ಮಂಗಳೂರು: ದಸರಾ ಆಚರಣೆಗೆ ಸಿದ್ದತೆ ಒಂದೆಡೆಯಾದರೆ ‘ಓಣಂ’ ಸಡಗರ ಇನ್ನೊಂದೆಡೆ. ಈ ಪರ್ವ ಕಾಲದ ಸಂಭ್ರಮದಲ್ಲಿ ಮಿಂದೆದ್ದವರು ಮಂಗಳೂರಿನ ಕರಾವಳಿ ಕಾಲೇಜ್ ವಿದ್ಯಾರ್ಥಿಗಳು. ಅಂದ ಹಾಗೆ, ಜಿ.ಆರ್.ಮೆಡಿಕಲ್ ಕಾಲೇಜ್ ಸಹಿತ ಪ್ರತಿಷ್ಠಿತ ‘ಕರಾವಳಿ ಕಾಲೇಜ್ ಸಮೂಹ’ದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಿಗೆ ಈ ವಾರ ಪೂರ್ತಿ ಎಂದಿಲ್ಲದ ಸಂಭ್ರಮ, ಸಡಗರ. ಈ ವಿದ್ಯಾರ್ಥಿಗಳು ನಾಡಿನ ಶ್ರೀಮಂತ ಹಬ್ಬವನ್ನು ಆಚರಿಸಿದ ವೈಖರಿಯು ನಾಡಿನ ಗಮನಸೆಳೆಯಿತು.
‘ಪರಿಸರ ದೂರವಾದರೂ ತಮ್ಮೂರಿನ ಸಂಸ್ಕೃತಿ ಪರಂರೆಯಿಂದ ದೂರವಾಗಬಾರದು’ ಎಂಬುದು ತಿಳಿದವರ ಮಾತು. ಆ ಶುಭಾಷಿತದಂತೆ ನಡೆದುಕೊಂಡವರು ಮಂಗಳೂರಿನ ಕರಾವಳಿ ಕಾಲೇಜಿನ ಮಕ್ಕಳು. ಓಣಂ ಹಬ್ಬ ಸಂಭ್ರಮದದಲ್ಲಿ ಬಗೆ ಬಗೆಯ ರಂಗೋಲಿ ಬಿಡಿಸಿ ಆಚರಣೆಗೆ ರಂಗು ತಂದವರು ಹೆಣ್ಮಕ್ಕಳು, ಈ ಆಚರಣೆಗೆ ಸಾಂಸ್ಕೃತಿಕ ವೈಭವದ ಸ್ಪರ್ಶ ನೀಡಿದವರು ಹುಡುಗರು. ಈ ಸಡಗರಕ್ಕೆ ಶ್ರೀಮಂತಿಕೆ ತುಂಬಿದವರು ಗುರು ವೃಂದ.
ತುಳುನಾಡಲ್ಲಿ ‘ರಂಗೋಲಿ’ ರಂಗು..
ನೆರೆಯ ಕೇರಳದ ಶ್ರೀಮಂತ ಹಬ್ಬ ಮಂಗಳೂರು ಕಡಲತಡಿಯಲ್ಲಿ ಪ್ರತಿಬಿಂಬಿಸಿದಾಗ ತುಳುನಾಡಿನ ಮಂದಿಯಲ್ಲೂ ಎಂದಿಲ್ಲದ ಪುಳಕ. ಈ ಅಪೂರ್ವ ಶ್ರೀಮಂತ ವೈಭವಕ್ಕೆ ಕರಾವಳಿ ಕಾಲೇಜು ಸಾಕ್ಷಿಯಾಯಿತು.
