ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ಕರ್ನಾಟಕ ಮೇಲೆ ಯಾಕಿಷ್ಟು ತಾತ್ಸಾರ ಎಂದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿರುವ ಶಾಸಕ ಅರವಿಂದ್ ಬೆಲ್ಲದ್, ಮೀಸಲು ಪಡೆಯನ್ನು ಉತ್ತರಕರ್ನಾಟಕದಲ್ಲಿ ಸ್ಥಾಪಿಸಲು ಈ ಹಿಂದೆ ನಿರ್ಧರಿಸಲಾಗಿತ್ತಾದರೂ, ಇದೀಗ ಕಾಂಗ್ರೆಸ್ ಸರ್ಕಾರವು ಇದನ್ನು ದಕ್ಷಿಣಭಾಗದಲ್ಲೇ ಉಳಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.
ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅರವಿಂದ್ ಬೆಲ್ಲದ್, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಗಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಏಕೀ ದ್ವಂದ್ವ ನಿಲುವು!? ಉತ್ತರಕರ್ನಾಟಕಕ್ಕೆ ನಿಮ್ಮ ಮಲತಾಯಿ ಧೋರಣೆ ಏಕೆ!? ಉತ್ತರ ಕೊಡಿ ಎಂದಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರತೀಯ ಮೀಸಲು ಪಡೆಯನ್ನು ಉತ್ತರಕರ್ನಾಟಕದ ಬೇಲೂರಿನಲ್ಲಿ, ಮತ್ತು ದಕ್ಷಿಣಕರ್ನಾಟಕದ ದೇವನಹಳ್ಳಿಯಲ್ಲಿ ಎಂದು 2 ಘಟಕಗಳನ್ನು ನಿಗದಿ ಮಾಡಿತ್ತು. ಹಾಗಾಗಿ ಧಾರವಾಡದ ಬೇಲೂರಿನಲ್ಲಿ ಹೊಸದಾಗಿ ಘಟಕ ಸ್ಥಾಪಿಸಲು 52.04 ಎಕರೆ ಪ್ರದೇಶವನ್ನು ಮಂಜೂರು ಮಾಡಿ, ಸ್ಥಳ ನಿಗದಿಯೂ ಮಾಡಲಾಗಿತ್ತು.
ಆದರೆ ಎರಡು ಘಟಕಗಳನ್ನೂ ದಕ್ಷಿಣಕರ್ನಾಟಕದಲ್ಲಿಯೇ ಸ್ಥಾಪಿಸಿರುವುದು ಉತ್ತರಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಬೆಲ್ಲದ್ ಅವರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ #Uttarkarnataka ಮೇಲೆ ಯಾಕಿಷ್ಟು ತಾತ್ಸಾರ!?
ಮಾನ್ಯ ಮುಖ್ಯಮಂತ್ರಿ @siddaramaiah ನವರೇ, ಏಕೀ ದ್ವಂದ್ವ ನಿಲುವು!? ಉತ್ತರಕರ್ನಾಟಕಕ್ಕೆ ನಿಮ್ಮ ಮಲತಾಯಿ ಧೋರಣೆ ಏಕೆ!? ಉತ್ತರ ಕೊಡಿ!
ಧಾರವಾಡದಲ್ಲಿ ಐಆರ್ಬಿ ಘಟಕ ಸ್ಥಾಪಿಸುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದರಿಂದ ಹಿಡಿದು, ಉತ್ತರಕರ್ನಾಟಕದ ಭಾಗದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಗಮನ ಸೆಳೆದಿರುವ ಬೆಲ್ಲದ್, ‘ಉತ್ತರ ಕರ್ನಾಟಕದ ನಮ್ಮ ಹಕ್ಕಿಗಾಗಿ ಸಚಿವರಾದ ಸಂತೋಷ್ ಲಾಡ್, ವಿನಯಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಅವರು ಸರ್ಕಾರಕ್ಕೆ ಒತ್ತಡ ಹೇರಬೇಕು. ಬಂಗಾರಪೇಟೆಯಲ್ಲಿ ಸ್ಥಾಪಿಸಲು ಹೊರಟ ಐ ಆರ್ ಬಿ ಘಟಕವನ್ನು ರದ್ದುಗೊಳಿಸಿ, ಉತ್ತರಕರ್ನಾಟಕಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.