ಬೆಂಗಳೂರು: ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಮುಖ್ಯಮಂತ್ರಿ ಹುದ್ದೆಗೆ ನಿಯೋಜಿತರಾಗಿರುವ ಡಿ.ಕೆ. ಶಿವಕುಮಾರ್ ಹಾಗೂ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಆರ್ಸಿಬಿಯ ಐತಿಹಾಸಿಕ ಗೆಲುವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ತಂಡದ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.
“ಆರ್ಸಿಬಿ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿಯುದ್ದಕ್ಕೂ ಆರ್ಸಿಬಿ ಆಟಗಾರರು ಪ್ರದರ್ಶಿಸಿದ ನಿರ್ಭೀತಿಯ ಕ್ರಿಕೆಟ್ ಎದುರಾಳಿ ತಂಡಗಳಿಗೆ ಉತ್ತರವೇ ಇಲ್ಲದಂತೆ ಮಾಡಿತು. ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ನಮ್ಮ ಆರ್ಸಿಬಿಗೆ ಅಭಿನಂದನೆಗಳು. ತಂಡದ ಒಗ್ಗಟ್ಟಿನ ಪ್ರಯತ್ನದಿಂದ ಸಾಧಿಸಿದ ಈ ಗೆಲುವು ಆರ್ಸಿಬಿ ಅಭಿಮಾನಿಗಳ ಮನೆಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ” ಎಂದು ತಿಳಿಸಿದ್ದಾರೆ.
ಅಲ್ಲದೆ, ಆರ್ಸಿಬಿ ವಿಜಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಸಾರ್ವಜನಿಕರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಅವುಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. “ಈ ಸಲವೂ ಕಪ್ ನಮ್ಮದೇ” ಎಂದು ತಮ್ಮ ಸಂದೇಶದ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಹುದ್ದೆಗೆ ನಿಯೋಜಿತರಾಗಿರುವ ಡಿ.ಕೆ. ಶಿವಕುಮಾರ್ ಕೂಡ ಆರ್ಸಿಬಿಗೆ ಅಭಿನಂದನೆ ಸಲ್ಲಿಸಿದ್ದಾರೆ.
“ಈ ಸಲವೂ ಕಪ್ ನಮ್ದೇ. ಸತತ ಎರಡನೇ ಐಪಿಎಲ್ ಪ್ರಶಸ್ತಿ ಗೆಲ್ಲುವ ಮೂಲಕ ಆರ್ಸಿಬಿ ಹೊಸ ಇತಿಹಾಸ ನಿರ್ಮಿಸಿದೆ. ದೃಢ ಸಂಕಲ್ಪ, ಸಮಚಿತ್ತತೆ ಹಾಗೂ ನಿಜವಾದ ಚಾಂಪಿಯನ್ಗಳ ಹೋರಾಟದ ಮನೋಭಾವದೊಂದಿಗೆ ತಂಡ ಮತ್ತೊಮ್ಮೆ ಬೆಂಗಳೂರಿನ ಹೆಮ್ಮೆ ಹೆಚ್ಚಿಸಿದೆ. ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಹಾಗೂ ತಂಡದ ಜೊತೆ ಪ್ರತಿಯೊಂದು ಹಂತದಲ್ಲೂ ನಿಂತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಅಭಿನಂದನೆಗಳು. ಇದು ಆರ್ಸಿಬಿಯ ಸುವರ್ಣ ಅಧ್ಯಾಯ” ಎಂದು ಡಿ.ಕೆ. ಶಿವಕುಮಾರ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಆರ್ಸಿಬಿಯ ಸತತ ಎರಡನೇ ಪ್ರಶಸ್ತಿ ಗೆಲುವು ರಾಜ್ಯಾದ್ಯಂತ ಸಂಭ್ರಮಕ್ಕೆ ಕಾರಣವಾಗಿದ್ದು, ಅಭಿಮಾನಿಗಳು ವಿಜಯೋತ್ಸವದಲ್ಲಿ ತೊಡಗಿದ್ದಾರೆ.




























