ಯಾವುದೇ ಧಾರ್ಮಿಕ ಹಬ್ವವೇ ಇರಲಿ, ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಆ ಹಬ್ಬಗಳನ ಎಲ್ಲಾಅ ಜಾತಿ-ಧರ್ಮದವರೂ ಭಾಗಿಯಾಗಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ದೇಶ-ವಿದೇಶಗಳ ವಿದ್ಯಾರ್ಥಿಗಳು, ವಿವಿಧ ರಾಜ್ಯಗಳ ಮಕ್ಕಳು ತಮ್ಮೂರನ್ನು ಬಿಟ್ಟು, ಕುಟುಂಬ ವರ್ಗದಿಂದ ದೂರವಿದ್ದು :ಕರಾವಳಿ’ಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಮಕ್ಕಳು ತಮ್ಮ ಹಬ್ವದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರಾವಳಿ ಕಾಲೇಜ್ ಮುಖ್ಯಸ್ಥ ಎಸ್.ಗಣೇಶ್ ರಾವ್ ಅವರು ತಮ್ಮ ಶಿಕ್ಷಣ ಸಂಸ್ಥೆ ವತಿಯಿಂದಲೇ ಹಬ್ವ ಆಚರಿಸುತ್ತಾರೆ. ಓಣಂ, ದೀಪಾವಳಿ ಸಹಿತ ವಿವಿಧ ಹಬ್ಬಗಳ ಸಂದರ್ಭದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಹಾಗೂ ಗುರುವೃಂದವನ್ನೇ ಪರಿವಾರ ಸಮೂಹ ಎಂಬಂತೆ ಪರಿಗಣಿಸಿ ಎಲ್ಲಿಲ್ಲದ, ಎಂದಿಲ್ಲದ ಸಡಗರದಲ್ಲಿ ಮಿಂದೇಳುತ್ತಾರೆ. ಅದೇ ರೀತಿಯಲ್ಲಿ ಈ ಬಾರಿಯೂ ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜ್, ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಫಾರ್ಮಸಿ ಕಾಲೇಜು, ಕರಾವಳಿ ಫ್ಯಾಷನ್ ಡಿಸೈನ್, ಕರಾವಳಿ ನರ್ಸಿಂಗ್, ಮ್ಯಾನೇಜ್ಮೆಂಟ್ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳು ವಿಶೇಷ ‘ಓಣಂ’ ಆಚರಣೆಯಲ್ಲಿ ಭಾಗಿಯಾದರು.
ಎಲ್ಲಾ ವಿದ್ಯಾರ್ಥಿಗಳು ಕೇರಳದ ಸಾಂಪ್ರದಾಯಿಕ ಉಡುಪು ಧರಿಸಿ ಕೇರಳದ ಸೊಗಡಿನ ಹಿತಾನುಭವಕ್ಕೆ ಸಾಕ್ಷಿಯಾದರು. ಕೇರಳದ ಸಾಂಪ್ರದಾಯಿಕ ಚೆಂಡೆ-ವಾದನ, ಕೊಂಬು-ಕಹಳೆ, ತಾಳ-ಮೇಳ, ಕಥಕ್ಕಳಿಯಂತಹಾ ವೇಷ ಭೂಷಣ, ಕರುನಾಡಿನ ಯಕ್ಷಗಾನದ ಸನ್ನಿವೇಶ, ನೃತ್ಯ ರೂಪಕಗಳ ಸಮ್ಮಿಳಿತದೊಂದಿಗೆ ಮಂಗಳೂರಿನ ಬೀದಿಯಲ್ಲಿ ಸಾಗಿದ ಭವ್ಯ ಮೆರವಣಿಗೆಯು ಈ ನಾಡಿನ ಭಾವೈಕ್ಯತೆಯ ಸಿರಿವಂತಿಕೆಯನ್ನು ಅನಾವರಣಗೊಳಿಸಿತು.
ಜಿ.ಆರ್.ಎಜುಕೇಷನ್ ಟ್ರಸ್ಟ್ ಮುಖ್ಯಸ್ಥರಾದ ಗಣೇಶ್ ರಾವ್, ಲತಾ ಜಿ.ರಾವ್ ಸಹಿತ ಕರಾವಳಿ ಕಾಲೇಜ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಮುಖರನೇಕರು ಈ ವಿದ್ಯಾರ್ಥಿಗಳ ಖುಷಿಯಲ್ಲಿ ಭಾಗಿಯಾದರು.
ಪುರಾಣ ಕಥಡಯಲ್ಲಿರುವಂತೆ ‘ಮಹಾಬಲಿ’ಯನ್ನು ನಾಡಿಗೆ ಆಮಂತ್ರಿಸುವ ಸನ್ನಿವೇಶವನ್ನು ನೆನಪಿಸುವ ಹಬ್ಬವೇ ‘ಓಣಂ’. ಈ ಸನ್ನಿವೇಶಕ್ಕೆ ತಕ್ಕಂತಹಾ ಪಾತ್ರಗಳಲ್ಲಿ ವಿದ್ಯಾರ್ಥಿ ಸಮೂಹ ಬಿಂಬಿತವಾಗಿದ್ದುದೇ ಈ ‘ಕರಾವಳಿ ಹಬ್ಬ’ದ ವೈಶಿಷ್ಟ್ಯವಾಗಿತ್ತು.
ಪೂಕಳಂ ಹಬ್ವದಲ್ಲಿ ರಂಗೋಲಿಗಷ್ಟೇ ಮಹತ್ವವಲ್ಲ, ಓಣಂ ಹಬ್ವದ್ದೇ ಆದ ತಿಂಡಿ ತಿನಿಸು ಪಾಯಸವನ್ನೂ ವಿದ್ಯಾರ್ಥಿಗಳಿಗೆ ಉಣಬಡಿಸಿದ್ದೂ ಇಲ್ಲಿನ ವಿಶೇಷ.
