ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಈಗ ಕಂಡಿಷನ್ ಯಾಕೆ? ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಕೇಳಿದ್ದಾರೆ. ಆಗ ಇಲ್ಲದ ಕಂಡಿಷನ್ ಈಗ ಯಾಕೆ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಕಾ ಪಾಟೀಲ್ ನಿಂಗೂ ಫ್ರೀ, ಜಮೀರ್ ಅಹ್ಮದ್, ಮಹದೇವಪ್ಪ ನಿಂಗೂ ಫ್ರೀ ಎಂದು ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯನವರು ತಿಳಿಸಿದ್ದರು ಎಂದು ಗಮನ ಸೆಳೆದರು. 10 ಕೆಜಿ ಅಕ್ಕಿ ಕೊಟ್ಟಿದ್ದೀರಾ? ಮೋದಿಯವರು 5 ಕೆಜಿ ಅಕ್ಕಿ ಕೊಡದೇ ಇದ್ದರೆ, ನಿಮ್ಮನ್ನೇ ನಂಬಿದ್ದರೆ ಜನರು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು ಮಲಗಬೇಕಿತ್ತು ಎಂದು ತಿಳಿಸಿದರು. ನಿಮ್ಮ ಕಂಡಿಷನ್ ಯಾಕೆ, ಖಜಾನೆ ಖಾಲಿ ಎಂಬುದು ಜನರಿಗೆ ಗೊತ್ತಿದೆ ಎಂದು ತಿಳಿಸಿದರು.

ಫಲಾನುಭವಿ ಜನರನ್ನು ಕಡಿಮೆ ಮಾಡಲು ಕಂಡಿಷನ್ ಹಾಕುತ್ತೀರಿ. ನಿಮ್ಮ ಹಳೆ ಭಾಷಣವನ್ನು ಜನರು ಕೇಳಿಸಿಕೊಳ್ಳುತ್ತಾರೆ ಎಂದರು. ಇದಕ್ಕೆ ಸೂಕ್ತ ಸಮಯದಲ್ಲಿ ಜನರು ಉತ್ತರ ಕೊಡುತ್ತಾರೆ ಎಂದು ಹೇಳಿದರು. ನಮಗೂ ಗ್ಯಾರಂಟಿ ಯೋಜನೆಗಳಿಗೂ ಸಂಬಂಧ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರೆ, ನಾವು ಪ್ರಶ್ನೆ ಮಾಡುವುದಿಲ್ಲ ಎಂದು ಸವಾಲು ಹಾಕಿದರು.
ಗೃಹಲಕ್ಷ್ಮಿ ಕೊಡಬೇಕಾಗುತ್ತದೆ ಎಂದು ಹೊಸ ಬಿಪಿಎಲ್ ಕಾರ್ಡ್ ಕೊಡುವುದನ್ನೂ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು. ಇದರಿಂದಾಗಿ ಅರ್ಹ ಫಲಾನುಭವಿಗಳು ಬಿಪಿಎಲ್ ಕಾರ್ಡ್ ನಿಂದಲೂ ವಂಚಿತರಾಗಿದ್ದಾರೆ ಎಂದು ಗಮನಕ್ಕೆ ತಂದರು. ಇದು ಸರಿಯಲ್ಲ ಎಂದು ತಿಳಿಸಿದರು.
ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿಯೇ ಜಾತ್ಯತೀತತೆಯೇ ಎಂದು ಅವರು ಸಚಿವ ಸ್ಥಾನ ಹಂಚಿಕೆ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು. ಅಹಿಂದದೊಳಗೆ ಒಂದು ಜಾತಿ ಮಾತ್ರ ಇದೆಯೇ ಎಂದು ಕೇಳಿದರು. ಎಲ್ಲ ಜಾತಿಯವರಿಗೂ ಸಮಾನ ಅವಕಾಶ ಎಂಬುದು ಜಾತ್ಯತೀತತೆ ಎಂದು ಭಾವಿಸಿದ್ದೇನೆ ಎಂದು ನುಡಿದರು.
ಇದೇ ವೇಳೆ, ರಾಜ್ಯದಲ್ಲಿ ರಸಗೊಬ್ಬರ ಬೇಡಿಕೆಗೆ ಅನುಗುಣವಾಗಿ ಸ್ಟಾಕ್ ಇದೆ ಎಂದು ಹಿಂದಿನ ಕೃಷಿ ಸಚಿವರು ಹೇಳಿಕೆ ನೀಡಿದ್ದರು. ಹಾಗಿದ್ದರೆ ಕೊರತೆ ಹೇಗೆ? ಯಾಕೆ ಕಾಳಸಂತೆಯಲ್ಲಿ ಮಾರಾಟ ಆಗುತ್ತಿದೆ ಎಂಬುದಕ್ಕೆ ಹೊಸ ಸರಕಾರ ಮತ್ತು ಅಧಿಕಾರಿಗಳು ಉತ್ತರ ಕೊಡಲಿ ಎಂದು ರವಿ ಆಗ್ರಹಿಸಿದರು. ಯೂರಿಯ ಕೇರಳ, ತಮಿಳುನಾಡಿಗೆ ಹೋಗುವ ದೂರು ಇದೆ. ಅದರ ಕಡೆ ಗಮನಿಸಿ, ರೈತರಿಗೆ ಸಮರ್ಪಕವಾಗಿ ಗೊಬ್ಬರ ಸಿಗುವಂತೆ ನೋಡಿಕೊಳ್ಳಿ ಎಂದು ಒತ್ತಾಯಿಸಿದರು. ಕಾಳಸಂತೆಯಲ್ಲಿ ಫ್ಯಾಕ್ಟರಿಗೆ ಸರಬರಾಜು ಮಾಡಲು ಅವಕಾಶ ಕೊಡದಿರಿ ಎಂದು ಆಗ್ರಹವನ್ನು ಮುಂದಿಟ್ಟರು.




































































