ಬೆಂಗಳೂರು: ಹಿಜಾಬ್ ಕುರಿತ ಸಿಎಂ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಬಿಜೆಪಿ ನಾಯಕ ಸಿ.ಟಿ.ರವಿ, ಹಿಂದಿನ ಸರ್ಕಾರವು ರಾಜ್ಯದಲ್ಲಿ ಹಿಜಬ್ ನಿಷೇಧ ಮಾಡಿರಲಿಲ್ಲ. ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಲಾಗಿತ್ತು ಎಂದಿದ್ದಾರೆ. ಸಿದ್ದರಾಮಯ್ಯ ಅವರು ಇದೀಗ ಸಮವಸ್ತ್ರಕ್ಕೆ ಹಿಜಬ್ ಜೋಡಿಸುತ್ತಾರೋ ಅಥವಾ ಸಮವಸ್ತ್ರ ಕಡ್ಡಾಯ ಅನ್ನೋದನ್ನೇ ತೆಗೆಯುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿರುವ ಸಿ.ಟಿ.ರವಿ, ಹಿಂದಿನ ಬಿಜೆಪಿ ಸರ್ಕಾರವು ಸಾರ್ವಜನಿಕ ಸ್ಥಳದಲ್ಲಿ ಹಿಜಬ್ ನಿಷೇಧ ಮಾಡಿಲ್ಲ, ಕೇವಲ ಶಾಲೆ-ಕಾಲೇಜುಗಳಲ್ಲಿ 1964 ಶಿಕ್ಷಣ ಕಾಯ್ದೆ ಪ್ರಕಾರ ಯೂನಿಫಾರಂ ಕಡ್ಡಾಯ ಮಾಡಿತ್ತು. ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸುವ ಸಮವಸ್ತ್ರ ಪಾಲಿಸಬೇಕು ಅಂತ ನಿಯಮವಿತ್ತು. ಆದ್ರೆ ಈಗ ಸಿದ್ದರಾಮಯ್ಯ ಅವರು ಎಲ್ಲಾ ಯೂನಿಫಾರಂಗೂ ಹಿಜಬ್ ಕಡ್ಡಾಯ ಮಾಡಲು ಹೊರಟಿದ್ದಾರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಶಾಲೆಗಳಲ್ಲಿ ಬಡವ ಬಲ್ಲಿದ ಅಂತ ಭೇದ ಇರಬಾರದು, ಜಾತಿಯ ತಾರತಮ್ಯ ಇರಬಾರದು, ನಾವೆಲ್ಲರೂ ಸಮಾನರು ಎಂಬ ಮಾನಸಿಕತೆಯಲ್ಲಿ ಕಲೀಯಬೇಕು ಎಂಬ ಉದ್ದೇಶದಿಂದ ಶಾಲಾ ಮಕ್ಕಳಿಗೆ ಯೂನಿಫಾರಂ ಕಡ್ಡಾಯಗೊಳಿಸಲಾಗಿದೆ. ಆದರೆ ಸಿದ್ದರಾಮಯ್ಯ ಅವರ ಮನಸ್ಸಿಗೆ ಬಡವ-ಬಲ್ಲಿದ ಭೇದ ಇರಬೇಕು, ಜಾತಿ ಭೇದ ಇರಬೇಕುಎಂಬಂತಿದೆ ಎಂದು ರವಿ ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ:
ಹಿಜಾಬ್ ನಿಷೇಧ ತೆರವು ಬಗ್ಗೆ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಹಿಜಬ್ ನಿಷೇಧ ಆದೇಶ ವಾಪಸ್ ಪಡೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಈ ಕುರಿತಂತೆ ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿಜಬ್ ನಿಷೇಧ ಆದೇಶ ವಾಪಸ್ಗೆ ಇನ್ನೂ ತೀರ್ಮಾನಿಸಿಲ್ಲಎಂದು ಸ್ಪಷ್ಟಪಡಿಸಿದರು. ಕಾರ್ಯಕ್ರಮದಲ್ಲಿ ಯಾರೋ ಪ್ರಶ್ನೆ ಕೇಳಿದ್ದಾರೆ. ಆಗ ಆದೇಶ ವಾಪಸ್ಸಿಗೆ ಯೋಚನೆ ಮಾಡ್ತಿದ್ದೀವಿ ಎಂದಷ್ಟೇ ಹೇಳಿದೆ ಎಂದು ತಮ್ಮ ಹೆಲಿಕೆ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ, ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.