ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಹೊತ್ತಲ್ಲಿ ಮೀಸಲಾತಿ ಚಳುವಳಿಯನ್ನು ತೀವ್ರಗೊಳಿಸಲು ಲಿಂಗಾಯತ ಪಂಚಮಸಾಲಿ ಸಮುದಾಯ ನಿರ್ಧರಿಸಿದೆ. ಈ ಬಗ್ಗೆ ರಣಕಹಳೆ ಮೊಳಗಿಸಿರುವ ಧರ್ಮ ಕ್ಷೇತ್ರ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ರಾಜ್ಯ ಸರ್ಕಾರದ ಮಳೆಗಾಲ ಅಧಿವೇಶನದಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ಕಲ್ಪಿಸಲು ಒತ್ತಡ ಹೆರುವ ಸಂಬಂಧ ಹಕ್ಕೊತ್ತಾಯ ಚಳುವಳಿ ನಡೆಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಪಂಚಮಸಾಲಿಗಳಿಗೆ 2A ಹಾಗೂ ಲಿಂಗಾಯತ ಎಲ್ಲಾ ಉಪಸಮಾಜಗಳಿಗೆ OBC ಮೀಸಲಾತಿಗಾಗಿ ಆರಂಭವಾಗಿರುವ 7 ನೇ ಹಂತದ ಹೋರಾಟ ಈ ಬಾರಿ ಪರಿಣಾಮಕಾರಿಯಾಗಿ ನಡೆಯಲಿದೆ. ಮೀಸಲಾತಿ ಹಕ್ಕನ್ನು ಸರ್ಕಾರಕ್ಕೆ ಪ್ರತಿಪಾದಿಸುವಂತೆ ಶಾಸಕರಿಗೆ ಹಕ್ಕೊತ್ತಾಯಿಸಲು ಪತ್ರ ಚಳವಳಿಯನ್ನು ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರಮುಖರು, ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಧಾರವಾಡ ಜಿಲ್ಲಾ , ಎಲ್ಲಾ ತಾಲೂಕು , ಪಂಚಸೇನಾ , ಮಹಿಳಾ ಹಾಗೂ ಯುವ ಘಟಕಗಳ ಆಶ್ರಯದಲ್ಲಿ ಜುಲೈ 3 ರಿಂದ ಶಾಸಕರುಗಳ ಮನೆಯಲ್ಲಿ ಪಂಚಮಸಾಲಿ ಆಗ್ರಹ ಪತ್ರ ಚಳುವಳಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ರ್ಯಾಲಿ ನಡೆಯಲಿದ್ದು, ಈ ಪತ್ರ ಚಳುವಳಿಗೆ ಅಂದು ಮಧ್ಯಾಹ್ನ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಮನೆಯಲ್ಲಿ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಜುಲೈ 6ರಂದು ಬೆಳಿಗ್ಗೆ 9 ಗಂಟೆಗೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರ ಹುಬ್ಬಳ್ಳಿ ನಿವಾಸದಲ್ಲಿ ಚಳವಳಿ ನಡೆಯಲಿದ್ದು, ಜುಲೈ 6ರ ಮಧ್ಯಾಹ್ನ ಕುಂದಗೊಳ ಶಾಸಕ ಎಂ.ಆರ್.ಪಾಟೀಲ್ ಅವರ ಹುಬ್ಬಳ್ಳಿ ನಿವಾಸದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಶಾಸಕರ ಮನವೊಲಿಸುವ ಪ್ರಯತ್ನ ಇದಾಗಿದ್ದು, ಅವರ ಮೂಲಕ ಸರ್ಕಾರವನ್ನು ಎಚ್ಚರಗೊಳಿಸಿ ಮೀಸಲಾತಿ ಪಡೆಯೋಣ ಎಂದು ಶ್ರೀಗಳು ಸಮಾಜ ಬಾಂಧವರಿಗೆ ಕರೆ ನೀಡಿದ್ದಾರೆ.