ಮಂಗಳೂರು: ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಕರಾವಳಿ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಭರ್ಜರಿ ಕಸರತ್ತು ನಡೆಸುತ್ತಿವೆ. ಆದರೆ ಟಿಕೆಟ್ ಹಂಚಿಕೆಯೇ ಪಕ್ಷಗಳಿಗೆ ಸವಾಲೆಂಬಂತಾಗಿದೆ.
ರಾಜ್ಯ ರಾಜಕಾರಣದ ಗದ್ದುಗೆ ಗುದ್ದಾಟದಲ್ಲಿ ಈವರೆಗೂ ಕರಾವಳಿಯ ಸಂಖ್ಯಾ ಬಲವೇ ನಿರ್ದರಿಸುತ್ತಿರುವುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಅದರಲ್ಲೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್-ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಅಖಾಡ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಶಾಸಕರ ನಡುವಿನ ಗುದ್ದಾಟವೇ ಮುಳುವಾಗುತ್ತೋ ಎಂಬ ಆತಂಕ ಆ ಪಕ್ಷದ ನಾಯಕರನ್ನು ಕಾಡಿದೆ. ಮಾಜಿ ಶಾಸಕರಾದ ಜೆ.ಆರ್.ಲೋಬೋ ಹಾಗೂ ಐವನ್ ಡಿಸೋಜಾ ಅವರು ಟಿಕೆಟ್ಗಾಗಿ ನಡೆಸಿರುವ ಲಾಭಿಯ ವೈಖರಿಯಿಂದ ಕಾಂಗ್ರೆಸ್ ನಾಯಕರೇ ಬೇಸತ್ತು ಹೋಗಿದ್ದಾರೆ ಎನ್ನಲಾಗುತ್ತಿದ್ದು, ಅಂತಿಮ ಕ್ಷಣದಲ್ಲಿ ಈ ಕ್ಷೇತ್ರದ ಟಿಕೆಟ್ ಬಿಲ್ಲವ ನಾಯಕ ಪದ್ಮರಾಜ್ ಅವರಿಗೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ.
ಕ್ರೈಸ್ತ ಸಮುದಾಯಕ್ಕೂ ಮುಜುಗರ?
-
ಹಿಂದೊಮ್ಮೆ ಬಿಜೆಪಿಯೊಳಗಿನ ಮುಸುಕಿನ ಗುದ್ದಾಟದಿಂದಾಗಿ ಹಿಂದೊಮ್ಮೆ ಕಾಂಗ್ರೆಸ್ ಹುರಿಯಾಳಾಗಿದ್ದ ಜೆ.ಅರ್.ಲೋಬೋ ಶಾಸಕರಾಗಿ ಗೆದ್ದಿದ್ದಾರೆಯೇ ಹೊರತು ವರ್ಚಸ್ವೀ ನಾಯಕತ್ವದಿಂದಾಗಿ ಅಲ್ಲ ಎಂಬುದು ಐವಾನ್ ಡಿಸೋಜಾ ಆಪ್ತರ ಮಾತುಗಳು. ಇದೇ ವೇಳೆ, ಪಕ್ಷದಿಂದ ಪಕ್ಷಕ್ಕೆ ಜಿಗಿಯಿತ್ತಾ ನಾಯಕರ ಲಾಭಿ ಮೂಲಕ ಐವನ್ ಅವರು ಪರಿಷತ್ ಸದಸ್ಯರಾಗಿದ್ದಾರೆಯೇ ಹೊರತು ಸಮರ್ಥ ನಾಯಕತ್ವದಿಂದಲ್ಲ ಎಂದು ಲೋಬೋ ಬೆಂಬಲಿಗರು ಟೀಕಿಸುತ್ತಿದ್ದಾರೆ. ಇವರಿಬ್ಬರನ್ನು ಬಿಟ್ಟು ಬೇರೆ ಕ್ರಿಶ್ಚಿಯನ್ ನಾಯಕರಿಗೆ ಟಿಕೆಟ್ ಕೊಡಿ ಎಂಬ ಮಾತುಗಳೂ ಪ್ರತಿಧ್ವನಿಸಿವೆ.
