ಬೆಂಗಳೂರು: ಮಂಗಳೂರಿನಲ್ಲಿ ಮರ್ಸಿಡಿಸ್ ಬೆಂಜ್ ವಾಹನದ ತಾತ್ಕಾಲಿಕ ನೋಂದಣಿ ಪತ್ರದ ವಿತರಣೆ ಸಮಯದಲ್ಲಿ ನಡೆದ ಲೋಪದೋಷ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರನ್ನು ಅಮಾನತ್ತು ಮಾಡಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿರ್ದೇಶನ ನೀಡಿದ್ದಾರೆ. ಅದರಂತೆ ಮಂಗಳೂರು RTO ಕಚೇರಿಯ ಮೂವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಾರಿಗೆ ಸಚಿವರು ಸಂಬಂಧಪಟ್ಟವರ ಮೇಲೆ ಸೂಕ್ತ ಶಿಸ್ತಿನ ಕ್ರಮ ತೆಗೆದುಕೊಳ್ಳುವಂತೆ ಸಾರಿಗೆ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಅದರಂತೆ, ಈಪ್ರಕರಣದಲ್ಲಿ ಭಾಗಿಯಾಗಿದ್ದ ಮಂಗಳೂರಿನ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ನೀಲಪ್ಪ ಕೆ ಹೆಚ್, ಅಧೀಕ್ಷಕರಾದ ರೇಖಾ ನಾಯಕ್ ಹಾಗೂ ಕೇಂದ್ರ ಸ್ಥಾನಿಯ ಸಹಾಯಕರದ ಸರಸ್ವತಿ ಕೇಂದ್ರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಹಾಲ್ ಅಹಮದ್ ಎಂಬವರಿಗೆ ಸೇರಿದ ಮರ್ಸಿಡಿಸ್ ಬೆಂಜ್ ವಾಹನದ ತಾತ್ಕಾಲಿಕ ನೊಂದಣಿ ಸಂಬಂಧ KA51TR005155201617 ಅನ್ನು ರೂ.1,96,95,000 ಗಳಿಗೆ ನೀಡಲಾಗಿದೆ. ಆದರೆ ಈ ಮೌಲ್ಯವನ್ನು ರೂ. 32,15,000 ಗಳೆಂದು ಬದಲಾವಣೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ವಾಹನ ನೋಂದಣಿ ಸಮಯದಲ್ಲಿ ಕಡಿಮೆ ತೆರಿಗೆಯನ್ನು ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಹಿವಾಟಿನ ಹಿಂದೆ ಆರ್ಥಿಕ ದುರುಪಯೋಗದ ಹಿನ್ನೆಲೆಯಲ್ಲಿ ಸಾರಿಗೆ ಆಯುಕ್ತರು ಮತ್ತು ಶಿಸ್ತು ಪ್ರಾಧಿಕಾರಗಳಾದ ಆಯುಕ್ತರು ಮೇಲಿನ ಮೂವರನ್ನು ದಿನಾಂಕ ಜೂನ್ 26ರಂದು ಅಮಾನತ್ತಿನಲ್ಲಿರಿಸಿ ಆದೇಶಿಸಿದ್ದಾರೆ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.