ಮಂಗಳೂರಿನ ಟಿ.ಎಂಎ.ಪೈ ಸಭಾಂಗಣದ ಭವ್ಯ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಕರಾವಳಿ ಓಣಂ’ ಆಚರಣೆಯ ಆಕರ್ಷಣೆಯನ್ನು ಹೆಚ್ಚಿಸಿತ್ತು.
ಪ್ರಾದೇಶಿಕ ಮಮತೆಗೆ ಮುನ್ನುಡಿ..
ಹಬ್ಬ ಸಂಭ್ರಮದ ಸಮಾರಂಭ ‘ಸರ್ವ ಧರ್ಮ ಉತ್ಸವ’ದ ಸ್ವರೂಪದಂತಿದ್ದುದು ವಿಶೇಷ. ವಿವಿಧ ಧರ್ಮದ ವಿದ್ಯಾರ್ಥಿಗಳ ಸಮಾಗಮದಿಂದಾಗಿ ನೆರೆದಿದ್ದವರೆಲ್ಲರೂ ಕೇರಳ ಸಮಾಜದ ಬಂಧುಗಳಂತೆ ಭಾಸವಾಗಿದ್ದರು. ಈ ದೃಶ್ಯ ಸೊಬಗನ್ನು ಕಂಡು ಪುಳಕಿತರಾದ ಶಿಕ್ಷಣ ತಜ್ಞರೂ ಆದ ಗಣೇಶ್ ರಾವ್, ಶಿಕ್ಷಣವು ಪಠ್ಯಕ್ಕಷ್ಟೇ ಸೀಮಿತವಾಗಿರಬಾರದು ಸಂಸ್ಕೃತಿ-ಸೌರಭದ ಮಹತ್ವ ತಿಳಿಯುವ ಕ್ಷೇತ್ರದಂತಿರಬೇಕು. ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ತಿಳಿಯುವ ಅವಕಾಶ ಇದ್ದಾಗ ಅದನ್ನು ಸಾಕಾರಗೊಳಿಸಬೇಕು ಎಂದರು. ನಿರ್ದಿಷ್ಟ ಗುರಿ ಸಾಧಿಸುವ ಪ್ರಯಾಣದಲ್ಲಿ ಮನುಷ್ಯತ್ವದ ಸೂತ್ರವನ್ನು ಮೈಗೂಡಿಸಿಕೊಳ್ಳುವಂತೆ ಯುವಜನರಿಗೆ ಕಿವಿಮಾತು ಹೇಳಿದ ಗಣೇಶ್ ರಾವ್, ನಮ್ಮತನದ ಅರಿವಿಲ್ಲದಿದ್ದರೆ, ನಮ್ನತನದ ಬಗ್ಗೆ ಅಭಿಮಾನವಿಲ್ಲದಿದ್ದರೆ ಯಾವುದೂ ಫಲಪ್ರದವಾಗಲ್ಲ. ನಮ್ಮತನದ ಚಿಂತನೆ ಇಲ್ಲದಿದ್ದರೆ, ಎಷ್ಟೇ ದೊಡ್ಡ ತಂತ್ರಜ್ಞನೂ ಫಲಪ್ರದ ಗುರಿ ಸಾಧಿಸಲಾರ. ಹಾಗಾಗಿ ಪ್ರಾದೇಶಿಕ ಪ್ರೇಮದ ಅಗತ್ಯತೆಯು ಎಲ್ಲಾ ಕಾಲದಲ್ಲೂ ಎಲ್ಲರಲ್ಲೂ ಇರಬೇಕಿದೆ ಎಂದರು. ಒಂದು ವೇಳೆ ಈ ಸೂತ್ರದ ಕೊರತೆ ಕಂಡುಬಂದಲ್ಲಿ ಯಾವುದೇ ಕೆಲಸ ಫಲಪ್ರದವಾಗಲ್ಲ ಎಂದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಸರ್ಕಾರದ ಯೋಜನೆಗಳು ಹಳ್ಳ ಹಿಡಿದಿರುವದನ್ನು ಉದಾಹರಿಸಿದರು.
‘ಓಣಂ’ ಸಹಿತ ವಿವಿಧ ಹಬ್ಬಗಳ ಮೂಲಕ ಸಾಮರಸತೆಗೆ ಕರಾವಳಿ ಕಾಲೇಜ್ ಮುನ್ನುಡಿ ಬರೆದಿತ್ತು. ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿ ಈ ರೀತಿಯ ಕಾರ್ಯಕ್ರಮವು ಉತ್ಸವ ರೂಪ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.