-
ಏತನ್ಮಧ್ಯೆ, ಕಳೆದೆರಡು ದಿನಗಳಿಂದೀಚೆಗೆ ಮಂಗಳೂರಿನ ಬಿಷಪ್ ಹೌಸ್ ಕೂಡಾ ವಿದ್ಯಮಾನಗಳ ಕೇಂದ್ರಬಿಂದುವಾಗಿದೆ. ಗುರುವಾರ ಅಲ್ಲಿ ಕರಾವಳಿ ಜಿಲ್ಲೆಗಳ ಚುನಾವಣೆ ಬಗ್ಗೆ ಚಿಂತನ-ಮಂಥನ ನಡೆದಿದೆ. ಕ್ರೈಸ್ತರು ಕಾಂಗ್ರೆಸ್ಗೆ ಶಕ್ತಿಯಾಗಿದ್ದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಕ್ರೈಸ್ತರಿಗೇ ಟಿಕೆಟ್ ಸಿಕ್ಕಿದರೆ ಗೆಲುವು ಕಷ್ಟ ಸಾಧ್ಯ. ಹಾಗಾಗಿ ಹೆಚ್ಚು ಪ್ರಾಬಲ್ಯವಿರುವ ಬಿಲ್ಲವ ಸಮುದಾಯದ ಮುಖಂಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದರೆ ಇಡೀ ಸಮುದಾಯವೇ ಅವರನ್ನು ಬೆಂಬಲಿಸಬೇಕಿದೆ’ ಎಂಬ ಅಭಿಪ್ರಾಯ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ನಾಲ್ಕೂವರೆ ಲಕ್ಷ ಬಿಲ್ಲವರಿದ್ದು, ಆ ಸಮುದಾಯಕ್ಕೂ ರಾಜಕೀಯ ಪ್ರಾತಿನಿದ್ಯ ಸಿಕ್ಕಿದರೆ, ಕ್ರೈಸ್ತ ಮುಖಂಡರಿಗೆ ವಿಧಾನ ಪರಿಷತ್ನಲ್ಲಿ ಅವಕಾಶ ಕೇಳೋಣ ಎಂಬ ಸಲಹೆಯೂ ಕೇಳಿಬಂತು.
‘ಸೋತು ಕಳೆದುಕೊಳ್ಳುವುದಕ್ಕಿಂತ ಗೆಲ್ಲಿಸಿ ಪಡೆಯೋಣ’ ಎಂಬ ಸೂತ್ರವನ್ನು ಅನುಸರಿಸೋಣ ಎಂದ ಕೆಲವು ಪ್ರಜ್ಞಾವಂತ ಕ್ರೈಸ್ತ ಮುಖಂಡರು, ಮಂಗಳೂರು ದಕ್ಷಿಣದ ಈ ಬೆಳವಣಿಗೆಯಿಂದಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ ಪರಿಸ್ಥಿತಿ ಸಿಗವಂತಾಗಬಹುದು ಎಂದೂ ಈ ಸಭೆಯಲ್ಲಿ ಪ್ರತಿಪಾದಿಸಿದ್ದಾರೆ. ಅದರಲ್ಲೂ ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಅವರಿಗೆ ಟಿಕೆಟ್ ಸಿಗಲೆಂದು ಈ ಸಭೆಯಲ್ಲಿ ಅಪೇಕ್ಷಿಸಿದವರೂ ಬಹಳಷ್ಟು ಮಂದಿ.
ಇದೆಲ್ಲದರ ನಡುವೆ, ಅದೇ ಕ್ಷೇತ್ರದಲ್ಲಿನ ಬಿಲ್ಲವರಿಗೆ ಐವನ್ ಡಿಸೋಜಾ ಬಗ್ಗೆ ಇರುವ ಸಿಟ್ಟು ಅಷ್ಟಿಷ್ಟಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕುದ್ರೋಳಿ ದಸರಾಗೆ ಭೇಟಿ ನೀಡಲು ಮುಂದಾಗಿದ್ದರೂ, ಅವರನ್ನು ದೇಗುಲಕ್ಕೆ ಭೇಟಿ ನೀಡದಂತೆ ಐವನ್ ಡಿಸೋಜಾ ಅವರು ತಡೆದಿದ್ದರು ಎಂಬುದು ಬಿಲ್ಲವ ಮುಖಂಡರ ಆರೋಪ.
