ಬೆಂಗಳೂರು: ಚುನಾವಣಾ ಆಯೋಗವು ತನ್ನ ವೈಫಲ್ಯಗಳಿಂದ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡುವ ಕೆಲಸ ಮಾಡುತ್ತಿದೆ. ಇದನ್ನು ಪ್ರಶ್ನೆ ಮಾಡುವವರಿಗೆ ನೋಟಸ್ ನೀಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಪ್ರದೇಶ ಕಾಂಗ್ರೆಸ್ ನಾಯಕ, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾದ ಐಶ್ವರ್ಯ ಮಹದೇವ್ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕರೂ, ರಾಜಕೀಯ ವಿಶ್ಲೇಷಕರೂ ಅದ ರಮೇಶ್ ಬಾಬು ನಡೆಸಿದ ಸುದ್ದಿಗೋಷ್ಠಿ ಗಮನಸೆಳೆಯಿತು. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗ ನೋಟೀಸ್ ನೀಡಿರುವ ಬೆಳವಣಿಗೆ ಬಗ್ಗೆ ರಮೇಶ್ ಬಾಬು ಆಕ್ಷೇಪಿಸಿದರು.
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಈ ವ್ಯವಸ್ಥೆ ನಿಂತಿರುವುದೇ ಪಾರದರ್ಶಕ ಚುನಾವಣೆ ಮೇಲೆ. ಈ ಪಾರದರ್ಶಕ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗದ ವೈಫಲ್ಯಗಳನ್ನು ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ದಾಖಲೆ ಸಮೇತ ಬಯಲು ಮಾಡಿದ್ದಾರೆ. ವೋಟ್ ಚೋರಿ ಕಾರ್ಯಕ್ರಮದ ಮೂಲಕ ಚುನಾವಣಾ ಆಕ್ರಮ ಹಾಗೂ ಅವ್ಯವಸ್ಥೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ 560 ಸಂಸ್ಥಾನಗಳಿದ್ದು, ಕಾಂಗ್ರೆಸ್ ಹೋರಾಟದ ಪರಿಣಾಮದಿಂದ ದೇಶಕ್ಕೆ ಸ್ವಾಂತಂತ್ರ್ಯ ಸಿಕ್ಕಿತು. ಕೆಲವು ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಕಂದಾಯ ಪಾವತಿ ಮಾಡುವವರಿಗೆ ಅವರಿಗೆ ಮತದಾನದ ಅವಕಾಶವಿತ್ತು. ಸಂವಿಧಾನ ರಚಿಸುವಾಗ ಕಾಂಗ್ರೆಸ್ ಪಕ್ಷ ಒಬ್ಬ ವ್ಯಕ್ತಿಗೆ ಒಂದು ಮತದಂತೆ ದೇಶದ ಪ್ರತಿಯೊಬ್ಬ ಪ್ರಜೆಗೆ ಮತದಾನದ ಹಕ್ಕು ನೀಡಿತು. ಇದರಿಂದ ಸರಿಯಾದ ಪ್ರತಿನಿಧಿಗಳನ್ನು ಆರಿಸಲು ನೆರವಾಗುತ್ತದೆ ಎಂದು ಸಂವಿಧಾನದ ಮೂಲಕ ಈ ಹಕ್ಕನ್ನು ನೀಡಲಾಯಿತು ಎಂದವರು ತಿಳಿಸಿದರು.
ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ದೇಶದ ಯುವಕರಿಗೆ 18 ವರ್ಷ ತುಂಬಿದವರಿಗೆ ಮತದಾನದ ಹಕ್ಕನ್ನು ನೀಡಿದರು. ಜಗತ್ತಿನ 78 ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಪಾರದರ್ಶಕ ಚುನಾವಣೆ ನಡೆಯುತ್ತಿಲ್ಲ ಎಂಬುದು ಎಲ್ಲರ ಆತಂಕ. ಪಾರದರ್ಶಕ ಚುನಾವಣೆ ಆಗದಿದ್ದರೆ ಸಮರ್ಥರನ್ನು ಆಯ್ಕೆ ಮಾಡದಿದ್ರೆ, ಇದರ ದುರ್ಲಾಭ ಪಡೆದು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಸಾಧ್ಯತೆ ಇರುತ್ತದೆ. ಪಾರದರ್ಶಕ ಚುನಾವಣೆ ನಡೆಸಲು ಸಂವಿಧಾನದ ಆರ್ಟಿಕಲ್ 324ರ ಅಡಿಯಲ್ಲಿ ಸ್ವಾತಂತ್ರ್ಯಬಂದ್ಧವಾದ ಚುನಾವಣಾ ಆಯೋಗ ಸ್ಥಾಪನೆ ಮಾಡಲಾಗಿದೆ ಎಂದು ರಮೇಶ್ ಬಾಬು ವಿಶ್ಲೇಷಿಸಿದರು.
ದುರಂತ ಎಂದರೆ ಚುನಾವಣಾ ಆಯೋಗ, ತನ್ನ ವೈಫಲ್ಯಗಳಿಂದ ದೇಶದಲ್ಲಿ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡುವ ಕೆಲಸ ಮಾಡುತ್ತಿದೆ. ಇದನ್ನು ಪ್ರಶ್ನೆ ಮಾಡುವವರಿಗೆ ನೋಟಸ್ ನೀಡಿ ಬೆದರಿಕೆ ಹಾಕಲಾಗುತ್ತಿದೆ. ಇದು ದೇಶದ ಸಂವಿಧಾನದ ಅಡಿಯಲ್ಲಿ ಪಾರದರ್ಶಕ ಚುನಾವಣೆಗೆ ಆಗ್ರಹಿಸುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೂ ಇದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಅವರು ದಾಖಲೆ ಸಮೇತ ಚುನಾವಣಾ ಆಕ್ರಮಗಳನ್ನು, ಆಯೋಗದ ಕರ್ತವ್ಯ ಲೋಪಗಳನ್ನು ದೇಶದ ಮುಂದೆ ಇಟ್ಟಿರುವಾಗ, ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿ ಉತ್ತರ ನೀಡಬೇಕಿತ್ತು. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನ್ಯಾಯ ನೀಡಲಿದೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ಅವರು ಹೇಳಿದರು.
ಚುನಾವಣಾ ಆಯೋಗ ಕಾಂಗ್ರೆಸ್ ನಾಯಕರಿಗೆ ಬೆದರಿಕೆ ಹಾಕುತ್ತಿರುವುದನ್ನು ಹಾಗೂ ಆಯೋಗ ರಾಜಕೀಯ ಪಕ್ಷದ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಕರ್ನಾಟಕ ಕಾಂಗ್ರೆಸ್ ಖಂಡಿಸುತ್ತದೆ. ಆಯೋಗಕ್ಕೆ ಸಂವಿಧಾನದ ಮೂಲಕ ನೀಡಿರುವ ಹಕ್ಕು ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಚುನಾವಣಾ ಪ್ರಕ್ರಿಯೆ ಬಗ್ಗೆ ಯಾವುದೇ ವ್ಯಕ್ತಿ ಪ್ರಶ್ನೆ ಎತ್ತಿದರೆ ಆಯೋಗ ಉತ್ತರ ನೀಡಬೇಕು ಎಂದು ವಕೀಲರೂ ಆದ ರಮೇಶ್ ಬಾಬು ಪ್ರತಿಪಾದಿಸಿದರು.
ರಾಹುಲ್ ಗಾಂಧಿ ಅವರು ಕರ್ನಾಟಕದ ಮಹದೇವಪುರ ಕ್ಷೇತ್ರ ಸೇರಿದಂತೆ, ಬಿಹಾರ, ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರದಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಉತ್ತರ ಕೇಳುತ್ತಿದ್ದಾರೆ. ವೋಟ್ ಚೋರಿ ಅಭಿಯಾನ ಮೂಲಕ ಅಕ್ರಮಗಳನ್ನು ಜನರ ಗಮನಕ್ಕೆ ತಂದಿದ್ದಾರೆ ಎಂದ ರಮೇಶ್ ಬಾಬು, ‘ನಾನು ನಿನ್ನೆ ಆಯೋಗಕ್ಕೆ ಪತ್ರ ಬರೆದು ಸಂವಿಧಾನದ 324 ಅಡಿಯಲ್ಲಿ ಅಭಿವ್ಯಕ್ತಿ ಸ್ವಾಂತ್ರ್ಯದ ಹಕ್ಕಿನ ಮೂಲಕ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ರಾಹುಲ್ ಗಾಂಧಿ ಅವರು ಸೇರಿದಂತೆ ವಿರೋಧ ಪಕ್ಷಗಳ ಮೇಲೆ ವ್ಯಕ್ತಪಡಿಸಿರುವ ಆಕ್ಷೇಪಣೆ ಹಿಂಪಡೆಯುವಂತೆ ಆಗ್ರಹಿಸಿದ್ದೇನೆ. ಚುನಾವಣಾ ಲೋಪಗಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದೇನೆ’ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.