೆಗೆ ಹೋಗಲು ಆಗಿಲ್ಲ. ಬೆಂಗಳೂರು ಬಗ್ಗೆ ವಿಶೇಷ ಚಿಂತನೆ ಮಾಡಬೇಕಿದ್ದು, ಪರಮೇಶ್ವರ ಅವರ ನೇತೃತ್ವದ ತಂಡ ವಿದೇಶಕ್ಕೆ ತೆರಳಿ, ಸಂಚಾರ ನಿರ್ವಹಣೆ ಕುರಿತು ಅಧ್ಯಯನ ಮಾಡಲಿದೆ. ನಾವು ಈಗಾಗಲೇ ಸಿಂಗಾಪುರದ ಜತೆ ಮಾತುಕತೆ ನಡೆಸಿದ್ದೇವೆ. ತಂಡ ರಚನೆ ಬಗ್ಗೆ ಚರ್ಚೆ ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ಪ್ರಣಾಳಿಕೆ ನೀಡುವಾಗ ಬೆಂಗಳೂರಿಗೆ ಬಂದಿರುವ ಕಳಂಕ ತೊಡೆದುಹಾಕುವ ಪ್ರಯತ್ನ ಮಾಡುತ್ತೇವೆ. ಭಾರತ ಕರ್ನಾಟಕದ ಮೇಲೆ ಅವಲಂಬಿತವಾಗಿದ್ದು, ಬೆಂಗಳೂರಿನಲ್ಲಿ 1.50 ಕೋಟಿ ಜನಸಂಖ್ಯೆ ಇದ್ದು, ಇಲ್ಲಿಂದ ಹೆಚ್ಚಿನ ಆದಾಯ ಬರುತ್ತಿದೆ. ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಆಗ ಗ್ರಾಮೀಣ ಪ್ರದೇಶದ ಭಾಗಗಳ ಅಭಿವೃದ್ಧಿಗೆ ಯೋಜನೆ ರೂಪಿಸಬಹುದು. ಈ ಎಲ್ಲ ವಿಚಾರವಾಗಿ ಚರ್ಚೆ ಮಾಡಲು ಸುರ್ಜೆವಾಲ ಅವರು ಪರಮೇಶ್ವರ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಹೇಗೆ ಪ್ರತಿ ಹಂತದಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ತರಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಜನ ಅನುಭವಿಸುತ್ತಿರುವ ಸಮಸ್ಯೆ ತಪ್ಪಿಸಲು ಎರಡು ಘೋಷಣೆಗಳನ್ನು ಈಗಾಗಲೇ ಮಾಡಿದ್ದೇವೆ. ಇದರಿಂದ ರಾಜ್ಯಕ್ಕೆ ಆರ್ಥಿಕ ಹೊರೆ ಬೀಳುತ್ತದೆ ನಿಜ. ಆದರೆ ನಾವು ಇರುವುದು ಜನರ ಸೇವೆಗಾಗಿ ಅಲ್ಲವೇ? ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಸಿದ್ದರಾಮಯ್ಯ ಅವರು 13 ಬಜೆಟ್ ಮಂಡನೆ ಮಾಡಿದ್ದಾರೆ. ನಾನು 16 ವರ್ಷಗಳ ಕಾಲ ಸರ್ಕಾರದ ಭಾಗವಾಗಿದ್ದು, ಹೇಗೆ ಸಂಪನ್ಮೂಲ ಕ್ರೂಢೀಕರಣ ಮಾಡಬೇಕು ಎಂಬ ಅರಿವು ಇದೆ. ಇದರ ಆಧಾರದ ಮೇಲೆ ನಾವು ಯೋಜನೆಗಳನ್ನು ರೂಪಿಸಿದ್ದೇವೆ. ಮುಂದಿನ 50 ದಿನಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬರಲಿದೆ. ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ’ ಎಂದು ತಿಳಿಸಿದರು.