ಕೋಲ್ಕತ್ತಾ: ಪಿಎಂ ವಿಶ್ವಕರ್ಮ ಯೋಜನೆ ಮಹತ್ವದ ಮೈಲಿಗಲ್ಲು ತಲುಪಿದ್ದು, ಯೋಜನೆ ಆರಂಭಗೊಂಡು ಮೂರು ವರ್ಷಗಳಲ್ಲಿ 30 ಲಕ್ಷ ಫಲಾನುಭವಿಗಳು ಕಡ್ಡಾಯ ಮೂರು ಹಂತದ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿ ನೋಂದಣಿಯಾಗಿದ್ದಾರೆ.
ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ಕರಕುಶಲ ವೃತ್ತಿಪರರಿಗೆ ಬೆಂಬಲ ನೀಡುವ ಉದ್ದೇಶದಿಂದ ಜಾರಿಗೊಂಡಿರುವ ಯೋಜನೆಯಡಿ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ, ಕೌಶಲ್ಯಾಭಿವೃದ್ಧಿ ತರಬೇತಿ, ಉಪಕರಣಗಳ ಖರೀದಿಗೆ ಪ್ರೋತ್ಸಾಹಧನ, ರಿಯಾಯಿತಿ ಬಡ್ಡಿದರದಲ್ಲಿ ಸಾಲ, ಡಿಜಿಟಲ್ ವಹಿವಾಟಿಗೆ ಉತ್ತೇಜನ ಹಾಗೂ ಮಾರುಕಟ್ಟೆ ನೆರವು ಒದಗಿಸಲಾಗುತ್ತಿದೆ.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದ ಮೂಲಕ ಇದುವರೆಗೆ ಸುಮಾರು 24.50 ಲಕ್ಷ ವಿಶ್ವಕರ್ಮರಿಗೆ ಮೂಲ ಕೌಶಲ್ಯ ತರಬೇತಿ ನೀಡಲಾಗಿದೆ. ಸಾಲ ಸೌಲಭ್ಯದಡಿ 6.18 ಲಕ್ಷ ಫಲಾನುಭವಿಗಳಿಗೆ ತಲಾ ₹1 ಲಕ್ಷದವರೆಗೆ ಶೇ.5ರ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಒದಗಿಸಲಾಗಿದ್ದು, ಒಟ್ಟು ₹5,297 ಕೋಟಿ ಸಾಲ ನೆರವು ನೀಡಲಾಗಿದೆ.

ಇದೇ ವೇಳೆ, 18.15 ಲಕ್ಷ ಆಧುನಿಕ ಉಪಕರಣಗಳ ಕಿಟ್ಗಳನ್ನು ಇಂಡಿಯಾ ಪೋಸ್ಟ್ ಮೂಲಕ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸಲಾಗಿದೆ. ಸುಧಾರಿತ ಉಪಕರಣಗಳ ಬಳಕೆಯಿಂದ ಉತ್ಪನ್ನಗಳ ಗುಣಮಟ್ಟ ಹಾಗೂ ಉತ್ಪಾದಕತೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಪಶ್ಚಿಮ ಬಂಗಾಳದಲ್ಲೂ ಯೋಜನೆ
ಪಶ್ಚಿಮ ಬಂಗಾಳ ಸರ್ಕಾರವು 2026ರ ಮೇನಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ ಸೇರ್ಪಡೆಯಾಗಲು ನಿರ್ಧರಿಸಿತ್ತು. ಇದುವರೆಗೆ ರಾಜ್ಯದಲ್ಲಿ 3,000 ಫಲಾನುಭವಿಗಳು ಮೂರು ಹಂತದ ಪರಿಶೀಲನೆ ಪೂರ್ಣಗೊಳಿಸಿ ನೋಂದಣಿಯಾಗಿದ್ದಾರೆ. ನೋಂದಾಯಿತ ಫಲಾನುಭವಿಗಳಿಗೆ ಪ್ರಸ್ತುತ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.
ಕೋಲ್ಕತ್ತಾದಲ್ಲಿ ನಡೆಯಲಿರುವ ಯೋಜನೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಿಎಂ ವಿಶ್ವಕರ್ಮ ಪ್ರಮಾಣಪತ್ರ, ಮೂಲ ಕೌಶಲ್ಯ ತರಬೇತಿ ಪ್ರಮಾಣಪತ್ರ, ಸಾಲ ಪ್ರಮಾಣಪತ್ರ ಹಾಗೂ ಉಪಕರಣಗಳ ಕಿಟ್ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಕೌಶಲ್ಯಗಳು, ಕರಕುಶಲ ಉತ್ಪನ್ನಗಳು ಹಾಗೂ ಕುಶಲಕರ್ಮಿಗಳ ಉದ್ಯಮಶೀಲತಾ ಸಾಮರ್ಥ್ಯವನ್ನು ಪ್ರದರ್ಶಿಸಲಾಗುತ್ತದೆ. ಜತೆಗೆ, ಉತ್ಪನ್ನಗಳನ್ನು ವಿಶಾಲ ಮಾರುಕಟ್ಟೆಗೆ ಪರಿಚಯಿಸಲು ಅವಕಾಶ ಕಲ್ಪಿಸಲಾಗುತ್ತದೆ.






































































