ನವದೆಹಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಜವಳಿ ಉದ್ಯಮ ಹಾಗೂ ಹತ್ತಿ ರೈತರ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದರು.
ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡ ವಿಡಿಯೊ ಸಂದೇಶದಲ್ಲಿ ಅವರು, “ಭಾರತದ ಜವಳಿ ವಲಯವು ಸುಮಾರು 5 ಕೋಟಿ ಕುಟುಂಬಗಳಿಗೆ ಉದ್ಯೋಗ ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿಕೊಂಡಿರುವ ಅಮೆರಿಕ ಒಪ್ಪಂದವು ಈ ವಲಯವನ್ನು ನಾಶಪಡಿಸುತ್ತದೆ” ಎಂದು ಹೇಳಿದರು.
ಒಪ್ಪಂದದಡಿ ಸುಂಕ ರಚನೆ ಭಾರತಕ್ಕೆ ಅನನುಕೂಲಕರವಾಗಿದೆ ಎಂದು ಅವರು ವಾದಿಸಿದರು. “ಬಾಂಗ್ಲಾದೇಶಕ್ಕೆ ಶೂನ್ಯ ಶೇಕಡಾ ಸುಂಕ, ಭಾರತಕ್ಕೆ 18 ಶೇಕಡಾ ಸುಂಕ ವಿಧಿಸಲಾಗುತ್ತಿದೆ. ಇದರಿಂದ ಬಾಂಗ್ಲಾದೇಶದ ಜವಳಿ ವಲಯಕ್ಕೆ ಲಾಭವಾಗುತ್ತದೆ” ಎಂದು ಹೇಳಿದರು.
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅಮೆರಿಕದ ಹತ್ತಿ ಆಮದು ಕುರಿತು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಗಾಂಧಿ, “ಅಮೆರಿಕ ಹತ್ತಿ ಆಮದು ಮಾಡಿದರೆ ಸಮಾನ ಪ್ರಯೋಜನ ಸಿಗುತ್ತದೆ ಎಂಬುದು ತಪ್ಪು. ನಮ್ಮ ಹತ್ತಿ ದೇಶೀಯ ಗಿರಣಿಗಳಿಗೆ ಅಗತ್ಯ. ಈ ಒಪ್ಪಂದದಿಂದ ಹತ್ತಿ ರೈತರೂ, ಜವಳಿ ಉದ್ಯಮವೂ ಸಂಕಷ್ಟಕ್ಕೆ ಸಿಲುಕಬಹುದು” ಎಂದು ಹೇಳಿದರು.
ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಗಾಂಧಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ಚರ್ಚೆಗೆ ಸವಾಲು ಹಾಕಿದರು. “ಹತ್ತಿ ಉತ್ಪಾದನೆ, ಆಮದು ಪ್ರಮಾಣ ಹಾಗೂ ಜವಳಿ ಗಿರಣಿಗಳ ಸ್ಥಿತಿ ಕುರಿತು ಯಾವುದೇ ವೇದಿಕೆಯಲ್ಲಿ ಚರ್ಚಿಸಲು ಸಿದ್ಧ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಒಪ್ಪಂದದ ಕುರಿತಾಗಿ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಜವಳಿ ವಲಯದ ಮೇಲೆ ಅದರ ಪರಿಣಾಮ ಕುರಿತು ಸರ್ಕಾರ ಹಾಗೂ ವಿರೋಧ ಪಕ್ಷದ ಮಧ್ಯೆ ಜಟಾಪಟಿ ಮುಂದುವರಿದಿದೆ.

























