ಇದೆಲ್ಲದರ ನಡುವೆ ಈ ಬಾರಿ ಮಂಗಳೂರು ದಕ್ಷಿಣದ ಕಾಂಗ್ರೆಸ್ ಟಿಕೆಟ್ ಆ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರಿರುವ ಬಿಲ್ಲವ ಸಮುದಾಯದವರಿಗೆ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮಂಗಳೂರು ದಕ್ಷಿಣದಲ್ಲಿ ಬಿಜೆಪಿಯೊಳಗಿನ ನಾಯಕರ ಒಳಜಗಳದ ಪರಿಸ್ಥಿತಿಯ ಲಾಭ ಪಡೆಯುವ ಅವಕಾಶವನ್ನು ಬಾಚಿಕೊಳ್ಳಲು ರಣವ್ಯೂಹ ರೂಪಿಸುತ್ತಿರುವಾಗಲೇ ಐವನ್-ಲೋಬೋ ಅವರ ಟಿಕೆಟ್ ಲಾಭಿ ತಂದಿಟ್ಟ ಫಜೀತಿಯಿಂದಾಗಿ ಕ್ಷೇತ್ರವನ್ನು ಗೆಲ್ಲುವ ಅವಕಾಶ ತಪ್ಪಿಹೋಗಬಹುದೇ ಎಂಬ ಆತಂಕ ಕಾಂಗ್ರೆಸ್ ನಾಯಕರದ್ದು. ಹಾಗಾಗಿ ಈ ಬಾರಿ ಟಿಕೆಟನ್ನು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಆಪ್ತ ಪದ್ಮರಾಜ್ ಅವರಿಗೆ ನೀಡುವ ಬಗ್ಗೆ ಮುಖಂಡರು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮಿಥುನ್ ವಿರುದ್ದ ಮುಗಿಬಿದ್ದ ಲೋಬೋ ಐವಾನ್ ಟೀಂ..
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೈ ಟಿಕೆಟ್ ಇದೀಗ ಬಿಲ್ಲವ ಸಮುದಾಯದ ನಾಯಕರಿಗೆ ಒಲಿಯುವ ಸೂಚನೆ ವ್ಯಕ್ತವಾಗುತ್ತಿದ್ದಂತೆಯೇ, ಈ ಬೆಳವಣಿಗೆಗೆ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಕಾರಣ ಎಂದು ಲೋಬೋ ಟೀಂ ಹಾಗೂ ಐವಾನ್ ಗ್ಯಾಂಗ್ ಆರೋಪಿಸುತ್ತಿದೆ. ಮಿಥುನ್ ಹಸ್ತಕ್ಷೇಪದಿಂದಾಗಿ ಕ್ರೈಸ್ತ ನಾಯಕರಿಗೆ ಟಿಕೆಟ್ ತಪ್ಪಲಿದ್ದು, ಇದರ ಸೇಡನ್ನು ಮಿಥುನ್ ಸ್ಪರ್ಧಿಸಲಿರುವ ಮುಲ್ಕಿ-ಮೂಡಬಿದ್ರಿಯಲ್ಲಿ ತೀರಿಸಿಕೊಳ್ಳುವುದಾಗಿ ಈ ಮುಖಂಡರ ಫಾಲೋವರ್ ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿರುವ ಪೋಸ್ಟ್ ಗಮನಸೆಳೆದಿದೆ. ಈ ಸಂಬಂಧದ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೆ.
ಇದೇ ವೇಳೆ, ಕಾಂಗ್ರೆಸ್ ಪಕ್ಷದ ವಿರುದ್ದವೇ ಈ ನಾಯಕರ ಬೆಂಬಲಿಗರು ಟೀಕಿಸುತ್ತಿರುವ ನಡೆ ಇಡೀ ಕ್ರೈಸ್ತ ಸಮುದಾಯವನ್ನೇ ಕೆರಳಿಸಿದಂತಿದೆ. ಲೋಬೋ-ಐವಾನ್ ಬೆಂಬಲಿಗರು ಹರಿಯಬಿಟ್ಟಿರುವ ಪೋಸ್ಟ್ಗಳಿಗೆ ಕಮೆಂಟ್ ಮಾಡಿರುವ ಹಲವರು, ಲೋಬೋ-ಐವಾನ್ ಅವರುಗಳು ಮಂಗಳೂರಿಗೆ ನೀಡಿರುವ ಕೊಡುಗೆ ಏನು? ಅವರು ಕ್ರೈಸ್ತ ಸಮುದಾಯಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂದು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಮಿಥುನ್ ವಿರುದ್ದ ಟೀಕಿಸಲು ಅಸ್ತಿತ್ವದಲ್ಲೇ ಇಲ್ಲದ ಕ್ರೈಸ್ತ ಸಂಸ್ಥೆಯ ಹೆಸರಲ್ಲಿ ಪೋಸ್ಟ್ಗಳನ್ನು ಹಾಕಲಾಗುತ್ತಿದೆ ಎಂದೂ ಕ್ರೈಸ್ತ ಸಮುದಾಯದ ಹಲವರು ಆಕ್ರೋಶ ಹೊರಹಾಕಿದ್ದಾರೆ.
