ಬೆಂಗಳೂರು: ಮುಜರಾಯಿ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ರಾಜ್ಯ ಸರ್ಕಾರದ ಬಂಪರ್. ರಾಜ್ಯದಲ್ಲಿರುವ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಕೆಲವು ಪ್ರಮುಖ ದೇವಾಲಯಗಳಲ್ಲಿ ವೇತನ ಪಡೆಯುತ್ತಿರುವ ನೌಕರರಲ್ಲಿ ಕೆಲವರಿಗೆ 6ನೇ ವೇತನ ಶ್ರೇಣಿ ಮಂಜೂರಾಗಿದ್ದು ಕೆಲವು ನೌಕರರಿಗೆ ನಿಯಮ 8 (2)ರ ಅಡಿಯಲ್ಲಿ ವೇತನ ಶ್ರೇಣಿ ಮಂಜೂರಾಗಿದ್ದು ಒಂದೇ ದೇವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ತಾರತಮ್ಯವಿದ್ದು ನಿಯಮ 8 (2) ಅಡಿಯಲ್ಲಿ ವೇತನ ಶ್ರೇಣಿ ಪಡೆಯುತ್ತಿರುವ ನೌಕರರು ತಮಗೂ ಸಹ 6ನೇ ವೇತನ ಶ್ರೇಣಿಯನ್ನು ಮಂಜೂರು ಮಾಡಲು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದರು.
ಈ ಬಗ್ಗೆ ಪರಿಶೀಲಿಸಿ, ನೌಕರರಿಗೆ 6ನೇ ವೇತನ ಶ್ರೇಣಿಯನ್ನು ಮಂಜೂರು ಮಾಡುವ ಬಗ್ಗೆ ಕಡತವನ್ನು ಮಂಡಿಸಲು ಸಾರಿಗೆ ಸಚಿವರು ಸೂಚಿಸಿದ್ದರಿಂದ ಮತ್ತೊಂದು ಐತಿಹಾಸಿಕ ಆದೇಶ ಹೊರಬಿದ್ದಿದೆ.
2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ದೇವಸ್ಥಾನದ ನೌಕರರುಗಳಿಗೆ 01ನೇ ಎಪ್ರಿಲ್ 2023 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ನೀಡಲು ಅನುಮತಿ ನೀಡಲಾಗಿದೆ. ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಕೆಲವು ಸಮಯದ ಹಿಂದೆಯೇ ಈ ಸಂಬಂಧ ನಿರ್ದೇಶನ ನೀಡಿದ್ದು, 16.03.2024 ರಂದು ಆದೇಶ ಜಾರಿಯಾಗಿದೆ.
ಆದೇಶದ ಹೈಲೈಟ್ಸ್ ಹೀಗಿದೆ:
ಸರ್ಕಾರದ ಆದೇಶ ಸಂಖ್ಯೆ: ಆಇ 07 ಎಸ್ಆರ್ಪಿ 2023, ದಿ:01/03/2023 ರ ಆದೇಶದನ್ವಯ ದಿ:01/04/2023 ರಿಂದ ಜಾರಿಗೆ ಬರುವಂತೆ ಮೂಲವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ನಿಯಮಗಳಲ್ಲಿರುವಂತೆ, ಈಗಾಗಲೇ ಸರ್ಕಾರಿ ನೌಕರರಿಗೆ ಮಂಜೂರು ಮಾಡಿದ್ದು, ಈಗಾಗಲೇ 6ನೇ ವೇತನ ಶ್ರೇಣಿ ಪಡೆಯುತ್ತಿರುವ ದೇವಾಲಯದ ನೌಕರರಿಗೆ ದೇವಾಲಯದ ಒಟ್ಟು ಸಿಬ್ಬಂದಿ ವೆಚ್ಚವು ದೇವಾಲಯದ ವಾರ್ಷಿಕ ಆದಾಯದ ಶೇಕಡ 35% ರಷ್ಟು ಮೀರದಿದ್ದಲ್ಲಿ ಮೇಲಿನ ಆದೇಶದಲ್ಲಿ ತಿಳಿಸಿರುವಂತೆ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಅನುಮತಿಸಿದೆ.