ಬೆಂಗಳೂರು: ನೂತನ ಸಂಸತ್ ಭವನದ ಕಾರ್ಯಕ್ರಮಗಳ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೆ ಆಹ್ವಾನ ನೀಡದೇ ಕೇಂದ್ರ ಸರ್ಕಾರ ಅಪಮಾನ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 97 ವರ್ಷಗಳ ಹಿಂದೆ ಹಾಲಿ ಸಂಸತ್ ಭವನವನ್ನು 83 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿತ್ತು. ಜ.18, 1927 ರಂದು ಆಗಿನ ವೈಸ್ ರಾಯ್ ಲಾರ್ಡ್ ಇರ್ವಿನ್ ಉದ್ಘಾಟನೆ ಮಾಡಿದ್ದರು. ಆಗ ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ 790 ಹಾಸನಗಳ ಸಾಮರ್ಥ್ಯವಿತ್ತು. ಇದನ್ನು ವಿನ್ಯಾಸ ಮಾಡಿದ್ದ ಸರ್ ಎಡ್ವಿನ್ ಲುಟಿನ್ಸ್ ಹಾಗೂ ಸರ್ ಅರ್ಬರಕರ್ ಎಂಬುವವರು. ಇಂದು ಬದಲಾದ ಸನ್ನಿವೇಷದಲ್ಲಿ ಸಂಸತ್ ಸದಸ್ಯರಿಗೆ ಸ್ಥಳದ ಕೊರತೆ ಇದೆ ಎಂದು ನೂತನ ಸಂಸತ್ ನಿರ್ಮಾಣಕ್ಕೆ ಡಿ.10, 2020ರಲ್ಲಿ ಶಂಕುಸ್ಥಾಪನೆ ಮಾಡಿ ನೂತನ ಭವನ ನಿರ್ಮಿಸಲಾಗುತ್ತಿದೆ ಎಂದರು.
Wow! Let us all, as true nationalist Indians, take pride in the new Parliament building of India. pic.twitter.com/DJpfDVrOby
— Zavier (@ZavierIndia) May 24, 2023
ಆಗಿನ ರಾಷ್ಟ್ರಪತಿ ಕೋವಿಂದ್ ಅವರಿಗೆ ಯಾವುದೇ ಆಹ್ವಾನ ಇರಲಿಲ್ಲ. ಈ ಭವನಕ್ಕೆ 862 ಕೋಟಿ ವೆಚ್ಚವಾಗಿದ್ದು, ಅದರ ವಿನ್ಯಾಯಸಕರು ಬಿಮಲ್ ಪಟೇಲ್ ಆಗಿದ್ದಾರೆ. ಇದರಲ್ಲಿ 1272 ಹಾಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಲೋಕಸಭೆಗೆ 888 ಹಾಗೂ ರಾಜ್ಯ ಸಭೆಗೆ 384 ಹಾಸನಗಳನ್ನು ನೀಡಲಾಗಿದೆ. ಇದರ ಉದ್ಘಾಟನೆ ಮೇ 28, 2023ಕ್ಕೆ ಮಾಡಲು ಮುಂದಾಗಿದ್ದಾರೆ. ಇದನ್ನು ಸ್ಪೀಕರ್ ಓಂ ಬಿರ್ಲಾ ಅವರು ಉದ್ಘಾಟನಾ ಕಾರ್ಯಕ್ರಮ ಮಾಡುತ್ತಿದ್ದು, ಕೇವಲ ಪ್ರಧಾನಿಗಳಿಗೆ ಆಹ್ವಾನ ನೀಡಲಾಗಿದೆ. ಈಗಲೂ ರಾಷ್ಟ್ರಪತಿಗಳಿಗೆ ಆಹ್ವಾನ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಈಗಿನ ರಾಷ್ಟ್ರಪತಿಗಳಾದ ಶ್ರೀಮತಿ ಮುರ್ಮು ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಸಂಸತ್ ಎಂದರೆ ಅದರಲ್ಲಿ ರಾಷ್ಟ್ರಪತಿಗಳು ಒಂದು ಭಾಗವಾಗಿರುತ್ತಾರೆ ಎಂದು ಸಂವಿಧಾನ ಹೇಳುತ್ತದೆ. ರಾಷ್ಟ್ರಪತಿ ಹೊರತಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲು ಸಾಧ್ಯವಿಲ್ಲ. ಆದರೆ ದುರಾದೃಷ್ಟವಶತಾ, ಕೇಂದ್ರ ಸರ್ಕಾರ ಆರ್ ಎಸ್ಎಸ್ ಮಾರ್ಗದರ್ಶನದಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದಿಂದ ಬಂದಿರುವ ರಾಷ್ಟ್ರಪತಿಗಳನ್ನು ಸಂಸತ್ ಭವನಗ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೇ ಅಪಮಾನ ಮಾಡುತ್ತಿವೆ. ಇದು ಸಂವಿಧಾನಕ್ಕೆ ಮಾಡುವ ಅಪಚಾರ. ಹಾಗೂ ರಾಷ್ಟ್ರಪತಿ ಹುದ್ದೆಗೆ ಅಪಮಾನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಧಾನಮಂತ್ರಿಗಳು ಅಪಚಾರ ಎಸಗಿದ್ದಾರೆ ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದು ಪ್ರತಿ ಪ್ರಜೆಯ ಕರ್ತವ್ಯ. ಅದು ಪ್ರಧಾನಿಗಳಾಗಿರಲಿ ಅಥವಾ ಜನಸಾಮಾನ್ಯನಾಗಲಿ. ಹೀಗಾಗಿ ರಾಷ್ಟ್ರಪತಿಗಳನ್ನು ಕೇವಲ ಹೆಸರಿಗೆ ಮಾತ್ರ ಇಟ್ಟುಕೊಳ್ಳುವುದಲ್ಲ, ಅವರಿಗಿರುವ ಅಧಿಕಾರವನ್ನು ನೀಡಿ, ಸಂಸತ್ ಭವನ ಉದ್ಘಾಟನೆಗೆ ಆಹ್ವಾನ ನೀಡಬೇಕು. ಅಪಚಾರ ಎಸಗಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಪಕ್ಷದ ವತಿಯಿಂದ ಆಗ್ರಹಿಸುತ್ತೇವೆ ಎಂದವರು ಹೇಳಿದ್ದಾರೆ.