ನವದೆಹಲಿ: ರೈತರಿಗೆ ಉತ್ತಮ ಬೆಲೆ ಒದಗಿಸುವ ಹಾಗೂ ಬೆಲೆ ಸ್ಥಿರೀಕರಣ ಬಫರ್ ಸಂಗ್ರಹವನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಬಫರ್ ಸ್ಟಾಕ್ಗಾಗಿ ಈರುಳ್ಳಿ ಖರೀದಿ ಬೆಲೆಯನ್ನು ಶೇ.13ರಷ್ಟು ಹೆಚ್ಚಿಸಿದೆ. ಜುಲೈ 4ರಿಂದ ಪ್ರತಿ ಕ್ವಿಂಟಾಲ್ಗೆ ₹1,875 ಇದ್ದ ಖರೀದಿ ದರವನ್ನು ₹2,125ಕ್ಕೆ ಏರಿಸಲಾಗಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ನಾಫೆಡ್ (NAFED) ಮತ್ತು ಎನ್ಸಿಸಿಎಫ್ (NCCF) ಮೂಲಕ ಈರುಳ್ಳಿ ಖರೀದಿ ಮುಂದುವರಿದಿದ್ದು, ಪರಿಷ್ಕೃತ ಬೆಲೆಯಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ.
2025-26ರ ಎರಡನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಈರುಳ್ಳಿ ಉತ್ಪಾದನೆ 307.37 ಲಕ್ಷ ಮೆಟ್ರಿಕ್ ಟನ್ ಎಂದು ಅಂದಾಜಿಸಲಾಗಿದ್ದು, ಕಳೆದ ವರ್ಷದ ಉತ್ಪಾದನೆಗೆ ಸಮನಾಗಿದೆ. ಹೀಗಾಗಿ ಒಟ್ಟಾರೆ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿದ್ದು, ದೇಶದ ವಿವಿಧ ಮಾರುಕಟ್ಟೆಗಳಿಗೆ ಪ್ರತಿದಿನ 50 ಸಾವಿರ ಮೆಟ್ರಿಕ್ ಟನ್ಗಿಂತ ಹೆಚ್ಚು ಈರುಳ್ಳಿ ಆಗಮಿಸುತ್ತಿದೆ. ಮಹಾರಾಷ್ಟ್ರದಿಂದ ಮಾತ್ರ 30 ಸಾವಿರ ಮೆಟ್ರಿಕ್ ಟನ್ಗಿಂತ ಹೆಚ್ಚು ಪೂರೈಕೆಯಾಗುತ್ತಿದ್ದು, ರೈತರಿಗೆ ಸರಾಸರಿ ಕೆಜಿಗೆ ₹18 ದರ ದೊರೆಯುತ್ತಿದೆ. ದೇಶದ ಸರಾಸರಿ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ ₹31ರಷ್ಟಿದೆ.
ಕೆಲವು ಪ್ರದೇಶಗಳಲ್ಲಿ ಮುಂಗಾರು ವಿಳಂಬದಿಂದ ಉಂಟಾದ ಊಹಾತ್ಮಕ ಖರೀದಿಯೇ ಬೆಲೆ ಏರಿಕೆಗೆ ಕಾರಣವಾಗಿದ್ದು, ಉತ್ತಮ ಗುಣಮಟ್ಟದ ದಾಸ್ತಾನು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿರುವುದರಿಂದ ಬೆಲೆ ಸ್ಥಿರವಾಗುವ ನಿರೀಕ್ಷೆಯಿದೆ ಎಂದು ಸಚಿವಾಲಯ ತಿಳಿಸಿದೆ.






































































