ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನ ನಿಯಂತ್ರಣ ರೇಖೆ (LoC) ಬಳಿ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ಬುಧವಾರ ಉರಿ ಸೆಕ್ಟರ್ನ ಕಮಲ್ಕೋಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಸ್ಫೋಟದಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಶ್ರೀನಗರದ ಬಾದಾಮಿಬಾಗ್ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಸೇನಾ ಮೂಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈನಿಕರನ್ನು ಮಹಾರಾಷ್ಟ್ರ ಮೂಲದ ಅರ್ಜುನ್ ಜಾಧವ್ ಮತ್ತು ವಿಕ್ರಮ್ ಬಾಲಕೃಷ್ಣ ಎಂದು ಗುರುತಿಸಲಾಗಿದೆ. ಇಬ್ಬರೂ 8 ರಾಷ್ಟ್ರೀಯ ರೈಫಲ್ಸ್ ಘಟಕಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಸ್ಫೋಟ ಸಂಭವಿಸಿದ ನಿಖರ ಕಾರಣದ ಬಗ್ಗೆ ಸೇನೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ನಿರೀಕ್ಷಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕಣಿವೆ ಭಾಗದಲ್ಲಿ ಬಾರಾಮುಲ್ಲಾ, ಕುಪ್ವಾರಾ ಮತ್ತು ಬಂಡಿಪೋರಾ ಜಿಲ್ಲೆಗಳ ಮೂಲಕ ಸುಮಾರು 740 ಕಿ.ಮೀ ಉದ್ದದ ನಿಯಂತ್ರಣ ರೇಖೆ ಹಾದು ಹೋಗುತ್ತದೆ. ಜಮ್ಮು ವಿಭಾಗದಲ್ಲಿ LoC ಪೂಂಚ್, ರಾಜೌರಿ ಮತ್ತು ಭಾಗಶಃ ಜಮ್ಮು ಜಿಲ್ಲೆಗಳಲ್ಲಿದೆ.




































































