ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಿವೃತ್ತ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತ ರೂ.224.05 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಈ ಹಣವನ್ನು ಸಾರಿಗೆ ಸಚಿವ.ರಾಮಲಿಂಗಾ ರೆಡ್ಡಿ ಅವರು ಹಸ್ತಾಂತರ ಮಾಡಿದ್ದಾರೆ.
2020 ರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನಿವೃತ್ತ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಹಣವನ್ನು 21.12.2024ರಂದು ಸಾರಿಗೆ ಮತ್ತು ಮುಜರಾಯಿ ಸಚಿವರು, ಕರಾರಸಾ ನಿಗಮದ ಕೇಂದ್ರ ಕಛೇರಿಯಲ್ಲಿ ಸಾಂಕೇತಿಕವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗ ರೆಡ್ಡಿ ಮೂವರು ಸಿಬ್ಬಂದಿಗೆ ಬಾಕಿ ಉಪಧನ ಹಾಗೂ ಗಳಿಕೆ ರಜೆ ನಗದೀಕರಣ ಮೊತ್ತದ ಚೆಕ್ ಅನ್ನು ವಿತರಿಸಿ, ʼನುಡಿದಂತೆ ನಡೆದಿದ್ದೇವೆ’ ಎಂಬುದನ್ನು ನಾವು ಮತ್ತೊಮ್ಮೆ ಸಾಬೀತುಪಡಿಸಿರುತ್ತೇವೆ ಎಂದು ತಿಳಿಸಿದರು.
ಈ ಹಿಂದೆ ನೌಕರರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಅವರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿ, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆಯಂತೆ, ನಾಲ್ಕು ಸಾರಿಗೆ ನಿಗಮಗಳ 1308 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಯ ಅಂತರ ನಿಗಮ ವರ್ಗಾವಣೆಯ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ ಎಂದೂ ಸಚಿವರು ತಿಳಿಸಿದರು.
ಎಲ್ಲಾ 11694 ನಿವೃತ್ತ ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತವನ್ನು ಅಧಿವೇಶನದ ನಂತರ ಬಿಡುಗಡೆಗೊಳಿಸುವುದಾಗಿ ನೀಡಿದ್ದ ಭರವಸೆಯಂತೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ ಎಂದು ವಿವರಿಸಿದರು.
ನಾಲ್ಕು ಸಾರಿಗೆ ನಿಗಮಗಳಲ್ಲಿ 01.01.2020 ರಿಂದ 28.02.2023 ರವರೆಗಿನ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತಿ ಹೊಂದಿರುವ ಸುಮಾರು 11,694 ಸಿಬ್ಬಂದಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತ ರೂ.224.05 ಕೋಟಿ ರೂಪಾಯಿಗಳನ್ನು 21.12.2024 ರಂದು ಎಲ್ಲಾ ನಾಲ್ಕು ನಿಯಮಗಳಲ್ಲಿ ಈ ಕೆಳಕಂಡಂತೆ ಪಾವತಿಸಲು ಕ್ರಮ ಜರುಗಿಸಲಾಗಿದೆ.
- ಕರಾರಸಾ ನಿಗಮ: 4711 ಸಿಬ್ಬಂದಿ-
86.55 ಕೋ.ರೂ. - ಬೆಂಮನಸಾ ಸಂಸ್ಥೆ: 1833 ಸಿಬ್ಬಂದಿ- 50.25 ಕೋ.ರೂ.
- ವಾಕರಸಾ ಸಂಸ್ಥೆ: 3116 ಸಿಬ್ಬಂದಿ- 51.50 ಕೋ.ರೂ.
- ಕಕರಸಾ ಸಂಸ್ಥೆ- 2034 ಸಿಬ್ಬಂದಿ- 35.75 ಕೋ.ರೂ.
ಒಟ್ಟು 11,694 ಸಿಬ್ಬಂದಿಯ ಮೊತ್ತ 224.05 ಕೋ.ರೂ.ಗಳನ್ನು RTGS ಹಾಗೂ ಚೆಕ್ ಮುಖಾಂತರ ವಿತರಿಸಲಾಗುತ್ತಿದೆ. ಕಾಲಕಾಲಕ್ಕೆ ಸಿಬ್ಬಂದಿಗಳಿಗೆ ನೀಡಬೇಕಾಗಿರುವ ಆರ್ಥಿಕ ಹಾಗೂ ಇತರೆ ಸೌಲಭ್ಯಗಳನ್ನು ನೀಡದಿದ್ದರೆ, ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ಗಮನವಹಿಸುವಂತೆ ಸಾರಿಗೆ ಸಚಿವರು ಸೂಚನೆ ನೀಡಿದರು.































































