ಲಕ್ನೋ: ಪಂಚರಾಜ್ಯಗಳ ಚುನಾವಣಾ ಕದನವು ದೇಶದ ಮಿನಿ ಮಹಾಸಮರ ಎಂದೇ ಪರಿಗಣಿಸಲ್ಪಟ್ಟಿದೆ. ಅದರಲ್ಲೂ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಬಿಜೆಪಿ, ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಸಹಿತ ರಾಜಕೀಯ ಮೇಧಾವಿಗಳ ಅಳಿವು-ಉಳಿವಿನ ಪ್ರಶ್ನೆಯಾಗಿ ಪರಿಣಮಿಸಿದೆ.
ಬಿಜೆಪಿ ಪಾಲಿಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆ ಎನ್ನಿಸಿದೆ. ರಾಮ ಮಂದಿರ ನಿರ್ಮಾಣದ ಯಶಸ್ಸು ಬಿಜೆಪಿ ಪಾಲಿಗೆ ವರದಾನವಾಗಿದ್ದರೂ ಇನ್ನುಳಿದ ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ಕೇಸರಿ ಪಡೆಗೆ ಪ್ರಯಾಸದ ಕೆಲಸ. ಈ ನಡುವೆ, ಮತದಾರರನ್ನು ಸೆಳೆಯಲು ಕಮಲ ಸೈನ್ಯ ಭರ್ಜರಿ ಕಸರತ್ತಿನಲ್ಲಿ ತೊಡಗಿದೆ. ಅದರಲ್ಲೂ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವಿರತ ಪ್ರಚಾರ ಕೈಗೊಂಡಿದ್ದಾರೆ.
ಕಳೆದೊಂದು ತಿಂಗಳಲ್ಲಿ ಪಾದಯಾತ್ರೆ, ಸರಣಿ ಸಭೆ, ಮನೆಮನೆ ಭೇಟಿ ಕೈಗೊಳ್ಳುತ್ತಿರುವ ಶೋಭಾ ಕರಂದ್ಲಾಜೆ ಅವರಿಗೆ ಸ್ಥಳೀಯ ಮಹಿಳಾ ನಾಯಕಿಯರೂ ಸಾಥ್ ನೀಡಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ ಮೂಲಕ ಸಂಘದ ಪ್ರಚಾರಿಕಾ ಆಗಿ ರಾಷ್ಟ್ರ ಕೈಂಕರ್ಯ ಆರಂಭಿಸಿದ್ದ ಶೋಭಾ ಕರಂದ್ಲಾಜೆ ಅತ್ಯುತ್ತಮ ಸಂಘಟಕಿಯೂ ಹೌದು. ನಿಷ್ಠೂರ ನಡೆ ಮೂಲಕ ಆಡಳಿತ ಕ್ಷೇತ್ರದಲ್ಲೂ ಅತ್ಯುತ್ತಮ ಸಂಸದೀಯ ಪಟುವಾಗಿಯೂ ಗುರುತಾದವರು. ಆ ಕಾರಣದಿಂದಾಗಿಯೇ ಬಿಜೆಪಿ ಹೈಕಮಾಂಡ್ ಈ ಬಾರಿ ಯೋಗಿಯ ನಾಡಿನ ಚುನಾವಣಾ ಸಮರದಲ್ಲಿ ಬಿಜೆಪಿ ಸೈನ್ಯದ ನೊಗವನ್ನು ಶೋಭಾ ಅವರಿಗೆ ವಹಿಸಿದೆ.
‘ಸರಯು’ ತೀರದಲ್ಲಿ ಶೋಭಾ ಸವಾರಿ..
ವಾರಾಂತ್ಯದ ರಜಾದಿನವಾದ ಇಂದು ಅವರು ಪವಿತ್ರ ಸರಯೂ ನದಿ ತೀರದ ಪ್ರದೇಶಗಳಲ್ಲಿ ಕೈಗೊಂಡ ಪ್ರಚಾರ ದೇಶದ ಗಮನಸೆಳೆಯಿತು. ಭಾನುವಾರದ ರಜಾ ದಿನದಂದು ವಿವಿಧ ಸಂಘಟನೆಗಳ ಯುವಕ-ಯುವತಿಯರನ್ನು ‘ಸ್ವಚ್ಚ ಭಾರತ ಅಭಿಯಾನ’ದಲ್ಲಿ ತೊಡಗಿಸಿ ಕುತೂಹಲದ ಕೇಂದ್ರಬಿಂದುವಾದರು. ಸರಯು ನದಿ ತೀರದ ತಾಂಡಾ, ಅಂಬೇಡ್ಕರ್ ನಗರಗಳಲ್ಲಿ ಕೈಗೊಂಡ ಈ ಅಭಿಯಾನ ಬಿಜೆಪಿ ಪಕ್ಷದತ್ತ ಯುವಕರ ಚಿತ್ತ ನೆಟ್ಟುವಲ್ಲಿ ವರದಾನವಾಯಿತು.
ಪ್ರಚಾರದ ಸಂದರ್ಭದಲ್ಲಿ ಪಕ್ಷ ಸಂಘಟನೆ ಒಂದೆಡೆಯಾದರೆ, ಸಾಮಾಜಿಕ ಕೈಂಕರ್ಯ ಮೂಲಕ ಯುವಕರಲ್ಲಿ ಪರಿಸರ ಕಾಳಜಿಯ ಜಾಗೃತಿ ಮೂಡಿಸಿದ ಸಚಿವೆ ಶೋಭಾ ನಡೆ ಮೆಚ್ಚುಗೆಗೂ ಪಾತ್ರವಾಯಿತು. ಬಿಜೆಪಿ ವರಿಷ್ಠರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.