ಬೆಂಗಳೂರು: ಮುಂಬರುವ ವರ್ಷದಲ್ಲಿ ಆರ್ಥಿಕ ಸುಧಾರಣೆ, ಸ್ಥಿರೀಕರಣ ಮತ್ತು ಬೆಳೆವಣಿಗೆಗೆ ಪೂರಕವಾದ ಕೇಂದ್ರ ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ.
2022-23ನೇ ಸಾಲಿನ ಕೇಂದ್ರ ಮುಂಗಡ ಪತ್ರಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ನೆರಳಿನಲ್ಲಿ ಭಾರತದ ಆರ್ಥಿಕತೆಯನ್ನು ಶೇ.9.2 % ಹೆಚ್ಚಿಸುವ ಗುರಿಯಯನ್ನು ಹೊಂದಿದೆ. ಬಂಡವಾಳ ಹೂಡಿಕೆ ಹಾಗೂ ಬಳಕೆ ಎರಡೂ ಹೆಚ್ಚಿಸುವ ದೂರದೃಷ್ಟಿಯಿಂದ ಈ ಬಾರಿಯ ಬಜೆಟ್ ಮಂಡಿಸಲಾಗಿದೆ ಎಂದರು.
ಬಂಡವಾಳ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯ ಮುಖಾಂತರ ಆರ್ಥಿಕತೆ ಹೆಚ್ಚುತ್ತದೆ. ಉತ್ಪಾದನೆ ಹಚ್ಚಿ ಬಳಕೆ ಜಾಸ್ತಿಯಾದಾಗ ಆರ್ಥಿಕತೆ ಹೆಚ್ಚುತ್ತದೆ. ಮೂಲಸೌಕರ್ಯಗಳ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಡಿಜಿಟಲ್ ಆರ್ಥಿಕತೆ ಮತ್ತು ರಾಜ್ಯಗಳಿಗೆ ಬಹು ಮಾದರಿ ಸಂಪರ್ಕ ಗಳ ಕ್ಷೇತ್ರದಲ್ಲಿ ಹೂಡಿಕೆಯಾಗಲಿದೆ ಎಂದು ತಿಳಿಸಿದರು.
ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಜೆಟ್. ಜಲಜೀವನ ಮಿಷನ್ , ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಪ್ರಧಾನ ಮಂತ್ರಿ ಆವಾಸ ಯೋಜನೆ, ಪ್ರಧಾನ ಮಂತ್ರಿ ಸಡಕ್ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ. ಗ್ರಾಮೀಣ ಭಾರತವನ್ನು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯ ಬಜೆಟ್. ಜನಸಾಮಾನ್ಯರ ನಿರೀಕ್ಷೆಗೆ ತಕ್ಕುದಾದ ಹಾಗೂ ಅವರ ಅವಶ್ಯಕತೆಗೆ ಪೂರಕವಾಗಿ ಕುಡಿಯುವ ನೀರು, ರಸ್ತೆ, ಮನೆ ನಿರ್ಮಾಣ ಮಾಡಲು ಬಹಳ ಒತ್ತು ನೀಡಿರುವ ಬಜೆಟ್ ಇದಾಗಿದೆ ಎಂದು ತಿಳಿಸಿದರು.
ಡಿಜಿಟಲೈಶೇಷನ್, ಟೌನ್ ಪ್ಲಾನ್ ತಜ್ಞರ ಬಳಕೆಗೆ ಒತ್ತು ನೀಡಲಾಗಿದ್ದು, ನಗರ ಸಾರಿಗೆಗೆ ದೊಡ್ಡ ಪ್ರಮಾಣ ಅನುದಾನ ಮೀಸಲಿಡಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಸಮಾನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ದೇಶದ ಕೃಷಿಯಲ್ಲಿ ಸ್ವಾವಲಂಬನೆಯ ಗುರಿ ಹೊಂದಲಾಗಿದೆ. ನೈಸರ್ಗಿಕ ಕೃಷಿ ಮತ್ತು ಎಣ್ಣೆ ಬೀಜಗಳಿಗೆ ಒತ್ತು ನೀಡಿದೆ ಎಂದು ತಿಳಿಸಿದರು.
ರಕ್ಷಣಾ ವಲಯದಲ್ಲಿ ಆತ್ಮನಿರ್ಭರ್ ಭಾರತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದ್ದು. ಶೇಕಡಾ 68% ರಷ್ಟು ದೇಶೀಯವಾಗಿ ಉತ್ಪಾದಿಸಿರುವ ಶಸ್ತ್ರಾಸ್ತ್ರಗಳು, ಸ್ಪೇರ್ ಪಾರ್ಟ್ಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಆರ್ಥಿಕತೆಯನ್ನು ಬೆಂಬಲಿಸುವ ಹಾಗೂ ಆಸ್ತಿಗಳನ್ನು ನಿರ್ಮಿಸಲು ಪೂರಕವಾಗುವಂತೆ ಬಂಡವಾಳ ಹೂಡಿಕೆಯನ್ನು ಶೇ.35 ರಷ್ಟು ಹೆಚ್ಚಿಸಿ 7.50 ಲಕ್ಷ ಕೋಟಿ ಮೀಸಲಿರಿಸಲಾಗಿದೆ ಎಂದ ಅವರು, ಬಂಡವಾಳ ಹೂಡಿಕೆಯ ಹೆಚ್ಚಳದಿಂದಾಗಿ ರಾಜ್ಯಕ್ಕೆ 3,500 ಕೋಟಿ ರೂ.ಗಳ ಹೆಚ್ಚಿನ ಅನುದಾನ ರಾಜ್ಯದ ಬಂಡವಾಳ ಖಾತೆಗೆ ದೊರೆಯಲಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳು, ಮೂಲಭೂತಸೌಕರ್ಯ ಯೋಜನೆಗಳಿಗೆ ಒತ್ತು ನೀಡಲಾಗಿದೆ. ನಗರ ಸಾರಿಗೆಯಲ್ಲಿ ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನ ಸಿಗುವ ಸಾದ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..
ದೇಶದಾದ್ಯಂತ ನೋಂದಣಿ ವ್ಯವಸ್ಥೆ ಒಂದೇ ಮಾದರಿಯಲ್ಲಿ ಇರಬೇಕು ಎಂದು ಒನ್ ನೇಷನ್: ಒನ್ ಪ್ರಾಪರ್ಟಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಬಹಳಷ್ಟು ರಾಜ್ಯಗಳಲ್ಲಿ ನೋಂದಣಿ ವ್ಯವಸ್ಥೆಯಲ್ಲಿ ವ್ಯತ್ಯಾಸಗಳಿರುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ಇವುಗಳನ್ನು ನಿವಾರಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.