ಉಡುಪಿ : ದೇವಾಲಯ ಪ್ರವೇಶಿಸುವ ಭಕ್ತರು ಆಧಾರ್ ಹಾಗೂ ಮೊಬೈಲ್ ಹೊಂದಿರಲೇಬೇಕು ಎಂಬ ಆದೇಶವೊಂದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಆಧಾರ್ ಕಾರ್ಡ್ಗೂ ದೇಗುಲದಲ್ಲಿನ ದರ್ಶನಕ್ಕೂ ಏನು ಸಂಬಂಧ? ಎಂದು ಹಿಂದೂ ಸಂಘಟನೆಗಳ ಪ್ರಮುಖರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಏನಿದು ವಿದ್ಯಮಾನ..?
ಕೊರೋನಾ ಸಂಕಟಕಾಲದಲ್ಲಿ ದೇವಾಲಯಗಳಲ್ಲಿ ದೇವರ ದರ್ಶನ ಮಾಡಲು ಭಕ್ತರಿಗೆ ಅವಕಾಶವಿರಲಿಲ್ಲ. ನಿಯಮ ಸಡಿಲಿಕೆ ನಂತರವಷ್ಟೇ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳಿಗೆ ಅವಕಾಶವಿದೆ. ಈ ನಡುವೆ, ಕರಾವಳಿಯಲ್ಲಿರುವ ಪುರಾಣ ಪ್ರಸಿದ್ದ ದೇವಾಲಯ ಕೊಲ್ಲೂರು ಮೂಕಾಂಬಿಕ ಕ್ಷೇತ್ರದಲ್ಲಿ ಮತ್ತಷ್ಟು ಟಫ್ ರೂಲ್ ಜಾರಿಗೆ ಬಂದಿದೆ.
ಕೊಲ್ಲೂರು ಮೂಕಾಂಬಿಕಾ ದೇಗುಲ ದರ್ಶನಕ್ಕೆ ಬರುವ ಭಕ್ತರು ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಹೊಂದಿರಲೇಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಅಷ್ಟೇ ಆಲ್ಲ, ಕೇರಳದಿಂದ ಬರುವ ಭಕ್ತರು 72ಗಂಟೆಯೊಳಗೆ ಕೋವಿಡ್ ಪರೀಕ್ಷೆಗೊಳಗಾಗಿರುವ ಆರ್.ಟಿ.ಪಿ.ಸಿ.ಆರ್ ವರದಿಯನ್ನು ಹೊಂದಿರಬೇಕಿದೆ. ಇದು ಇಲ್ಲವಾದಲ್ಲಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಪೈಕಿ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯದ ನಿಯಮವನ್ನಾದರೂ ಒಪ್ಪಿಕೊಳ್ಳಬಹುದು. ಆದರೆ ಆಧಾರ್ ಹಾಗೂ ಮೊಬೈಲ್ ಕಡ್ಡಾಯ ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ. ಮೊಬೈಲನ್ನೇ ಹೊಂದಿರದವರು ದೇವಾಲಯಕ್ಕೆ ಹೋಗುವಂತಿಲ್ಲವೇ ಎಂಬುದು ಮತ್ತಷ್ಟು ಮಂದಿಯ ಅಳಲು.
ಎಲ್ಲಿದ್ದಾರೆ ಸಚಿವರು..?
ಈ ಆದೇಶವೇ ಇದೀಗ ವಿವಾದಕ್ಕೆ ಗುರಿಯಾಗಿರುವುದು. ಆದೇಶ ಹೊರಡಿಸಿರುವ ಅಧಿಕಾರಿ ಒಂದೋ ಬಾಲಿಷ ನಿರ್ಧಾರ ಕೈಗೊಂಡಿದ್ದಾರೆ. ಇಲ್ಲವೇ ಹಿಂದೂ ವಿರೋಧಿ ನಡೆ ಅನುಸರಿಸಿದ್ದಾರೆ ಎಂದು ಬಿಜೆಪಿ ನಾಯಕರೇ ಆಕ್ರೋಶ ಹೊರಹಾಕಿದ್ದಾರೆ. ಮುಜರಾಯಿ ಸಚಿವರು ಎಲ್ಲಿದ್ದಾರೆ ಎಂದು ಹಿಂದೂ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಒಟ್ಟಾರೆ ಬೆಳವಣಿಗೆ ಕುರಿತಂತೆ ಉದಯ ನ್ಯೂಸ್ ಜೊತೆ ಪ್ರತಿಕ್ರಿಯಿಸಿರುವ ವಿಶ್ವಹಿಂದೂ ಪರಿಷತ್ನ ಪ್ರಮುಖರೂ ಆಗಿದ್ದ, ಪ್ರಸ್ತುತ ಬಿಜೆಪಿ ವಕ್ತಾರ ಜಗದೀಶ್ ಶೇಣವ, ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ.