ಮಂಗಳೂರು: ರಾಜ್ಯ ಕರಾವಳಿಯಲ್ಲಿ ಮತ್ತೊಮ್ಮೆ ಆತಂಕದ ಛಾಯೆ ಆವರಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಎಂಬಲ್ಲಿ ಐದು ಗ್ರೆನೇಡ್ ಪತ್ತೆಯಾಗಿದೆ.
ಇಳಂತಿಲ ಗ್ರಾಮದ ಜಯಕುಮಾರ್ ಎಂಬುವವರಿಗೆ ಈ ಗ್ರೆನೇಡ್ ಗಳು ಕಾಣಿಸಿಕೊಂಡಿದ್ದು, ಅವರು ನೀಡಿದ ಮಾಹಿತಿ ಆಧಾರಿಸಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಈ ಸ್ಫೋಟಕಗಳನ್ನು ಸ್ಥಳಾಂತರಿಸಿದ್ದಾರೆ.
ನಿವೃತ್ತ ಯೋಧರಾಗಿರುವ ಜಯಕುಮಾರ್ ಅವರಿಗೆ ಈ ಸ್ಫೋಟಕ ಸಿಕ್ಕಿದ್ದು, ಅವುಗಳನ್ನು ಮನೆಯ ಅಂಗಳದ ಬಳಿ ಇಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಯಕುಮಾರ್ ಅವರು ಭೂಸೇನಾ ರೆಜಿಮೆಂಟ್ ನಲ್ಲಿ ಹಿಂದೆ ಎಸ್.ಸಿ.ಒ ಆಗಿದ್ದರು. ಹಾಗಾಗಿ ಅವರಿಗೆ ಈ ನಿಗೂಢ ವಸ್ತು ಗ್ರೆನೇಡ್ ಎಂಬುದು ಗೊತ್ತಾಗಿದೆ.
ಸುಮಾರು 40 ವರ್ಷ ಹಳೆಯ ಕಾಲದ ಗ್ರೆನೇಡ್ ಇದಾಗಿದೆ ಎಂದು ಹೇಳಲಾಗುತ್ತಿದೆ. ಸೇನೆಯಲ್ಲಿ ಬಳಸುವಂತಹಾ ಗ್ರೆನೇಡ್ ಇದಾಗಿದ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಉಪ್ಪಿನಂಗಡಿ ಠಾಣೆಯ ಪೊಲೀಸರು ಈ ಸ್ಫೋಟಕವನ್ನು ವಶಕ್ಕೆ ಪಡೆದಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಈ ಗ್ರೆನೇಡ್ಗಳು ಈ ಊರಿಗೆ ಹೇಗೆ ಬಂತು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.