ಬೆಂಗಳೂರು: ಕಾಂಗ್ರೆಸ್ ಅಳಿವಿನ ಅಂಚಿನಲ್ಲಿದೆ ಅದಕ್ಕಾಗಿ ರಾಹುಲ್ ಗಾಂಧಿ ಹೊಸ ಹೊಸ ಪ್ರಯೋಗವನ್ನು ಮಾಡುತ್ತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ ಆದ್ರೆ, ಸುರಕ್ಷತೆಯ ದೃಷ್ಟಿಯಿಂದ ನಮ್ಮ ಸರ್ಕಾರದಿಂದ ಭದ್ರತೆಯನ್ನು ಕೊಡುತ್ತವೆ ಎಂದರು.

ಗುಂಡ್ಲುಪೇಟೆಯಲ್ಲಿ ಬ್ಯಾನರ್ ಹರಿದು ಹಾಕಿದ್ದನ್ನ ಅವರೇ ಆತ್ಮವಲೋಕನ ಮಾಡಿಕೊಳ್ಳಲಿ, ಕನ್ನಡದಲ್ಲಿ ಬ್ಯಾನರ್ ಹಾಕದ ಹಿನ್ನೆಲೆ ಕನ್ನಡಾಭಿಮಾನಿಗಳು ಹಾಗೇ ಮಾಡಿರಬೇಕು, ಮಾತೃ ಭಾಷೆ ಅಂದ್ರೆ ಎಲ್ಲಾರಿಗೂ ಅಭಿಮಾನ ಇರುತ್ತದೆ ಅದಕ್ಕಾಗಿ ಹಾಗೇ ಮಾಡಿರ್ಬಹುದು. ಸ್ಥಳೀಯ ಜನರ ಭಾವನೆಗಳಿಗೆ ಧಕ್ಕೆ ತರದ ರೀತಿಯಲ್ಲಿ ಕಾರ್ಯಕ್ರಮ ಮಾಡ್ಬೇಕು. ಕಾಂಗ್ರೆಸ್ ನವರಿಗೆ ಬಿಜೆಪಿಯನ್ನ ದೂರುವುದು ಬಿಟ್ಟರೆ ಬೇರೆ ಉದ್ಯೋಗ ಇಲ್ಲ. 60 ವರ್ಷದ ಸಾಧನೆ ಹೇಳಿಕೊಳ್ಳಲು ಇಲ್ಲದ ಕಾರಣ ದೂರುತ್ತಾರೆ. ಇನ್ನೂ ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಯಾವುದೇ ಎಫೆಕ್ಟ್ ಆಗಲು ಸಾಧ್ಯವಿಲ್ಲ. ಮೋದಿಯವರನ್ನ ಕಟ್ಟಿ ಹಾಕಲು ರಾಹುಲ್ ಗಾಂಧಿ ಸರಿ ಸಮಾನವಾದ ನಾಯಕರಲ್ಲ. ಇವರ ಪಾದಯಾತ್ರೆಗೆ ಬಂದವರೆಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲ, ಏನು ಮಾತನಾಡುತ್ತಾರೆ ಎಂದ ನೋಡಲು ಬಂದವರು, ಬಂದವರೆಲ್ಲಾ ಕಾಂಗ್ರೆಸ್ ಮತಗಳಲ್ಲ. ೬ ತಿಂಗಳ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಪೊಲೀಸರಿಗೆ ಸಿದ್ದರಾಮಯ್ಯ ಎಚ್ಚರಿಕೆ ಕೊಡಿದ್ದಾರೆ. ಸಿದ್ದರಾಮಯ್ಯ ಮಾತ್ರ ಅಲ್ಲ, ರಾಜ್ಯಾದ್ಯಂತ ಪುಡಿ ರೌಡಿ ಗಳು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬರಲ್ಲ, ಬರುವಂತಹ ಕೆಲಸವನ್ನ ಅವರು ಮಾಡಿಲ್ಲ ಎಂದರು.
ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಎಣ್ಣೆ ಸೀಗೇಕಾಯಿ ಇದ್ದಂತೆ. ಎಣ್ಣೆ, ಸೀಗೇಕಾಯಿ ಸೇರಲು ಸಾಧ್ಯವಿಲ್ಲ, ಅವರನ್ನ ಬೇರೆಯವರು ಸೇರಿಸಲು ನೋಡ್ತಾರೆ. ನಮ್ಮ ಉತ್ತರ ಕರ್ನಾಟಕದ ಕಡೆ ಒಂದು ಮಾತಿದೆ 36 ಅಂಕಿ ಅಂತ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅಂದ್ರೆ 36. 36 ಅಂದ್ರೆ ಎರಡು ಮುಖ ಸೇರಲು ಸಾಧ್ಯವಿಲ್ಲ. ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಒಂದೇ ಕುರ್ಚಿಯಲ್ಲಿ ಇಬ್ಬರು ಕೂರಲು ಸಾಧ್ಯವಿಲ್ಲ. ಇಬ್ಬರ ಸಿದ್ದಾಂತವೂ ಬೇರೆ ಬೇರೆ ಎಂದರು.
ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮೋಸ ಮಾಡಿದೆ:
ಹನ್ನೊಂದು ಬಾರಿ ಗೆದ್ರೂ ಅವರನ್ನ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಕಾಂಗ್ರೆಸ್ ಮುಳುಗುವ ಹಡಗು, ಅವಸಾನದ ಅಂಚಿನಲ್ಲಿ ಕಾಂಗ್ರೆಸ್ ಇದೆ. ಖರ್ಗೆಯವರನ್ನ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ರು, ಇದರಿಂದ ದಲಿತರಿಗೆ ಸಮಾಧಾನವೂ ತರಲ್ಲ, ಖುಷಿಯೂ ತರಲ್ಲ. ಕಾಂಗ್ರೆಸ್ ಗೆ ದಲಿತರ ಮೇಲೆ ಕಾಳಜಿ ಇಲ್ಲ. ಈಗಲಾದ್ರೂ ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಘೋಷಣೆ ಮಾಡಲಿ ಎಂದು ನಾನು ಕಾಂಗ್ರೆಸ್ ಗೆ ಸವಾಲು ಹಾಕುತ್ತೇನೆ.
ದಲಿತ ವೋಟ್ ಮೇಲೆ ಕಾಂಗ್ರೆಸ್ 60 ವರ್ಷ ಆಳ್ವಿಕೆ ಮಾಡಿದೆ. ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿದ ಮೇಲೆ ನಮ್ಮ ಜನ ಬಿಜೆಪಿ ಕಡೆ ಬರುತ್ತಿದ್ದಾರೆ.
ಈಗ ದಲಿತ ಸಮುದಾಯ ಕಾಂಗ್ರೆಸ್ ನಂಬಲು ಸಾಧ್ಯವಿಲ್ಲ ಎಂದರು.


















































