ಮಂಗಳೂರು: ಕರಾವಳಿ ದಸರಾದ ಕೇಂದ್ರ ಸ್ಥಾನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಭಾನುವಾರ ಪುಟಾಣಿಗಳ ಜಗತ್ತಾಗಿ ಮಾರ್ಪಟ್ಟಿತ್ತು. ಚಿಣ್ಣರ ಕಲರವ ಮಂಗಳೂರು ದಸರಾದ ಆಕರ್ಷಣೆಯನ್ನು ನೂರ್ಮಡಿಗೊಳಿಸಿತು.
ಹೌದು ಪುಟಾಣಿಗಳ ಸಂತೋಷ, ಕ್ರೀಡೆ, ನಗು, ಕಲಾ ಕೌಶಲಗಳಿಗೆ ವೇದಿಕೆ ಸೃಷ್ಟಿಸುವ ಉದ್ದೇಶದಿಂದ ಹಲವು ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಗುಚ್ಛ ಮಕ್ಕಳ ದಸರಾ-2025ರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಹಸ್ರಾರು ಪುಟಾಣಿಗಳು ಸಾಕ್ಷಿಯಾಗಿದರು.
ಕುದ್ರೋಳಿ ಕ್ಷೇತ್ರದ ದ್ವಾರದಿಂದ ವೇದಿಕೆ ತನಕ ಪುಟಾಣಿಗಳ ಮೆರವಣಿಗೆ ಈ ಕಾರ್ಯಕ್ರಮಕ್ಕೆ ಆಕರ್ಷಣೆ ತುಂಬಿತು. ಪುಣಿಗಳಿಗಾಗಿ ಬಿರುವೆರ್ ಕುಡ್ಲ ಪ್ರಾಯೋಜಕತ್ವದಲ್ಲಿ ಕಿನ್ನಿಪಿಲಿ ಸ್ಪರ್ಧೆ, ಭವಾನಿ ಶಿಪ್ಪಿಂಗ್ಸ್ ಪ್ರಾಯೋಜಕತ್ವದಲ್ಲಿ ಭಕ್ತಿಗೀತೆ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದ್ದು, ಸಹಸ್ರಾರು ಪುಟಾಣಿಗಳು ಪಾಲ್ಗೊಂಡರು.
ಸಾಮಾಜಿಕ ಜಾಲತಾಣ ತಾರೆ, ಸ್ಮಾರ್ಟ್ ಕಿಡ್ ಖ್ಯಾತಿಯ ಅಗ್ನಿವ್ ಮಕ್ಕಳ ದಸರಾ ಉದ್ಘಾಟಿಸಿದರು. ಡಾ.ಸುಶ್ಮಾ ಅಕ್ಕರಾಜು, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಸಾಯಿರಾನ್ ಎಚ್.ಎಸ್., ಸಂತೋಷ್ ಜೆ.ಪೂಜಾರಿ, ಕೃತಿನ್ ಧೀರಜ್ ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯರಾದ ರಮಾನಾಥ ಕಾರಂದೂರು, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷರಾದ ಉದಯಪೂಜಾರಿ ಬಳ್ಳಾಲ್ಭಾಗ್, ಕಾರುಣ್ಯ ಸೇತು ಫೌಂಡೇಷನ್ ಸ್ಥಾಪಕ ಸ್ವಸ್ತಿಕ್ ಆರ್ಯ ಮೊದಲಾದವರು ಉಪಸ್ಥಿತರಿದ್ದರು.