ಉಡುಪಿ: ಸಾಮಾಜಿಕ ಕಾರ್ಯದ ಮೂಲಕ ದೇಶದ ಯುವಜನರಿಗೆ ಸ್ಫೂರ್ತಿಯಾಗಿರುವ ಡಾ.ಗೋವಿಂದ ಬಾಬು ಪೂಜಾರಿಯವರು ಇದೀಗ ಶಾಲೆಗಳಿಗೆ ಶಕ್ತಿ ತುಂಬುವ ಪ್ರಯತ್ನಕ್ಕೂ ಮುನ್ನುಡಿ ಬರೆದಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯದ ಶೈಕ್ಷಣಿಕ ಕ್ಷೇತ್ರ ಬಡವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಈ ಹಿನ್ನಲೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ಸಹಾಯ ಹಸ್ತ ಚಾಚಿದ್ದರೆ, ಇನ್ನೊಂದೆಡೆ ಪ್ರತಿಷ್ಠಿತ ChefTalk ಕಂಪನಿಯ ಮಾಲೀಕ ಡಾ.ಗೋವಿಂದ ಬಾಬು ಪೂಜಾರಿಯವರು ಬೈಂದೂರಿನ ಶಾಲೆಗೆ ಪೀಠೋಪಕರಣಗಳನ್ನು ಒದಗಿಸಿ ಸಾರ್ವಜನಿಕರ ಮೆಚ್ಚುಗೆಗೊಳಗಾಗಿದ್ದಾರೆ.
ಸಾಮಾಜಿಕ ಕೈಂಕರ್ಯಕ್ಕೆಂದೇ ತಮ್ಮ ಮುಂದಾಳತ್ವದಲ್ಲೇ ‘ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ ಎಂಬ ಸಂಸ್ಥೆಯನ್ನು ಕಟ್ಟಿರುವ ಡಾ.ಗೋವಿಂದ ಬಾಬು ಪೂಜಾರಿಯವರು, ಇದೇ ಟ್ರಸ್ಟ್ ಮೂಲಕ ಶಿಕ್ಷಣ ಕ್ಷೇತ್ರದ ಅಭ್ಯುದಯ ಬಗ್ಗೆಯೂ ಹೆಜ್ಜೆ ಇಟ್ಟಿದ್ದಾರೆ. ಅದರಂತೆ ಯಳಜಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಿರುವಷ್ಟು ಪೀಠೋಪಕರಣಗಳನ್ನು ಸ್ವಂತ ಖರ್ಚಿನಲ್ಲಿ ಒದಗಿಸಿದ್ದಾರೆ.
ಈ ಪೀಠೋಪಕರಣಗಳನ್ನು ಶಾಲೆಗೆ ಹಸ್ತಾಂತರಿಸಿದ ಸನ್ನಿವೇಶ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಯಿತು. ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ಕಂಡು ಶಾಲಾ ಸಿಬ್ಬಂದಿ ಹಾಗೂ ಅಭಿವೃದ್ಧಿ ಸಮಿತಿಯ ಪ್ರಮುಖರು ಭಾವುಕರಾದರು.
ಹಳ್ಳಿಯ ಮಕ್ಕಳಿಗೂ ಸಮರ್ಥ ಶಿಕ್ಷಣ..!
ಶಾಲೆಯ ಪ್ರಮುಖರು ಹಾಗೂ ಮಕ್ಕಳ ಪೋಷಕರ ಕೃತಜ್ಞತೆ ಬಗ್ಗೆ ಪ್ರತಿಕ್ರಿಯಿಸಿದ ಡಾ.ಗೋವಿಂದ ಬಾಬು ಪೂಜಾರಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ತಾವು ಈ ಕಿರುಸೇವೆಗೆ ಮುಂದಾಗಿರುವುದಾಗಿ ತಿಳಿಸಿದರು. ಹಳ್ಳಿ ಜನರು ನಗರಗಳಂತಹಾ ಶಿಕ್ಷಣ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಟ್ರಸ್ಟ್ ವತಿಯಿಂದ ವಿನೂತನ ಕಾರ್ಯಕ್ರಮ ರೂಪಿಸಲಾಗುವುದು ಎಂದು ಡಾ.ಗೋವಿಂದ ಬಾಬು ಪೂಜಾರಿ ತಿಳಿಸಿದರು.