ಕರ್ನಾಟಕದಲ್ಲಿ ಬಂಡವಾಳ ಹೂಡಲು ಅನಿವಾಸಿ ಭಾರತೀಯರಿಗೆ ಸಚಿವ ಮುರುಗೇಶ್ ನಿರಾಣಿ ಆಹ್ವಾನ.. ದುಬೈನಲ್ಲಿ ಅನಿವಾಸಿಯರ ಜೊತೆ ಮಾತುಕತೆ.. ರಾಜ್ಯಕ್ಕೆ ಬರುವ ಉದ್ಯಮಿಗಳಿಗೆ ರತ್ನಗಂಬಳಿ.. ಹೊಸಕ್ರಾಂತಿಗೆ ಮುನ್ನುಡಿ..
ದುಬೈ: ದುಬೈನಲ್ಲಿ ನೆಲೆಸಿರುವ ಅನಿವಾಸಿಯರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದರೆ, ಎಲ್ಲಾ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದ್ದಾರೆ.
ದುಬೈನಲ್ಲಿ ಶನಿವಾರ ಬಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಇಂದು ದೇಶದಲ್ಲೇ ಅತ್ತುತ್ತಮ ಕೈಗಾರಿಕಾ ತಾಣವಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣ, ನಮ್ಮಲ್ಲಿರುವ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳಿಂದ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.
ಅನಿವಾಸಿಯರು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದರೆ, ಅಗತ್ಯವಿರುವ ಭೂಮಿ, ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಾಲಮಿತಿಯೊಳಗೆ ಒದಗಿಸಿ ಕೊಡುವುದಾಗಿ ಆಶ್ವಾಸನೆ ನೀಡಿದರು.
ನಾವು ಜಾರಿಗೆ ತಂದಿರುವ ನೂತನ ‘ಕೈಗಾರಿಕಾ ನೀತಿ’ ದೇಶಕ್ಕೆ ಮಾದರಿಯಾಗಿದೆ. ಇದರಿಂದ ಆಕರ್ಷಿತರಾಗಿರುವ ಉದ್ಯಮಿಗಳು ಸ್ವಯಂಪ್ರೇರಿತರಾಗಿ ಉದ್ಯಮ ಆರಂಭಿಸಲು ಮುಂದೆ ಬರುತ್ತಿದ್ದಾರೆ. ಇದರಿಂದಾಗಿ ಕೈಗಾರಿಕಾ ವಲಯದಲ್ಲಿ ‘ ಹೊಸ ಚೈತನ್ಯ ‘ ಕಂಡು ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಡವಾಳ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ‘ ಕೆಂಪು ರತ್ನಗಂಬಳಿ’ ಹಾಕಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ‘ದೊಡ್ಡ ಕ್ರಾಂತಿಯನ್ನೇ ‘ ಸೃಷ್ಟಿಸಲಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ತ್ರೈಮಾಸಿಕ ಅವಧಿಯಲ್ಲಿ ಇಡೀ ದೇಶದಲ್ಲೇ
ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ ( ಎಪ್ ಡಿಐ) ಯಾಗಿರುವುದು ಕರ್ನಾಟಕದಲ್ಲಿ. ಈ ಬೆಳವಣಿಗೆ ನಮ್ಮ ರಾಜ್ಯ ಕೈಗಾರಿಕೆಯಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ ಎಂಬುದರ ಮುನ್ಸೂಚನೆ ಎಂದು ಹೇಳಿದರು.
ಎಂದಿಂದೆಗೂ ಆಜಾರಮರ!
ಇನ್ನು ಸಚಿವ ನಿರಾಣಿ ಅವರು, ತಮ್ಮ ಭಾಷಣದಲ್ಲಿ
ಕಾಯಕಯೋಗಿ ಬಸವಣ್ಣನವರ ಸಂದೇಶಗಳು ಇಂದಿನ ಯುವ ಜನಾಂಗಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.12 ನೇ ಶತಮಾನದಲ್ಲೇ ಜಾತಿಯ ವಿರುದ್ಧ ಹೋರಾಟ ನಡೆಸಿ ‘ ಜಾತ್ಯಾತೀತ ‘ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದರು.ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದ ಅವರ ಸಂದೇಶಗಳು ಎಂದೆಂದಿಗೂ ಆಜಾರಮರ ಎಂದು ಹೇಳಿದರು.
‘ಕಾಯಕವೇ ಕೈಲಾಸ ‘ ಎಂಬ ಸಂದೇಶದ ಮೂಲಕ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಾರಿದ್ದರು. ಇಂದಿನ ಯುವಜನಾಂಗ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದರೆ ಖಂಡಿತ ‘ ಯಶಸ್ಸು’ ಸಿಗುತ್ತವೆ ಎಂದು ನಿರಾಣಿ ಅವರು ಸಲಹೆ ಮಾಡಿದರು.
ಇಲ್ಲಿ ನೆಲೆಸಿರುವ ಅನಿವಾಸಿಯರು ಬಸವಣ್ಣನವರ ಸಂದೇಶಗಳನ್ನು ಪ್ರಚುರಪಡಿಸಲು ಮುಂದಾಗಬೇಕು.ನಿಮಗೆ ಎಲ್ಲಾ ರೀತಿಯ ಬೆಂಬಲ ಹಾಗೂ ಸಹಕಾರ ನೀಡಲಾಗುವುದು ಎಂದು ಭರವಸೆ ಕೊಟ್ಡರು.
ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಪದಾಧಿಕಾರಿಗಳಾದ ಚಂದ್ರಶೇಖರ್ ಲಿಂಗದಹಳ್ಳಿ, ನಿವೃತ್ತ ಪೊಲೀಸ್ ಮಹಾನಿದೇರ್ಶಕ ಶಂಕರ್ ಬಿದರಿ
ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.