ಬೆಂಗಳೂರು: ರಾಜ್ಯದ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ನಾಯಕರೇ ಅಸಮಾಧಾನ ಹೊರಹಾಕಿದ್ದಾರೆ. ಶಿಕ್ಷಣ ಇಲಾಖೆ ಆಗಾಗ್ಗೆ ಸುತ್ತೋಲೆಗಳನ್ನು ಹೊರಡಿಸುತ್ತಿದ್ದು ಈ ಅವೈಜ್ಞಾನಿಕ ನಡೆಯಿಂದಾಗಿ ಶಿಕ್ಷಣ ಕ್ಷೇತ್ರ ಅಯೋಮಯವಾಗಲಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ಶಿಕ್ಷಣ ಕ್ಷೇತ್ರದ ವ್ಯವಸ್ಥೆ ಬಗ್ಗೆ ಗಮನಸೆಳೆದಿರುವ ಮಾಜಿ ಶಾಸಕರೂ ಆದ ರಮೇಶ್ ಬಾಬು, ಕರ್ನಾಟಕ ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಆಡಳಿತಾತ್ಮಕ ಕಾರಣಕ್ಕಾಗಿ ಇಲಾಖೆಯ ಹೆಸರು ಶಾಲಾ ಶಿಕ್ಷಣ ಇಲಾಖೆ ಎಂದು ಬದಲಾಗಿರುತ್ತದೆ. ಬದಲಾವಣೆಗೆ ಅನುಗುಣವಾಗಿ ಇಲಾಖೆಯ ಕಾರ್ಯ ವೈಖರಿ ಬದಲಾಗದೆ ಇದ್ದರೆ ರಾಜ್ಯದ ಶಾಲಾ ಶಿಕ್ಷಣವು ಜನಪರ ಆಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇಲಾಖೆಯಲ್ಲಿ ಉತ್ತಮ ಆಯುಕ್ತರು, ನಿರ್ದೇಶಕರು ಮತ್ತು ಅಧಿಕಾರಿಗಳು ಇದ್ದರೂ, ಸ್ವ ಹಿತಾಸಕ್ತಿಗಾಗಿ ಕೆಲವರು ಅಧಿಕಾರಿಗಳ ದಾರಿ ತಪ್ಪಿಸಿ ಪದೇ ಪದೇ ಸುತ್ತೋಲೆಗಳನ್ನು ಹೊರಡಿಸುವುದರ ಮೂಲಕ ಕರ್ನಾಟಕ ಮೂಲದ ಖಾಸಗಿ ಶಾಲಾ ಕಾಲೇಜುಗಳ ತುಳಿಯುವ ವ್ಯವಸ್ಥಿತ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿರುವ ರಮೇಶ್ ಬಾಬು, ತಜ್ಞರ ಸಲಹೆ ಪಡೆಯದೇ ಅವೈಜ್ಞಾನಿಕ ರೀತಿ ಸುತ್ತೋಲೆಗಳನ್ನು ಹೊರಡಿಸುತ್ತಲೇ ಇದ್ದಾರೆ ಶಿಕ್ಷಣ ಕ್ಷೇತ್ರ ಅವನತಿಯ ಹಾದಿ ಹಿಡಿಯಬಹುದೆಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ರಾಜ್ಯದಲ್ಲಿ ರಾಜ್ಯ ಪಠ್ಯ ಕ್ರಮವನ್ನು ಅಳವಡಿಸಿಕೊಂಡಿರುವ ಮತ್ತು ಅನುದಾನಕ್ಕೆ ಒಳಪಡದ ಸಾವಿರಾರು ಖಾಸಗಿ ಶಾಲಾ ಕಾಲೇಜುಗಳು ನಡೆಯುತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿ ಕನಿಷ್ಠ ಶಿಕ್ಷಣ ಶುಲ್ಕದಲ್ಲಿ ನೂರು ಇನ್ನೂರು ವಿದ್ಯಾರ್ಥಿಗಳಿಂದ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಅನೇಕ ಶಿಕ್ಷಣ ಸಂಸ್ಥೆಗಳು ಇರುತ್ತವೆ. ರಾಜ್ಯದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ನಡೆಸಲಾಗದೆ ಸಾವಿರಾರು ಶಾಲಾ ಕಾಲೇಜುಗಳನ್ನು ಖಾಸಗಿ ಆಡಳಿತ ಮಂಡಳಿಗಳು ಮುಚ್ಚಿರುತ್ತವೆ. ಸೇವಾ ಮನೋಭಾವದಿಂದ ಕರ್ನಾಟಕದಲ್ಲಿ ಅನುದಾನರಹಿತವಾಗಿ ನಡೆಯುತ್ತಿರುವ ಖಾಸಗಿ ಶಾಲಾ ಕಾಲೇಜುಗಳನ್ನು, ಕೇಂದ್ರ ಶಿಕ್ಷಣ ನೀತಿ ಅಳವಡಿಸಿಕೊಂಡು ವಾಣಿಜ್ಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಖಾಸಗಿ ಶಾಲಾ ಕಾಲೇಜುಗಳಿಗೆ ಹೋಲಿಕೆ ಮಾಡಲು ಅಥವಾ ಸಮೀಕರಿಸಲು ಸಾಧ್ಯವಿಲ್ಲ. ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆ ಹೊರಡಿಸುವ ಸುತ್ತೋಲೆಗಳು ನಮ್ಮ ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲಾ ಕಾಲೇಜುಗಳಿಗೆ ಅನ್ವಯಿಸುತ್ತದೆ. ಆದರೆ ಕೇಂದ್ರ ಪಠ್ಯಕ್ರಮದ ಶಾಲಾ ಆಡಳಿತ ಮಂಡಳಿಗಳನ್ನು ನಿಯಂತ್ರಿಸದ ಶಿಕ್ಷಣ ಇಲಾಖೆ ಪದೇ ಪದೇ ಇಂತಹ ಸುತ್ತೋಲೆಗಳನ್ನು ನೀಡುವುದರ ಮೂಲಕ ಕರ್ನಾಟಕದ ಸ್ಥಳೀಯ ಶಿಕ್ಷಣ ಸಂಸ್ಥೆಗಳನ್ನು ತುಳಿಯುವ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ.
ಕರ್ನಾಟಕದ ಶಾಲಾ ಕಾಲೇಜು ಮಕ್ಕಳ ಹಿತಾಸಕ್ತಿಯನ್ನು ಸಂರಕ್ಷಣೆ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿರುತ್ತದೆ. ಇದನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಮಕ್ಕಳ ಹೆಸರಿನಲ್ಲಿ ಪದೇ ಪದೇ ಅನಾವಶ್ಯಕ ಸುತ್ತೋಲೆಗಳನ್ನು ನೀಡುವುದರ ಮೂಲಕ ಕರ್ನಾಟಕ ಮೂಲದ ಖಾಸಗಿ ಶಾಲಾ ಕಾಲೇಜುಗಳನ್ನು ವ್ಯವಸ್ಥಿತವಾಗಿ ತುಳಿಯುವ ಕೆಲಸ ಆಗುತ್ತಿದೆ. ರಾಜ್ಯದ ಗ್ರಾಮೀಣ ಪ್ರದೇಶದ ಬಹುತೇಕ ಖಾಸಗಿ ಶಾಲಾ ಕಾಲೇಜುಗಳು ನಷ್ಟದಲ್ಲಿ ನಡೆಯುತ್ತಿದ್ದು, ಶಾಲಾ ಶಿಕ್ಷಣ ಇಲಾಖೆಯ ಸುತ್ತೋಲೆಗಳು ಇಂತಹ ಶಾಲಾ ಕಾಲೇಜುಗಳನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡುತ್ತಿದೆ. ಇಲಾಖೆಯ ಇಂತಹ ಸುತ್ತೋಲೆಗಳನ್ನು ಬಳಸಿಕೊಂಡು ಇತರೆ ಇಲಾಖೆಗಳು ಖಾಸಗಿ ಶಾಲಾ ಕಾಲೇಜುಗಳನ್ನು ಶೋಷಣೆ ಮಾಡುತ್ತಿವೆ ಎಂದವರು ಸಿಎಂಗೆ ಬರೆದಿರುವ ಪಾತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ಖಾಸಗಿ ಶಾಲಾ ಕಾಲೇಜುಗಳು ಸೇವಾ ಮನೋಭಾವದಿಂದ ತಮ್ಮದೇ ಆಸ್ತಿ ಮತ್ತು ಹಣವನ್ನು ವಿನಿಯೋಗಿಸಿಕೊಂಡು ಅನುದಾನರಹಿತವಾಗಿ ಶಿಕ್ಷಣವನ್ನು ನೀಡುತ್ತಿವೆ. ಇಲಾಖೆಯ ಹಲವಾರು ಸುತ್ತೋಲೆಗಳು ಈ ನೆಲದ ಶಾಲಾ ಕಾಲೇಜುಗಳಿಗೆ ಕಂಟಕವಾಗಿವೆ ಎಂದು ಸರ್ಕಾರದ ಗಮನಸೆಳೆದಿರುವ ರಮೇಶ್ ಬಾಬು, ಕೆಲವು ವಾಸ್ತವ ಸಂಗತಿಗಳತ್ತ ಬೊಟ್ಟುಮಾಡಿದ್ದಾರೆ.
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ನಿಗದಿತವಾದ (ಕನಿಷ್ಠ 26 ಸಾವಿರ ಚದರ ಅಡಿ ) ಸ್ಥಳ ಮತ್ತು ಕಟ್ಟಡವನ್ನು ಹೊಂದಿರಬೇಕು.
ಕಡ್ಡಾಯವಾಗಿ ಮೂಲಬೂತ ಸೌಕರ್ಯಗಳನ್ನು ಹೊಂದಿರಬೇಕು.
ಪ್ರತೀ ವರ್ಷ ನವೀಕರಣವನ್ನು ಪಡೆಯಬೇಕು.
ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆಯ ವತಿಯಿಂದ ದೃಢೀಕರಣ ಪತ್ರ ಮತ್ತು ಅಗ್ನಿಶಾಮಕ ಇಲಾಖೆಯಿಂದ ಅನುಮತಿ ಪತ್ರ ಪಡೆಯಬೇಕು.
ರಾಜ್ಯ ಸರ್ಕಾರ ನಿಗದಿಪಡಿಸುವ ಶಿಕ್ಷಣ ಶುಲ್ಕಕ್ಕಿಂತ ಹೆಚ್ಚು ಶಿಕ್ಷಣ ಶುಲ್ಕ ಪಡೆಯುವಂತಿಲ್ಲ.
ನುರಿತ ಶಿಕ್ಷಕರನ್ನು ಹೊಂದಿರಬೇಕು ಮತ್ತು ರಾಜ್ಯ ಸರ್ಕಾರದ ನಿಯಮದ ಅನ್ವಯ ವೇತನ ಪಾವತಿಸಬೇಕು.
ರಾಜ್ಯ ಸರ್ಕಾರದ ಯೋಜನೆ /ಕಾರ್ಯಕ್ರಮಗಳಿಗೆ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರ ಸೇವೆಯನ್ನು ನೀಡಬೇಕು.
ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳು ಕಟ್ಟಡ /ಅಗ್ನಿಶಾಮಕ ದೃಢೀಕರಣ ಪತ್ರ ನೀಡಬೇಕಾಗಿದ್ದು, ಇದನ್ನು ಕೇವಲ ಖಾಸಗಿ ಶಾಲಾ ಕಾಲೇಜುಗಳಿಗೆ ಕಡ್ಡಾಯಗೊಳಿಸಿದ್ದು, ಭ್ರಷ್ಟಾಚಾರಕ್ಕೆ ಅವಕಾಶವಾಗಿದೆ.
ಕರ್ನಾಟಕದ ಹೊರಗಿನ ಕೆಲವು ಶಿಕ್ಷಣ ಸಂಸ್ಥೆಗಳು ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ರಾಜ್ಯದಲ್ಲಿ ಶಾಲಾ ಕಾಲೇಜು ನಡೆಸುತ್ತಿದ್ದು, ಈ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪನ್ನು ನೀಡಿ ಕನಿಷ್ಠ ಸ್ಥಳಾವಕಾಶ ಇಲ್ಲದ ಈ ಸಂಸ್ಥೆಗಳನ್ನು ಮುಚ್ಚಲು ಆದೇಶ ನೀಡಿದ್ದರೂ ಶಿಕ್ಷಣ ಇಲಾಖೆಯಿಂದ ಕ್ರಮ ಇರುವುದಿಲ್ಲ.
ರಾಜ್ಯ ಸರ್ಕಾರ ರಾಜ್ಯದಲ್ಲಿ 25 ವರ್ಷದಿಂದ ನಡೆಯುತ್ತಿರುವ ಎಲ್ಲಾ ಮಾಧ್ಯಮದ ಶಾಲಾ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಿದರೆ ಸಾವಿರಾರು ಶಿಕ್ಷಕ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ಕುರಿತು ಇಲಾಖೆ ವರದಿ ನೀಡುತ್ತಿಲ್ಲ.
ಈ ರಾಜ್ಯದ ಮುಖ್ಯಮಂತ್ರಿಗಳಾಗಿ ತಾವು 15-09-2017 ಮತ್ತು 27-09-2017 ರಂದು ನಿರಂತರವಾಗಿ ಏಳು ತಾಸು ಸಭೆಯನ್ನು ನಡೆಸಿ ಸುಮಾರು 30 ವಿಷಯಗಳಿಗೆ ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿರುವಿರಿ. ಶಿಕ್ಷಣ ಇಲಾಖೆಯು ಒಂದು ಜವಾಬ್ದಾರಿ ಇಲಾಖೆಯಾಗಿದ್ದು, ಬದಲಾವಣೆಗೆ ಅನುಗುಣವಾಗಿ ಭೋದನೆ ಮತ್ತು ಇತರೆ ವಿಷಯಗಳೊಂದಿಗೆ ಹೊಸ ಹೊಸ ವಿಚಾರಗಳನ್ನು ಅಳವಡಿಸಿಕೊಂಡು ರಾಜ್ಯ ಮತ್ತು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತಾವು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಖಾಸಗಿ ಶಾಲಾ ಕಾಲೇಜುಗಳನ್ನು ಗುರಿ ಮಾಡಿಕೊಂಡು ಪದೇ ಪದೇ ಸುತ್ತೋಲೆಗಳನ್ನು ನೀಡದಂತೆ ಸೂಚಿಸಬೇಕೆಂದು ರಮೇಶ್ ಬಾಬು ಮನವಿ ಮಾಡಿದ್ದಾರೆ.
ಶೈಕ್ಷಣಿಕ ವರ್ಷದ ಕೊನೆಯಭಾಗದಲ್ಲಿ ಇಂತಹ ಸುತ್ತೋಲೆಗಳನ್ನು ಹೊರಡಿಸುವುದು ಕೇವಲ ಪ್ರಚಾರದ ಭಾಗವಾಗುತ್ತದೆ. ಇದರ ಬದಲು ಖಾಸಗಿ ಶಾಲಾ ಕಾಲೇಜುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶೈಕ್ಷಣಿಕ ತಜ್ಞರೊಂದಿಗೆ ಚರ್ಚೆ ಮಾಡಿ ಸುತ್ತೋಲೆಗಳನ್ನು ನೀಡಿದರೆ ಅನುಕೂಲವಾಗುತ್ತದೆ. ಇಲ್ಲದೇ ಹೋದರೆ ಶಾಲಾ ಶಿಕ್ಷಣ ಇಲಾಖೆಯ ಸುತ್ತೋಲೆಗಳನ್ನು ಬಳಸಿಕೊಂಡು ಖಾಸಗಿ ಶಾಲಾ ಕಾಲೇಜುಗಳನ್ನು ಶೋಷಣೆ ಮಾಡುವ ಪರಿಪಾಠ ಹೆಚ್ಚಾಗುತ್ತದೆ ಎಂದಿರುವ ಅವರು, ಶಾಲಾ ಶಿಕ್ಷಣ ಇಲಾಖೆಯು 01-01-2024 ರಂದು ಹೊರಡಿಸಿರುವ ಸುತ್ತೋಲೆ ಸಂಖ್ಯೆ 1159941 ತಡೆಹಿಡಿಯಲು ಮತ್ತು ಇಂತಹ ಸುತ್ತೋಲೆಗಳನ್ನು ಪದೇ ಪದೇ ನೀಡದಂತೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕ ಮೂಲದ ರಾಜ್ಯ ಪಠ್ಯಕ್ರಮದ ಖಾಸಗಿ ಶೈಕ್ಷಣಿಕ ಸಂಸ್ಥೆಗಳನ್ನು ಕರ್ನಾಟಕದ ಹೊರಗಿನ ಅಥವಾ ಕೇಂದ್ರ ಪಠ್ಯಕ್ರಮದ ಶೈಕ್ಷಣಿಕ ಸಂಸ್ಥೆಗಳ ಜೊತೆ ಹೋಲಿಕೆ ಮಾಡದಂತೆ ನಿರ್ದೇಶನ ನೀಡಬೇಕು ಮತ್ತು ಇದರ ಜೊತೆಗೆ ತಾವು ದಯಮಾಡಿ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಜೊತೆ ವಿಚಾರ ವಿನಿಮಯ ಮಾಡಲು ಒಂದು ಸಮಯವನ್ನು ನಿಗದಿ ಪಡಿಸಿ ಶೈಕ್ಷಣಿಕ ವ್ಯವಸ್ಥೆಯ ಪ್ರಗತಿಯಲ್ಲಿ ಖಾಸಗಿ ಶಾಲಾ ಕಾಲೇಜುಗಳು ಹೆಚ್ಚು ಜವಾಬ್ದಾರಿಯಿಂದ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕೆಂದು ರಮೇಶ್ ಬಾಬು ಅವರು ತಮ್ಮ ಸುದೀರ್ಘ ಪತ್ರದಲ್ಲಿ ಸಿಎಂ ಅವರಿಗೆ ಮನವಿ ಮಾಡಿದ್ದಾರೆ.























































ಇಲಾಖೆಯಲ್ಲಿ ಉತ್ತಮ ಆಯುಕ್ತರು, ನಿರ್ದೇಶಕರು ಮತ್ತು ಅಧಿಕಾರಿಗಳು ಇದ್ದರೂ, ಸ್ವ ಹಿತಾಸಕ್ತಿಗಾಗಿ ಕೆಲವರು ಅಧಿಕಾರಿಗಳ ದಾರಿ ತಪ್ಪಿಸಿ ಪದೇ ಪದೇ ಸುತ್ತೋಲೆಗಳನ್ನು ಹೊರಡಿಸುವುದರ ಮೂಲಕ ಕರ್ನಾಟಕ ಮೂಲದ ಖಾಸಗಿ ಶಾಲಾ ಕಾಲೇಜುಗಳ ತುಳಿಯುವ ವ್ಯವಸ್ಥಿತ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿರುವ ರಮೇಶ್ ಬಾಬು, ತಜ್ಞರ ಸಲಹೆ ಪಡೆಯದೇ ಅವೈಜ್ಞಾನಿಕ ರೀತಿ ಸುತ್ತೋಲೆಗಳನ್ನು ಹೊರಡಿಸುತ್ತಲೇ ಇದ್ದಾರೆ ಶಿಕ್ಷಣ ಕ್ಷೇತ್ರ ಅವನತಿಯ ಹಾದಿ ಹಿಡಿಯಬಹುದೆಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಖಾಸಗಿ ಶಾಲಾ ಕಾಲೇಜುಗಳು ಸೇವಾ ಮನೋಭಾವದಿಂದ ತಮ್ಮದೇ ಆಸ್ತಿ ಮತ್ತು ಹಣವನ್ನು ವಿನಿಯೋಗಿಸಿಕೊಂಡು ಅನುದಾನರಹಿತವಾಗಿ ಶಿಕ್ಷಣವನ್ನು ನೀಡುತ್ತಿವೆ. ಇಲಾಖೆಯ ಹಲವಾರು ಸುತ್ತೋಲೆಗಳು ಈ ನೆಲದ ಶಾಲಾ ಕಾಲೇಜುಗಳಿಗೆ ಕಂಟಕವಾಗಿವೆ ಎಂದು ಸರ್ಕಾರದ ಗಮನಸೆಳೆದಿರುವ ರಮೇಶ್ ಬಾಬು, ಕೆಲವು ವಾಸ್ತವ ಸಂಗತಿಗಳತ್ತ ಬೊಟ್ಟುಮಾಡಿದ್ದಾರೆ.