ಡಿವೈಎಸ್ಪಿ ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬ್ಯಾಚ್ ನ ಪ್ರಶಿಕ್ಷಣಾರ್ಥಿಗಳ ಜೊತೆಗಿನ ಸಂವಾದ.. ಪೊಲೀಸ್ ಮಹಾನಿರೀಕ್ಷಕರಾದ ವಿಪುಲ್ ಕುಮಾರ್ ಕಾರ್ಯವೈಖರಿಗೆ ಸಚಿವರ ಶ್ಲಾಘನೆ..
ಮೈಸೂರು: ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದ ಪೊಲೀಸರು ನಂಬರ್ 1 ಆಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಲೆ ಆರೋಪಿಗಳನ್ನು ಬಂಧಿಸಿದ್ದೇ ಕರ್ನಾಟಕ ಪೊಲೀಸರು. ನಮ್ಮ ಪೊಲೀಸ್ ಇಲಾಖೆ ದೇಶದಲ್ಲಿಯೇ ಮಾದರಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಬಣ್ಣಿಸಿದ್ದಾರೆ.
ಮೈಸೂರಿನ ಪೋಲಿಸ್ ಅಕಾಡೆಮಿಯಲ್ಲಿ ಡಿವೈಎಸ್ಪಿ ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬ್ಯಾಚ್ ನ ಪ್ರಶಿಕ್ಷಣಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಯಾವುದೇ ರಾಜ್ಯಕ್ಕೆ ಹೋಗಲಿ ಕರ್ನಾಟಕ ಪೊಲೀಸ್ ಬಗ್ಗೆ ಅಭಿಮಾನ ಹಾಗೂ ಮಾದರಿಯಾಗಿ ಹೇಳಲಾಗುತ್ತದೆ ಎಂದು ಅಭಿಮಾನವನ್ನು ವ್ಯಕ್ತಪಡಿಸಿದರು.
ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ವಿಪುಲ್ ಕುಮಾರ್ ಅವರು ಸಮರ್ಥ ಹಾಗೂ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಅಕಾಡೆಮಿಯಲ್ಲಿ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ. ಆಸ್ಪತ್ರೆ, ಜಿಮ್, ಮೈದಾನ ಸೇರಿದಂತೆ ಇನ್ನಿತರ ವಿಭಾಗಗಳನ್ನು ಗಮನಿಸಿದ್ದು, ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸಚಿವರಾದ ಸೋಮಶೇಖರ್ ಶ್ಲಾಘಿಸಿದರು.
ಮೈಸೂರಿನಲ್ಲಿ ಕಳೆದ ಒಂದು ವರ್ಷದಿಂದ ಸಂಚರಿಸುತ್ತಿದ್ದೇನೆ. ಇದುವರೆಗೆ ಒಂದು ಸಣ್ಣ ಗಲಾಟೆ ಸಹ ಆಗಿಲ್ಲ. ಕೋವಿಡ್ ಸಂದರ್ಭದಲ್ಲಿಯೂ ಸಹ ಉತ್ತಮವಾಗಿ ಪೋಲಿಸರು ಕಾರ್ಯನಿರ್ವಹಣೆ ಮಾಡಿದ್ದಾರೆ. ಇಂದು ರಾಜ್ಯದ ಜನ ರಾತ್ರಿ ನೆಮ್ಮದಿಯಾಗಿ ಮಲಗುತ್ತಿದ್ದಾರೆಂದರೆ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಇದರಲ್ಲಿ ನೂತನ ಪೊಲೀಸರ ಜವಾಬ್ದಾರಿ ಹೆಚ್ಚಿದೆ ಕೇಂದ್ರ ಸಚಿವರಾದ ಸೋಮಶೇಖರ್ ಅವರು ಕಿವಿಮಾತು ಹೇಳಿದರು.
ಪೊಲೀಸರು ಉತ್ತಮ ತರಬೇತಿ ಪಡೆಯಬೇಕು. ಜೊತೆಗೆ ಮೈಸೂರಿನಲ್ಲಿ ಸುಸಜ್ಜಿತ ಗ್ರಂಥಾಲಯವಿದೆ. ಕೆಲವೊಂದು ಮಹತ್ವದ ತೀರ್ಪುಗಳ ಪ್ರತಿಗಳು ಸಿಗಲಿವೆ. ಇಂಥವುಗಳನ್ನು ಅಭ್ಯಾಸ ಮಾಡಬೇಕು. ಯಾವುದೇ ಒಂದು ಪ್ರಕರಣ ಇರಲಿ, ಅದರ ಸಂಪೂರ್ಣ ಆಯಾಮದಲ್ಲಿ ತನಿಖೆ ನಡೆಸಬೇಕಿದೆ. ನೀವು ದಕ್ಷ, ಪ್ರಾಮಾಣಿಕ ಅಧಿಕಾರಿಯಾದರೆ ಜನರ ಅಭಿಮಾನಿಸುವುದರ ಜೊತೆಗೆ ಕ್ರಿಮಿನಲ್ ಗಳು ಹೆದರುತ್ತಾರೆ ಎಂದು ಸಚಿವರು ಸಲಹೆ ನೀಡಿದರು.
ನೂತನ ಪೊಲೀಸ್ ಅಧಿಕಾರಿಗಳು ಉತ್ಸುಕತೆಯಿಂದ ಕೆಲಸ ಮಾಡಬೇಕು. ತಮ್ಮ ಸೇವೆ ನಮ್ಮ ಕರ್ನಾಟಕದ ಜನತೆಗೆ ಉತ್ತಮ ರೀತಿಯಲ್ಲಿ ಸಿಗಲಿ ಎಂದು ಸಚಿವರಾದ ಸೋಮಶೇಖರ್ ಅವರು ಹಾರೈಸಿದರು.