ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಜಯಗಳಿಸಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.
ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ಅಂಚೆ ಮತಪತ್ರಗಳ ಮರುಪರಿಶೀಲನೆ ನಡೆಸಲಾಗಿದ್ದು, ಎಣಿಕೆ ವೇಳೆ ಕೆಲವು ಮತಪತ್ರಗಳಲ್ಲಿ ‘ಡಬ್ಬಲ್ ಟಿಕ್’ ಕಂಡುಬಂದ ಹಿನ್ನೆಲೆ ಅವುಗಳನ್ನು ತಿರಸ್ಕರಿಸಲಾಗಿದೆ.
ಮರುಎಣಿಕೆ ವೇಳೆ ಸಿಂಧು ಮತ್ತು ಅಸಿಂಧು ಮತಗಳ ಲೆಕ್ಕಾಚಾರ ನಡೆಯಿತು. ಈ ಸಂದರ್ಭದಲ್ಲಿ ‘ಡಬ್ಬಲ್ ಟಿಕ್’ ಇರುವ ಕಾರಣಕ್ಕೆ 258 ಮತಗಳನ್ನು ತಿರಸ್ಕರಿಸಲಾಗಿದೆ. ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಪಡೆದಿದ್ದ 569 ಅಂಚೆ ಮತಗಳಲ್ಲಿ 255 ಮತಗಳು ಕಡಿತಗೊಂಡಿವೆ ಎಂದು ಹೇಳಲಾಗಿದೆ. ಇನ್ನೊಂದೆಡೆ, ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ. ಈ ಬೆಳವಣಿಗೆಯಿಂದ ಅಂತಿಮ ಫಲಿತಾಂಶದಲ್ಲಿ ಬದಲಾವಣೆ ಸಾಧ್ಯತೆ ಹೆಚ್ಚಾಗಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.
ಈ ನಡುವೆ ಸಾಮಾಜಿಕ ಜಾಲತಾಣ ‘X’ನಲ್ಲಿ ಬಿಜೆಪಿ ಪ್ರಕಟಣೆ ನೀಡಿ, “ನಿರಂತರ ಹೋರಾಟ ಮತ್ತು ಪರಿಶ್ರಮದ ಫಲವಾಗಿ, ಹೈಕೋರ್ಟ್ ಆದೇಶದಂತೆ ನಡೆದ ಮರುಎಣಿಕೆಯಲ್ಲಿ ನಮ್ಮ ಅಭ್ಯರ್ಥಿ ಡಿ.ಎನ್. ಜೀವರಾಜ್ ಜಯ ಸಾಧಿಸಿದ್ದಾರೆ” ಎಂದು ಹೇಳಿದೆ.
ಸತತ ಪರಿಶ್ರಮ ಮತ್ತು ದಣಿವರಿಯದ ಹೋರಾಟಕ್ಕೆ ಪ್ರತಿಫಲ ದೊರೆತಿದ್ದು, ಹೈಕೋರ್ಟ್ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಪಕ್ಷದ ಶ್ರೀ ಡಿ. ಎನ್. ಜೀವರಾಜ್ ಅವರು ಗೆಲುವು ಸಾಧಿಸಿದ್ದಾರೆ. ಅವರಿಗೆ ಮತ್ತು ಶೃಂಗೇರಿ ಕ್ಷೇತ್ರದ ಮತದಾರ ಬಂಧುಗಳಿಗೆ ಅಭಿನಂದನೆಗಳು. #BJP4Karnataka pic.twitter.com/dcgswDMd2i
— BJP Karnataka (@BJP4Karnataka) May 3, 2026






















































