ಚಾಮರಾಜನಗರ: ಹನೂರು ತಾಲ್ಲೂಕಿನಲ್ಲಿ ಜಿಲ್ಲಾಧಿಕಾರಿ ಶಿಲ್ಪನಾಗ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಹನೂರು ಕ್ಷೇತ್ರದ ಶಾಸಕ ಎಂ. ಆರ್. ಮಂಜುನಾಥ್ ನೇತೃತ್ವದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಜನರ ಅಹವಾಲು ಸ್ವೀಕರಿಸಿ, ಸಮಸ್ಯೆಗಳಿಗೆ ಸಂಬಂದಿಸಿದ ಅಧಿಕಾರಿಗಳಿಂದ ಸ್ಥಳದಲ್ಲೇ ಮಾಹಿತಿ ಪಡೆದು ಸೂಕ್ತ ಪರಿಹಾರ ಒದಗಿಸಿದರು.
ಜನತಾ ದರ್ಶನದಲ್ಲಿ ಬೂದುಬಾಳು ಶ್ರೀನಿವಾಸ್ ಎಂಬ ಅರ್ಜಿದಾರ ಮಾತನಾಡಿ, 10 ವರ್ಷದಿಂದ ಖಾತೆ ಮಾಡಿಕೊಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಾರೆ ಆಗಾಗಿ ಖಾತೆ ಮಾಡಿಸಿಕೊಡಬೇಕೆಂದರು. ಈ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮೇಲ್ನೋಟಕ್ಕೆ ಖಾತೆ ಮಾಡಲು ಅರ್ಹತೆ ಇದ್ದು ಇನ್ನೂ 15 ದಿನದೊಳಗೆ ಸಮಸ್ಯೆ ಇತ್ಯಾರ್ಥ ಪಡಿಸಲು ಕ್ರಮವಹಿಸಬೇಕೆಂದು ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಚಂಗಡಿ ಗ್ರಾಮದ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬೇಕು, ವಿದ್ಯುತ್ ಸೌಕರ್ಯ, ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಇನ್ನಿತರೆ ವಿಷಯಗಳ ಬಗ್ಗೆ ರೈತ ಮುಖಂಡ ಚಂಗಡಿ ಕರಿಯಪ್ಪ ಅಹವಾಲು ನೀಡಿದರು. ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಚಂಗಡಿ ಪುನರ್ವಸತಿ ಸರ್ಕಾರದ ಹಂತದಲ್ಲಿ ಇದೆ ಎಂದು ಮಾಹಿತಿ ನೀಡಿದರು. ಜನವನ ಸಾರಿಗೆ ವ್ಯವಸ್ಥೆ ಮತ್ತೆ ಪ್ರಾರಂಭಿಸಲಾಗಿದೆ ಎಂದರು.
ಇದೇ ವಿಚಾರವಾಗಿ ಶಾಸಕ ಮಂಜುನಾಥ್ ಮಾತನಾಡಿ, ಚಂಗಡಿ ಪುನರ್ವಸತಿ ವಿಚಾರ ಸೇರಿದಂತೆ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಮತ್ತು ರಸ್ತೆ ಅನುಕೂಲಕ್ಕೆ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಬಹಳ ವರ್ಷಗಳ ಬಳಿಕ ಕಾಡಂಚಿನ ಗ್ರಾಮಗಳ ರಸ್ತೆ ಮತ್ತು ವಿದ್ಯುತ್ ಸೌಕರ್ಯ ಶಾಶ್ವತವಾಗಿ ದೊರಕುತ್ತಿದೆ. ಈ ಕಾರ್ಯಗಳು ನಡೆಯಲು ಕಾಲಾವಕಾಶ ಬೇಕಾಗಿದೆ.
ರೈತ ಮುಖಂಡ ಪ್ರಸಾದ್ ಮಣಿಗಾರ್ ಶಾಲಾ ಅವಧಿಗೆ ಬಸ್ ಸೌಕರ್ಯ ಇಲ್ಲದೇ ಇರುವ ಕಾರಣ ಶಿಕ್ಷಕರು ತಡವಾಗಿ ಬರುವುದು, ಬೇಗಾ ಹೊರಡುವುದು ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಶಿಲ್ಪನಾಗ್ ಮಾತನಾಡಿ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಜಂಟಿಯಾಗಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಆರ್.ಟಿ. ಐ. ಕಾರ್ಯಕರ್ತ ದಶರಥ್ ದೊಡ್ಡಾಣೆಗೆ ರಸ್ತೆ ಸೌಕರ್ಯ ಕಲ್ಪಿಸಿ ಹಾಗೂ ಇನ್ನಿತರೆ ಕಂದಾಯ ಅರಣ್ಯ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥ್ ಮಾತನಾಡಿ, ರಸ್ತೆ ವಿದ್ಯುತ್ ಅಭಿರುದ್ದಿಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು ಕಾಲವಕಾಶ ಬೇಕು ಎಂದರು.
