ಕೋಲಾರ: ರಾಜ್ಯದಲ್ಲಿ ನಂದಿನಿ ಉತ್ಪನ್ನಗಳು ದೊರೆಯದಂತೆ ಕೃತಕ ಅಭಾವ ಸೃಷ್ಟಿಸಿ ಅಮೂಲ್ ಉತ್ಪನ್ನಗಳನ್ನು ತರುತ್ತಿದ್ದಾರೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಕೋಲಾರದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಜೈ ಭಾರತ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದ ಬ್ಯಾಂಕುಗಳನ್ನು ನುಂಗಿ ನೀರು ಕುಡಿದು ಆಗಿದೆ. ಈಗ ನಮ್ಮ ಹೆಮ್ಮೆಯ ನಂದಿನಿ ಸಂಸ್ಥೆ ನುಂಗಲು ಹೊರಟಿದ್ದಾರೆ. ರಾಜ್ಯದಲ್ಲಿ ಹಾಲು ಒಕ್ಕೂಟಗಳನ್ನು ಸಂಘಟಿಸಿ ದಿನಕ್ಕೆ 99 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಬೆಂಗಳೂರು ಮತ್ತು ಬೇರೆ ಬೇರೆ ನಗರಗಳಲ್ಲಿ ಮಾರುವ ವ್ಯವಸ್ಥೆ ಕಲ್ಪಿಸಲಾಗಿದೆ. ಲಕ್ಷಾಂತರ ರೈತರು ಹಾಲು ಉತ್ಪಾದಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅಮಿತ್ ಶಾ ಅವರು ಕೇಂದ್ರ ಸಹಕಾರಿ ಮಂತ್ರಿಯಾದ ನಂತರ ನಂದಿನಿಯನ್ನು ಅಮೂಲ್ ಜತೆ ವಿಲೀನಕ್ಕೆ ಮುಂದಾಗಿದ್ದರು. ಈಗ ಅಮೂಲ್ ಸಂಸ್ಥೆಯ ಹಾಲನ್ನು ರಾಜ್ಯದ ಮಾರುಕಟ್ಟೆಗೆ ಕರೆತಂದು ನಂದಿನಿ ಉತ್ಪನ್ನಗಳ ಜತೆ ಸ್ಪರ್ಧೆಗಿಳಿಸಿದ್ದಾರೆ ಎಂದು ದೂರಿದರು.
LIVE: Congress President Shri @Kharge and Shri @RahulGandhi address the 'Jai Bharat Rally' in Kolar, Karnataka.https://t.co/rvdGzkepww
— Congress (@INCIndia) April 16, 2023
ಕರ್ನಾಟಕ ರಾಜ್ಯದಲ್ಲಿ ನಂದಿನಿ ಉತ್ಪನ್ನಗಳು ದೊರೆಯದಂತೆ ಕೃತಕ ಅಭಾವ ಸೃಷ್ಟಿಸಿ ಅಮೂಲ್ ಉತ್ಪನ್ನಗಳನ್ನು ತರುತ್ತಿದ್ದಾರೆ. ಈ ಕಾರಣದಿಂದಾಗಿ ಹಾಲಿನ ಉತ್ಪಾದನೆ 99 ಲಕ್ಷ ಲೀಟರ್ ನಿಂದ 81 ಲಕ್ಷ ಲೀಟರ್ ಗೆ ಇಳಿದಿದೆ. ನಾನು ಕನ್ನಡಿಗರಲ್ಲಿ ಮಾಡುವ ಮನವಿ ಎಂದರೆ, ಕೇಂದ್ರ ಸರ್ಕಾರದ ಈ ದುಷ್ಟ ಪ್ರಯತ್ನವನ್ನು ನಾವೆಲ್ಲರೂ ತಡೆಗಟ್ಟಬೇಕು. ಇದು ನಮ್ಮ ಕನ್ನಡಿಗರ ಮರ್ಯಾದೆಯ ಪ್ರಶ್ನೆ. ನಾವೆಲ್ಲರೂ ಕನ್ನಡಿಗರು ಅಮೂಲ್ ಉತ್ಪನ್ನಗಳನ್ನು ಖರೀದಿಸದೇ ನಂದಿನಿ ಉತ್ಪನ್ನಗಳನ್ನು ಮಾತ್ರ ಖರೀದಿ ಮಾಡುತ್ತೇವೆ ಎಂಬ ಶಪಥ ಮಾಡಬೇಕು. ಆಮೂಲಕ ಕೇಂದ್ರದ ಹುನ್ನಾರವನ್ನು ತಡೆಗಟ್ಟಬೇಕು ಎಂದರು.
ಬಿಜೆಪಿ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ಮತ್ತೆ ತರುವ ಪ್ರಯತ್ನ ಮಾಡಿದರೆ ಕೆಎಂಎಫ್, ರಾಜ್ಯದ ರೈತರ ಬದುಕು ಉಳಿಯುತ್ತದೆ. ಕಾಂಗ್ರೆಸ್ ಪಕ್ಷ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆ ನೀಡಿದ್ದು, 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಬೆಲೆ ಏರರರಿಕೆಯಿಂದ ತತ್ತರಿಸಿರುವ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಇನ್ನು ಅನ್ನಭಾಗ್ಯ ಯೋಜನೆಯಲ್ಲಿ ಬಡ ಕುಟುಂಬದ ಸದಸ್ಯರಿಗೆ ನೀಡುತ್ತಿರುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಹೆಚ್ಚಳ ಮಾಡಲಾಗುವುದು. ನಮ್ಮ ಸರ್ಕಾರ 7 ಕೆ.ಜಿ ಅಕ್ಕಿ ನೀಡುತ್ತಿದ್ದು, ಅದನ್ನು ಇಳಿಸಿದ್ದು ಯಾಕೆ ಎಂದು ಸರ್ಕಾರವನ್ನು ಪ್ರಶ್ನಿಸಿದಾಗ, ಅದಕ್ಕೆ ಕೋವಿಡ್ ನಿಂದ ಆರ್ಥಿಕ ಸಮಸ್ಯೆ ಎದುರಾಗಿದೆ ಹೀಗಾಗಿ ಕಡಿಮೆ ಮಾಡುತ್ತಿದ್ದೇವೆ ಎಂದರು. ಅದಕ್ಕೆ ನಾನು ನೀವು ಲಂಚ ಹೊಡೆಯುವುದು ಕಡಿಮೆ ಮಾಡಿದರೆ 7 ಕೆ.ಜಿಯಲ್ಲಿ 10 ಕೆ.ಜಿ ನೀಡಬಹುದು ಎಂದು ಹೇಳಿದೆ. ನಿರುದ್ಯೋಗ ಪದವೀಧರ ಯುವಕರಿಗೆ ಪ್ರತಿ ತಿಂಗಳಂತೆ 2 ವರ್ಷಗಳ ಕಾಲ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದರು.