ಬೀದರ್, ಮಂಗಳೂರು: ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜ್ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಮೆಡಿಕಲ್ ಸೀಟ್ ಕೊಡಿಸುವುದಾಗಿ ಕೆಲವು ವ್ಯಕ್ತಿಗಳ ಗುಂಪು ವಿದ್ಯಾರ್ಥಿಗಳಿಗೆ ವಂಚಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿವೆ.
ಬೀದರ್ ಮೂಲದ ವ್ಯಕ್ತಿಗೆ ಪಂಗನಾಮ..?
ಮಂಗಳೂರು ಹೊರವಲಯದ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ ದೇರಳಕಟ್ಟೆ ಇಲ್ಲಿ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿರುವ ಜಾಲ ಬೀದರ್ ಮೂಲದ ವ್ಯಕ್ತಿಗೆ ವಂಚಿಸಿದ್ದಾರೆಂಬುದು ಉಳ್ಳಾಲ ಠಾಣೆಯ ಪೊಲೀಸರು ದಾಖಲಿಸಿರುವ ದೂರು. ಈ ಪ್ರಕರಣದಲ್ಲಿ ಇಫ್ತಿಕಾರ್ ಮೊದಲನೇ ಆರೋಪಿ. ಅಹಮದ್, ನೇಹಾ, ಪಾಯಲ್, ಯಶ್, ರಾಹುಲ್, ಹಾಗೂ ಇತರರನ್ನೂ ಅರೋಪಿಗಳೆಂದು ಎಫ್ಐಆರ್ನಲ್ಲಿ ತೋರಿಸಲಾಗಿದೆ.
ಬೀದರ್ ಮೂಲದ ಉತ್ತಮ್ ದೀಕ್ಷಿತ್ ಎಂಬ ವಿದ್ಯಾರ್ಥಿಗೆ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾಗಿದೆ ಎಂಬುದು ವಿದ್ಯಾರ್ಥಿಯ ತಂದೆ ಶಶಿಕಾಂತ್ ದೀಕ್ಷಿತ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಡಿಸೆಂಬರ್ 16ರಂದು ವ್ಯಕ್ತಿಯೊಬ್ವರು ಶಶಿಕಾಂತ್ ಅವರಿಗೆ ಕರೆಮಾಡಿ ಕೌನ್ಸಿಲಿಂಗ್ ಮೆನೇಜ್ಮೆಂಟ್ ಕೋಟಾದಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದರು. 50 ಲಕ್ಷದೊಳಗೆ ಸೀಟು ಮಾಡಿಸುವಂತೆ ವಿದ್ಯಾರ್ಥಿ ಕಡೆಯಿಂದ ಬೇಡಿಕೆ ಇಲಾಗಿದ್ದು, ಸ್ವಲ್ಪ ಹೊತ್ತಿನಲ್ಲಿ ನೇಹಾ ಎಂಬ ಮಹಿಳೆ ಕರೆ ಮಾಡಿ, ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಸೀಟು ಇದೆ, ಇದಕ್ಕೆ 15 ಲಕ್ಷ ರೂಪಾಯಿ ಕ್ಯಾಪಿಟೇಶನ್ ಫೀಸ್ ಮತ್ತು 7.5 ಲಕ್ಷ ರೂಪಾಯಿ ಫಸ್ಟ್ ಈಯರ್ ಫೀಸ್ ಕೊಡಬೇಕು, ಒಂದು ವರ್ಷ ಹಾಸ್ಟಲ್ ಫೀ ಉಚಿತ ಕೊಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನು ನಂಬಿದ ಶಶಿಕಾಂತ್ ದೀಕ್ಷಿತ್ ಅವರು 17.12.2022ರಂದು 7.5 ಲಕ್ಷ ರೂಪಾಯಿ ಡಿಡಿ ಪಡೆದು ಅದರ ಫೊಟೋವನ್ನು ನೇಹಾ ಎಂಬವರಿಗೆ ವಾಟ್ಸಪ್ ಮೂಲಕ ರವಾನಿಸಿದ್ದಾರೆ. ಮರುದಿನ ಮತ್ತಷ್ಟು ದಾಖಲೆಗಳ ಫೊಟೋಗಳನ್ನೂ ಕಳುಹಿಸಿಕೊಟ್ಟಿದ್ದಾರೆ. ಇದಾದ ಎರಡೇ ದಿನಗಳಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡು ಪಾಯಲ್ ಎಂಬವರು ಫೋನ್ ಕರೆ ಮಾಡಿ ಮೆಡಿಕಲ್ ಸೀಟ್ ಕನ್ಫರ್ಮ್ ಇದೆ ಎಂದು ತಿಳಿಸಿದ್ದು, ಅವರ ಸೂಚನೆಯಂತೆ 21.12.2022ರಂದು ಬೆಳಿಗ್ಗೆ 11.15ಕ್ಕೆ ದೇರಳಕಟ್ಟೆ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಅಡ್ಮಿನಿಸ್ಟ್ರೇಷನ್ ವಿಭಾಗಕ್ಕೆ ಶಶಿಕಾಂತ್ ದೀಕ್ಷಿತ್ ಹಾಗೂ ಮಗ ತೆರಳಿದ್ದಾರೆ. ಅಲ್ಲಿ ಯಶ್ ಎಂಬಾತನನ್ನು ಸಂಪರ್ಕಿಸಿ, ಅವರ ಮೂಲಕ ರಾಹುಲ್ ಎಂಬಾತನ್ನೂ ಭೇಟಿ ಮಾಡಿಸಿ ಬಳಿಕ ವಿದ್ಯಾಸಂಸ್ಥೆಯ ಮುಖ್ಯಸ್ಥರ ಚೇಂಬರ್ ಬಳಿ ಕರೆದೊಯ್ಯಲಾಗಿದೆ. ಅಷ್ಟರಲ್ಲೇ ಚೇಂಬರ್ನಿಂದ ಹೊರಬಂದ ಇಫ್ತಿಕಾರ್ ಅಹಮದ್ ಎಂಬವರು ಒಂದು ಮೆಡಿಕಲ್ ಸೀಟ್ ಕನ್ಫರ್ಮ್ ಆಗಿದೆ. ಸಂಬಂಧಪಟ್ಟ ಫಾರ್ಮ್ ಭರ್ತಿ ಮಾಡಿ ಹಣದ ವ್ಯವಸ್ಥೆ ಮಾಡಿರುತ್ತೀರಾ ಎಂದು ಕೇಳಿದ್ದಾರೆ. ಅನಂತರ ರಾಹುಲ್ ಎಂಬಾತನ ಮೂಲಕ 7.5 ಲಕ್ಷ ರೂಪಾಯಿ ಡಿಡಿ ಹಾಗೂ ದಾಖಲೆಗಳನ್ನು ನೀಡಲಾಗಿದ್ದು, ಆ ಸಂದರ್ಭದಲ್ಲಿ ಇಫ್ತಿಕಾರ್ ಅಹ್ಮದ್ ಅವರು 15 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು, ಒಂದು ಗಂಟೆಯ ಬಳಿಕ ಅಡ್ಮೀಷನ್ ಆರ್ಡರ್ನ ಫೊಟೋವನ್ನು ವಾಟ್ಸಪ್ ಮೂಲಕ ರವಾನಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ನಮೂದಿಸಲಾಗಿದೆ.
ನಂತರ 27.12.2022ರಂದು ಇಫ್ತಿಕಾರ್ ಅಹಮದ್ ಕರೆಮಾಡಿ ಉತ್ತಮ್ ದೀಕ್ಷಿತ್ನ 2022-23ನೇ ಸಲಿನ ಮೆಡಿಕಲ್ ಸೀಟ್ ಆಗಿದೆ. 6.1.2023ರಂದು ಕ್ಲಾಸ್ ಆರಂಭವಾಗುತ್ತದೆ. ಆದರೆ ಡಿಮ್ಯಾಂಡ್ ಡ್ರಾಫ್ಟ್ ಕ್ಲಿಯರ್ ಇಲ್ಲದ ಕಾರಣ ಡಿಡಿಯನ್ನು ಕ್ಯಾನ್ಸಲ್ ಮಾಡಿ ಮೊದಲನೇ ವರ್ಷದ ಟ್ಯೂಷನ್ ಫೀಸ್ 7.5 ಲಕ್ಷ ರೂಪಾಯಿ ಹಣವನ್ನು ನಗದು ರೂಪದಲ್ಲಿ ಕೊಡಬೇಕು. ಆ ಹಣವನ್ನು ಹೈದರಾಬಾದ್ ಏರ್ಪೋರ್ಟ್ಗೆ ತೆರಳಿ ಒಬ್ಬ ವ್ಯಕ್ತಿಯ ಕೈಯಲ್ಲಿ ಕೊಡಬೇಕು ಎಂದು ತಿಳಿಸಿದ್ದರು. ಈ ಸೂಚನೆಯಂತೆಯೇ 29.12.2022ರಂದು ಅಶೋಕ್ ಸಿಂಗ್ ಎಂಬವರ ಬಳಿ 7.5 ಲಕ್ಷ ರೂಪಾಯಿಗಳನ್ನು ಉತ್ತಮ್ ದೀಕ್ಷಿತ್ ಮೂಲಕ ತಲುಪಿಸಲಾಗಿದೆ ಎಂದು ಎಫ್ಐಆರ್ನಲ್ಲಿ ನಮೂದಾಗಿದೆ. ಆದರೆ, 