ಶಿವಮೊಗ್ಗ: ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಹೋರಾಟ ತೀವ್ರಗೊಂಡಿದೆ. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗಲೇ ಪಂಚಮಸಾಲಿ ಲಿಂಗಾಯತ ಸಮಾಜ ಮಲೆನಾಡಿನಲ್ಲಿ ಶಕ್ತಿ ಪ್ರದರ್ಶನ ನಡೆಸಿದೆ.
ಅಧಿವೇಶನದಲ್ಲಿ ಪಂಚಮಸಾಲಿ ಶಾಸಕರು ಪಕ್ಷಾತೀತವಾಗಿ , ಕಡ್ಡಾಯವಾಗಿ 2A ಮತ್ತು OBC ಮೀಸಲಾತಿ ಬಗ್ಗೆ ಧ್ವನಿ ಎತ್ತಬೇಕು ಎಂದು ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆಕೊಟ್ಟಿದ್ದಾರೆ.
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಧರ್ಮ ಕ್ಷೇತ್ರದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಹೋರಾಟ ನಡೆಯಿತು. ಶಿವಮೊಗ್ಗಾದ ಶಿವಪ್ಪ ನಾಯಕ ಸರ್ಕಲ್ ಬಳಿ ಹೆದ್ದಾರಿ ಬಂದ್ ಮಾಡಿ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ನಡೆಸಿದ ಸಮುದಾಯದ ಜನರು, ಪಂಚಮಸಾಲಿ ಮಲೆ ಗೌಡ ಲಿಂಗಾಯತ 2A ಮೀಸಲಾತಿ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ OBC ಮೀಸಲಾತಿ ಸಿಗಲೇಬೇಕು ಎಂದು ಘೋಷಣೆ ಕೂಗಿದರು. ಮೊದಲ ಬಾರಿಗೆ ಮಾತು ಕೊಟ್ಟ ಮರೆತಿರುವ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸಿದರು. ಗೋಪಿ ಸರ್ಕಲ್ ಹೆದ್ದಾರಿಯಲ್ಲಿ ತಡೆದು ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ನಡೆದ ಹೋರಾಟ ಕೂಡಾ ಗಮನಸೆಳೆಯಿತು.