ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಇದುವರೆಗೂ ಯಾವುದೇ ರೀತಿಯ ವಿದ್ಯಾರ್ಥಿ ಪ್ರೋತ್ಸಾಹ ಧನ ಯೋಜನೆ ಜಾರಿಯಲ್ಲಿರಲಿಲ್ಲ. 27.10.2023 ಈ ಬಗ್ಗೆ ಆದೇಶ ಮಾಡಿ ಯೋಜನೆ ಜಾರಿಗೆ ತರಲಾಯಿತು.
ಅದರಂತೆ ಈ ಕೆಳಕಂಡ ಕೋರ್ಸ್ ಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ನೀಡಲು ಪ್ರಾರಂಭಿಸಲಾಯಿತು.
- ಪಿ.ಯು.ಸಿ ರೂ.5,000
- ಪದವಿ ರೂ.7,000
- ಸ್ನಾತಕೋತ್ತರ ಪದವಿ ರೂ.15,000
- ಇಂಜಿನಿಯರಿಂಗ್ ರೂ.25,000
- ವೈದ್ಯಕೀಯ/ ಡೆಂಟಲ್ ರೂ.50,000
- ಇತರೆ ವೈದ್ಯಕೀಯ ರೂ.25,000
- ವಿದೇಶ ವ್ಯಾಸಂಗ ರೂ.1,00,000
ಈ ವರೆಗೆ ಪ್ರೋತ್ಸಾಹಧನ 254 ವಿದ್ಯಾರ್ಥಿಗಳಿಗೆ ರೂ.38.38 ಲಕ್ಷ ಪಾವತಿಸಲಾಗಿದ್ದು, ಇನ್ನು 19 ಅರ್ಜಿಗಳನ್ನು ಸ್ವೀಕರಿಸಲಾಗಿದೆ. (ಇದರಲ್ಲಿ ಅರ್ಚಕರ ಮಕ್ಕಳು 230 ,ನೌಕರರ ಮಕ್ಕಳು 24). ವಿಶೇಷವೆಂದರೆ 5 ವಿದ್ಯಾರ್ಥಿಗಳಿಗೆ ತಲಾ 1 ಲಕ್ಷದಂತೆ 5 ಲಕ್ಷ ವಿದೇಶ ವ್ಯಾಸಂಗಕ್ಕೆ ಮಂಜೂರು ಮಾಡಲಾಗಿದೆ. ಐವರೂ ಕೂಡ ಅರ್ಚಕರ ಮಕ್ಕಳು.
ಮುಜರಾಯಿ ಇಲಾಖೆಯ ಅರ್ಚಕರು/ಸಿಬ್ಬಂದಿಗಳು ಮೃತಪಟ್ಟಲ್ಲಿ ಯಾವುದೇ ಮರಣಾನಂತರ ಉಪಧನದ ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ಹೊಸ ಆದೇಶವನ್ನು27.10.2023 ಹೊರಡಿಸಿ, ಈ ಪ್ರಕರಣಗಳಲ್ಲಿ ಮೃತಾವಲಂಬಿತರ ಕುಟುಂಬಕ್ಕೆ ರೂ.2 ಲಕ್ಷ ಪಾವತಿಸಲು ಕ್ರಮ ತೆಗೆದುಕೊಳ್ಳಲಾಯಿತು. ಅದರಂತೆ ಈವರೆಗೆ 28 ಮೃತರ ಕುಟುಂಬದವರಿಗೆ ತಲಾ ರೂ.2 ಲಕ್ಷಗಳಂತೆ ರೂ.56 ಲಕ್ಷ ಪಾವತಿಸಲಾಗಿದೆ. ಜಾತಿ ಜನಗಣತಿ ಸಮೀಕ್ಷೆಯ ಕಾರಣ ಸಿಬ್ಬಂದಿಯ ಅಲಭ್ಯತೆಯಿಂದಾಗಿ ಸ್ವೀಕತವಾಗಿರುವ ಉಳಿದ 39 ಅರ್ಜಿಗಳನ್ನು ನವೆಂಬರ್ ಮೊದಲನೇ ವಾರದಲ್ಲಿ ಇತ್ಯರ್ಥಪಡಿಸಿ ಅವಲಂಬಿತರಿಗೆ ಚೆಕ್ ವಿತರಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ್ ಗೌರವ್ ಯೋಜನೆ ಅಡಿಯಲ್ಲಿ ಯಾತ್ರಾ ವ್ಯವಸ್ಥೆ:
ಭಾರತ್ ಗೌರವ್ ಯೋಜನೆ ಅಡಿಯಲ್ಲಿ ಇಲಾಖೆ ವತಿಯಿಂದ ಕೈಗೊಳ್ಳಲಾಗುವ ಕಾಶೀ-ಗಯಾ-ಆಯೋದ್ಯೆ ದರ್ಶನ, ದಕ್ಷಿಣ ಕೇತ್ರ ಯಾತ್ರೆ, ದ್ವಾರಕಯಾತ್ರೆಗಳಿಗೆ ದಿನಾಂಕ 22.01.2024 ರಿಂದ ಅರ್ಚಕರ ಹಾಗೂ ಅವರ ಕುಟುಂಬದ ಒಬ್ಬರು ಸದಸ್ಯರು ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವರ್ಷದಲ್ಲಿ ಒಟ್ಟು 2,400 ಜನರಿಗೆ ಉಚಿತ ಯಾತ್ರೆ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕೆ ವಾರ್ಷಿಕ ರೂ.8.00 ಕೋಟಿ ವೆಚ್ಚವನ್ನು ಭರಿಸಲಾಗಿದೆ.
2004 ರಿಂದ ಸ್ಥಗಿತಕೊಂಡಿದ್ದ ಘಟಿಕೋತ್ಸವವನ್ನು ಪುನಃ ಪ್ರಾರಂಭಿಸಿ ಒಂದೇ ವರ್ಷದಲ್ಲಿ ಅಂದರೆ 2025 ರಲ್ಲಿ ಒಟ್ಟು 4600 ಅರ್ಚಕರುಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಗಿದೆ. (ಮೈಸೂರಿನ ಸಮಾರಂಭದಲ್ಲಿ 2000 ಅರ್ಚಕರಿಗೆ, ಬೆಂಗಳೂರಿನಲ್ಲಿ 2600) ಮತ್ತು ಪ್ರಸಕ್ತ ವರ್ಷದ ಪ್ರಮಾಣ ಪತ್ರವನ್ನು ಡಿಸೆಂಬರ್ ನಲ್ಲಿ 1000 ಅರ್ಚಕರಿಗೆ ನೀಡಲಾಗುವುದು.
ಮುಜರಾಯಿ ಇಲಾಖೆ ವ್ಯಾಪ್ತಿಯ ಅರ್ಚಕರು/ ಸಿಬ್ಬಂದಿಗಳ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡುವ ಪ್ರಕ್ರಿಯೆ ಮುಂದುವರೆದ ಭಾಗವಾಗಿ ಅರ್ಜಿಗಳನ್ನು ಸ್ವೀಕರಿಸಲು ನವೆಂಬರ್ 1 ರಿಂದ ಡಿಸೆಂಬರ್ 31 , 2025 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುವಂತೆ ಸಚಿವರು ಸಲಹೆ ನೀಡಿದ್ದಾರೆ.




















