5.1.2023ರಂದು ಉತ್ತಮ್ ದೀಕ್ಷಿತ್ ದೇರಳಕಟ್ಟೆ ಕಣಚೂರು ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಅಡ್ಮೀಷನ್ ವಿಭಾಗಕ್ಕೆ ಹೋಗಿ ಅಡ್ಮೀಷನ್ ಆರ್ಡರ್ ತೋರಿಸಿ ವಿಚಾರಿಸಿದಾಗ, ಆ ರೀತಿಯ ಆದೇಶವನ್ನು ತಮ್ಮ ವಿದ್ಯಾ ಸಂಸ್ಥೆ ನೀಡಿಲ್ಲ ಎಂದು ಪ್ರಮುಖರು ತಿಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದರಿಂದ ನೊಂದ ಶಶಿಕಾಂತ್ ದೀಕ್ಷಿತ್ ಅವರು ತಮಗೆ ವಂಚಿಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ಇಫ್ತಿಕಾರ್, ಅಹಮದ್, ನೇಹಾ ಸಹಿತ 7 ಮಂದಿಯ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಪೊಲೀಸರ ನಡೆ ಬಗ್ಗೆ ದೂರುದಾರ ಶಶಿಕಾಂತ್ ದೀಕ್ಷಿತ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ತಾವು ಜನವರಿ ತಿಂಗಳಿನಿಂದ ಈವರೆಗೆ ಹಲವಾರು ಬಾರಿ ಮಂಗಳೂರು ಪೋಲೀಸರಿಗೆ ದೂರು ನೀಡಿದ್ದೇನೆ. ಈ ಸಂಬಂಧ ಹಲವಾರು ಬಾರಿ ಠಾಣೆಗೆ ಕರೆಸಿಕೊಂಡು ಮಾಹಿತಿ ಪಡೆದಿದ್ದಾರೆ. ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದು ಈ ವಂಚನೆ ಪ್ರಕರಣ ಬಗ್ಗೆ ಮಾಹಿತಿ ನೀಡಿದ್ದರೂ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಇದೀಗ ಮಂಗಳೂರಿಗೆ ಹೊಸ ಪೊಲೀಸ್ ಕಮೀಷನರ್ ಆಗಮಿಸಿದ ನಂತರ ಈ ದೂರಿನ ಬಗ್ಗೆ ಎಫ್ಐಆರ್ ದಾಖಲಾಗಿದೆ ಎಂದು ಶಶಿಕಾಂತ್ ದೀಕ್ಷಿತ್ ತಿಳಿಸಿದ್ದಾರೆ.
ಪಿಜಿ ಸೀಟ್ ಹೆಸರಲ್ಲೂ ವಂಚನೆ
ಇದೇ ವೇಳೆ, ಅದೇ ಕಣಚೂರು ಮೆಡಿಕಲ್ ಕಾಲೇಜ್ನಲ್ಲಿ ಪಿಜಿ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚಕರು 50 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವ ಆರೋಪ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾರ್ಚ್ 5ರಂದು ಮತ್ತೊಂದು ಪ್ರಕರಣ ದಾಖಲಾಗಿದೆ. ಚಪ್ಪಗಡ್ಡಿ ಎರುಕು ನಾಯ್ಡು ಎಂಬವರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಕಣಚೂರು ಮೆಡಿಕಲ್ ಕಾಲೇಜ್ನ ಕನ್ಸಲ್ಟೆಂಟ್ ಜಯಂತಿ, ಪಶ್ಚಿಮ ಬಂಗಾಳದ ಸುಪ್ರಿಯಾ, ಮನೋಜ್ ಹಾಗೂ ಇತರರ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.