ಆರ್.ಟಿ.ಐ.ಕಾರ್ಯಕರ್ತ ಅಪ್ಪಾಜಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಅವರ ಹಿಂದೆ ಹೋದರೆ ಕೆಲಸವಾಗುತ್ತದೆ. ಅಲ್ಲದೇ ಆರ್. ಐ. ವಿ. ಎ. ಗಳು ಖಾತೆ, ವಿವಿಧ ಪಿಂಚಣಿ ಅನುಕೂಲ ಪಡೆಯಲು ಲಂಚ ಪಡೆಯುತ್ತಾರೆ. ತಾಲೋಕಿನ ವಿವಿಧಡೆ ಜಮೀನುಗಳ ಅಕ್ರಮ ವಹಿವಾಟು ಅತಿ ಹೆಚ್ಚಾಗಿ ನಡೆಯುತ್ತಿದೆ. ಆಗಾಗಿ ತನಿಖೆಗೆ ಒಳಪಡಿಸಬೇಕು. ಚಾಮುಂಡೇಶ್ವರಿ ನ್ಯಾಯಬೆಲೆ ಅಂಗಡಿ ವಿರುದ್ಧ ಆಹಾರ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಇದೇ ರೀತಿ ಪಶು ಇಲಾಖೆ, ವಿದ್ಯುತ್ ಇಲಾಖೆ, ಕೃಷಿ ಇಲಾಖೆ, ತಾ.ಪಂ. ಅರಣ್ಯ ಇನ್ನಿತರೆ ಇಲಾಖೆಗಳಲ್ಲಿನ ಸಮಸ್ಯೆ ಹಾಗೂ ಪರಿಹಾರಕ್ಕೆ ಮನವಿ ಸಲ್ಲಿಸಿದರು.
ಬಳಿಕ ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿದ್ದು, ಕಾರ್ಯಕ್ರಮದಲ್ಲಿ 270 ಕ್ಕೂ ಹೆಚ್ಚು ಅರ್ಜಿ ಬಂದಿದೆ. ಇದನ್ನು ಅಧಿಕಾರಿಗಳ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲು ನಾವು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಈ ಕಾರ್ಯಕ್ರಮ ಉಪಯುಕ್ತವಾಗಿ ಜನರ ಮೆಚ್ಚುಗೆಯಾಗಿದೆ. ಕ್ಷೇತ್ರದ ಸಮಸ್ಯೆ ಎಲ್ಲರಿಗೂ ಗೊತ್ತಿದೆ. ಮುಖ್ಯವಾಗಿ ರಸ್ತೆ, ಮೂಲ ಸೌಕರ್ಯ ಸೇರಿದಂತೆ ಕಂದಾಯ ಇಲಾಖೆ ಜಮೀನು ಸಮಸ್ಯೆ, ವಿವಿಧ ಇಲಾಖೆಯ ಮಾಹಿತಿಯು ಸಹ ನನ್ನ ಗಮನಕ್ಕೆ ಬಂದಿದೆ.ಪೂರ್ಣ ಪ್ರಮಾಣದಲ್ಲಿ ಬಗೆಹರಿಸಲು ಕಾಲಾವಕಾಶ ಬೇಕಿದೆ. ಸಮಗ್ರವಾಗಿ ಅಧಿಕಾರಿಗಳ ಬಳಿ ವರದಿ ತರಿಸಿಕೊಂಡು ಜಿಲ್ಲಾಡಳಿತ, ಅಧಿಕಾರಿಗಳು ಮತ್ತು ನಾವು ಪ್ರಾಮಾಣಿಕ ಪ್ರಯತ್ನ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಹೇಶ್, ಮಲೆ ಮಹದೇಶ್ವರ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂತೋಷಕುಮಾರ್, ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.




























































