ಬೆಂಗಳೂರು: ರಾಜ್ಯ ಸರ್ಕಾರ ಕ್ರಿಶ್ಚಿಯನ್ ಧರ್ಮದ ಆಚರಣೆಗೆ ಅಡ್ಡಿಯಾಗುತ್ತಿರುವ ಬಗ್ಗೆ ಸಮುದಾಯದ ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ಏಸು ಕ್ರಿಸ್ತನ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲು ಅಡ್ಡಿಯಾಗಿರುವ ರಾಜ್ಯ ಸರ್ಕಾರ ಅಘೋಷಿತ ನಿರ್ಬಂಧವನ್ನು ತೆಗೆದು ಹಾಕಬೇಕೆಂದು ಕ್ರೈಸ್ತ ಸಂಘಟನೆಗಳ ಮುಖಂಡರು ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕ್ರಿಸ್ಮಸ್ ಸಂದರ್ಭದ ಸಾಂಪ್ರದಾಯಿಕ ಪ್ರಾರ್ಥನೆಯನ್ನು 24ರ ಮಧ್ಯರಾತ್ರಿಯಿಂದಲೇ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಈ ಆಚರಣೆಗೆ ಅಘೋಷಿತ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರರೂ ಆಗಿರುವ ಪತ್ರಕರ್ತ ಆಲ್ವಿನ್ ಮೆಂಡೋನ್ಸ ಅವರು ಸಿಎಂ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದ ಬೆನ್ನಲ್ಲೇ ಕ್ರೈಸ್ತ ಸಮುದಾಯದ ಪ್ರಬಲ ಸಂಘಟನೆಯಾಗಿರುವ ‘ಕ್ರಿಶ್ಚಿಯನ್ ಸೇವಾ ಸಂಘ’ದ ಅಧ್ಯಕ್ಷ ಶಾಜಿ ಟಿ.ವರ್ಗೀಸ್ ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.

ಶಾಜಿ ಟಿ.ವರ್ಗೀಸ್ ಅವರ ಪತ್ರದ ಹೈಲೈಟ್ಸ್ ಹೀಗಿದೆ:
- ರಾಜ್ಯದ ಎಲ್ಲಾ ಚರ್ಚ್ಗಳಲ್ಲಿ ಮಧ್ಯರಾತ್ರಿ ಕ್ರಿಸ್ಮಸ್ ಆಚರಣೆಗೆ ಅವಕಾಶ ನೀಡಬೇಕು..
- ಕ್ರಿಶ್ಚಿಯನ್ ಸಮುದಾಯವನ್ನು ಸತತ ಸರ್ಕಾರಗಳು ವಿವಿಧ ರೀತಿಯಲ್ಲಿ ನಿರ್ಲಕ್ಷಿಸಿರುವುದು ಸರಿಯಲ್ಲ.
- ಕ್ರಿಶ್ಚಿಯನ್ನರು ಕರ್ನಾಟಕದಲ್ಲಿ 3% ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದೇವೆ, ಅವರನ್ನು ಯಾವಾಗಲೂ ಪಕ್ಕಕ್ಕೆ ಇಡಲಾಗಿದೆ ಏಕೆಂದರೆ ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶಿಷ್ಟ ಲಕ್ಷಣವಾಗಿದೆ.
- ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಕ್ರೈಸ್ತ ಸಮುದಾಯವನ್ನು ಸಿದ್ದರಾಮಯ್ಯ ಸರ್ಕಾರ ಮರೆತಿದೆ.
- ಕ್ರಿಸ್ಮಸ್ ಹಬ್ಬವು ಪ್ರಭು ಯೇಸುಕ್ರಿಸ್ತರ ಜನ್ಮದಿನವನ್ನು ಆಚರಿಸುವ ಮೂಲಕ ಶಾಂತಿಯ ಸಂದೇಶದೊಂದಿಗೆ ಜಾಗತಿಕವಾಗಿ ಆಚರಿಸಲಾಗುವ ಹಬ್ಬವಾಗಿದೆ,
- ಪ್ರಪಂಚದಾದ್ಯಂತ ಪ್ರತಿವರ್ಷ ಡಿಸೆಂಬರ್ 24 ರಂದು ಆಚರಿಸುತರುವ ಮಧ್ಯರಾತ್ರಿಯ ಮಾಸ್ ಕಲಾಪಕ್ಕೆ ರಾಜ್ಯದಲ್ಲಿ ಅವಕಾಶ ನೀಡಬೇಕು.
- ಇದು ನಮ್ಮ ರಾಜ್ಯದಲ್ಲಿ ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾಡಳಿತ ಭದ್ರತೆಯ ನೆಪದಲ್ಲಿ ಕ್ರಿಸ್ಮಸ್ ಹಿನ್ನೆಲೆಯ ರಾತ್ರಿ ಮಾಸ್ಗೆ ಅವಕಾಶ ನೀಡುತ್ತಿಲ್ಲ.
- ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಚರ್ಚ್ಗಳಲ್ಲಿ ರಾತ್ರಿಯಿಡೀ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದವು.
- ಡಿಸೆಂಬರ್ 24ರ ಮಧ್ಯರಾತ್ರಿ ಅಂದರೆ ಡಿಸೆಂಬರ್ 25ರ ಆರಂಭದಲ್ಲಿ ಕ್ರಿಶ್ಚಿಯನ್ ಸಮುದಾಯವು ಅನುಸರಿಸಿದ ಪ್ರಾಚೀನ ಸಂಪ್ರದಾಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ.
- ಈ ಮಧ್ಯರಾತ್ರಿಯ ಮಾಸ್ಗೆ ಆಚರಣೆಗೆ ಅವಕಾಶ ನೀಡದ ಕ್ರಮ ಕ್ರಿಶ್ಚಿಯನ್ ಸಮುದಾಯದ ಬಗೆಗಿನ ತಾರತಮ್ಯ ಕೃತ್ಯವಲ್ಲದೆ ಬೇರೇನೂ ಅಲ್ಲ
- ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಮಧ್ಯರಾತ್ರಿಯ ಮಾಸ್ ಆಚರಣೆಯ ಸಂಪ್ರದಾಯವನ್ನು ಮುಂದುವರಿಸಲು ಕ್ರೈಸ್ತ ಧರ್ಮೀಯರಿಗೆ ಅವಕಾಶ ನೀಡಬೇಕು.
























































