ಗದಗ: ನರಗುಂದ ಪಟ್ಟಣದ ಜನ್ರು ಎಂದಿನಂತೆ ಬೆಳಗ್ಗೆ ತಮ್ಮ ಕೆಲಸಗಳಿಗೆ ಹೋಗುತ್ತಿದ್ರು. ಕೆಲವರು ಬಹಿರ್ದೆಸೆಗೆ ಹೋಗುತ್ತಿದ್ರೆ. ಇನ್ನು ಕೆಲವರು ತಮ್ಮ ತಮ್ಮ ಜಮೀನಿಗಳಿಗೆ ಕೆಲಸ ಮಾಡಲು ಹೋಗುತ್ತಿದ್ರು. ಇನ್ನು ಕೆಲವರು ದೇವರಿಗೆ ದರ್ಶನಕ್ಕೆ ತೆರಳುತ್ತಿದ್ರು. ಆ ವೇಳೆ ಹುಚ್ಚು ನಾಯಿ ಇದಕ್ಕಿಂದತೆ ಜನರ ಮೇಲೆ ಅಟ್ಯಾಕ್ ಮಾಡಲು ಆರಂಭಿಸಿತ್ತು. ಜನರೆಲ್ಲಾ ದಿಕ್ಕಾಪಾಲಾಗಿ ಓಡೋದಕ್ಕೆ ಶುರು ಮಾಡಿದರು. ಕೆಲವರು ಅಲ್ಲೇ ಹೊರಳಾಡಿ ಗೋಳಾಡ ತೊಡಗಿದರು. ಹುಚ್ಚು ನಾಯಿಯ ದಾಳಿಗೆ ಸುಮಾರು 40 ಜನ್ರು ಗಾಯಗಳಾಗಿ ಆಸ್ಪತ್ರೆ ಸೇರಿದ್ದಾರೆ.
ಗದಗ ಜಿಲ್ಲೆ ನರಗುಂದ ಪಟ್ಟಣದ ಜನರು ಹುಚ್ಚು ನಾಯಿ ದಾಳಿಗೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಹುಚ್ಚು ನಾಯಿಯೊಂದು ದಾಳಿ ಮಾಡಿ ಸುಮಾರು 40 ಜನರನ್ನು ಗಾಯಗೊಳಿಸಿದೆ. ಪಟ್ಟಣದ ವಿವಿಧ ಬೀದಿಯಲ್ಲಿನ ಜನರನ್ನ ಹುಚ್ಚು ನಾಯಿ ಅಟ್ಟಾಡಿಸಿಕೊಂಡು ದಾಳಿ ಮಾಡಿಬಿಟ್ಟಿದೆ. ಪಟ್ಟಣದ ಸೋಮಾಪುರ, ಜಮ್ಲಾಪುರ, ರಾಚಯ್ಯನಗರ, ಮಾರುತಿನಗರ, ದಂಡಾಪುರ ಏರಿಯಾದಲ್ಲಿನ ಹಲವು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಸುಖಾ ಸುಮ್ಮನೆ ತಮ್ಮಷ್ಟಕ್ಕೆ ತಾವು ಹೊರಟಿದ್ದ ಜನರಿಗೆ ಧಿಡೀರ್ ಕಚ್ಚಿ ಗಾಯಗೊಳಿಸಿದೆ. ವಿಚಿತ್ರ ಅಂದರೆ ಬಹುತೇಕರು ವಯೋವೃದ್ಧರಾಗಿದ್ದಾರೆ..
ಇವರೆಲ್ಲ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು. ಕೆಲವರು ಹೊಲಕ್ಕೆ ಹೋಗುತ್ತಿದ್ದರು. ಕೆಲವರು ಬಹಿರ್ದೆಸೆಗೆ ತೆರಳುತ್ತಿದ್ದರು.ಇನ್ನು ಕೆಲವರು ನೀರು ತರಲಿಕ್ಕೆ ಹೋಗುತ್ತಿದ್ದರು. ಆದ್ರೆ ಹುಚ್ಚು ನಾಯಿ ದಾಳಿಗೆ ಬೆಚ್ಚಿಬಿದ್ದ ಜನರು ಈಗ ಮನೆಗಡೆಯಿಂದ ಹೊರಗೆ ಬರೋದಕ್ಕೆ ಹಿಂಜರಿದಿದ್ದಾರೆ.
ಸದ್ಯ ಹುಚ್ಚು ನಾಯಿಯನ್ನ ಸ್ಥಳೀಯರೇ ಕಲ್ಲು ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಎಲ್ಲ ಗಾಯಾಳುಗಳು ನರಗುಂದ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ನರಗುಂದ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಲವು ಬಾರಿ ನರಗುಂದ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರು ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ ಅಂತ ಜನರು ಆರೋಪ ಮಾಡ್ತಿದ್ದಾರೆ.