ಮಂಗಳೂರು ದಕ್ಷಿಣವೇ ಕುತೂಹಲದ ಅಖಾಡ..!?
ಹೇಳಿ ಕೇಳಿ ಮಂಗಳೂರು ದಕ್ಷಿಣ ವಿಧಾನಸಭಾ ಈ ವರೆಗೂ ಬಿಜೆಪಿಯ ಭದ್ರಕೋಟೆ. ಕಳೆದ 30 ವರ್ಷಗಳ ಇತಿಹಾಸದಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಗೆದ್ದಿರುವುದಷ್ಟೇ. ಹಾಗೆಂದ ಮಾತ್ರಕ್ಕೆ ಇದು ಜಾತೀವಾರು ಲೆಕ್ಕಾಚಾರದಲ್ಲಿ ಹಿಂದೂಗಳ ಪ್ರಾಬಲ್ಯದ ಕ್ಷೇತ್ರವೇನಲ್ಲ. ಇಲ್ಲಿ ಜಾತಿ ಲೆಕ್ಕಾಚಾರದ ಮತಗಳೂ ಪರಿಣಾಮ ಬೀರಿಲ್ಲ. ಆದರೆ ಈ ಬಾರಿ ಜಾತಿಯ ಬಲಾಬಲ ನಿರ್ಣಾಕವೆನಿಸಬಲ್ಲದು ಎಂಬುದೇ ರಾಜಕೀಯ ಲೆಕ್ಕಾಚಾರ.
ಮಂಗಳೂರು (ದಕ್ಷಿಣ) ಜಾತಿವಾರು ಮತಾದರರ ಸಂಖ್ಯೆ:
- ಒಟ್ಟು 2:30 ಲಕ್ಷ
- ಬಿಲ್ಲವ – 60,೦೦೦
- ಕ್ರಿಶ್ಚಿಯನ್ – 45,0೦೦
- ಮುಸ್ಲಿಂ – 30೦೦೦
- GSB/ಬ್ರಾಹ್ಮಣ- 45,೦೦೦
- ಬಂಟ್ಸ್ – 30,೦೦0
- ಪರಿಶಿಷ್ಟ ಜಾತಿ/ಪಂಗಡ- 25,000
- ಇತರರು – 36೦೦೦
ಈ ಕ್ಷೇತ್ರದಲ್ಲಿ ಬಿಲ್ನವರೇ ಹೆಚ್ಚಿದ್ದರೂ ಈವರೆಗೂ ಗೌಡ ಸಾರಸ್ವತ ಸಮುದಾಯದವರೇ ಗೆದ್ದು ಬೀಗಿರುವುದು. ಒಮ್ಮೆ ಮಾತ್ರ ಕ್ರೈಸ್ತ ಸಮುದಾಯದ ವ್ಯಕ್ತಿ ಆಯ್ಕೆಯಾಗಿದ್ದಾರೆ. ಈ ಬಾರಿ ಬಿಲ್ಲವ ಸಮುದಾಯದವರು ಎಚ್ಚೆತ್ತುಕೊಂಡಿದ್ದು ಅತೀ ಹೆಚ್ಚು ಮತದಾರತಿರುವ ತಮ್ಮ ಸಮುದಾಯದವರಿಗೆ ಅವಕಾಶ ಕೊಡಿ ಎಂದು ರಾಜಕೀಯ ಪಕ್ಷಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಬಿಜೆಪಿಯಂತೂ ಹಾಲಿ ಶಾಸಕ ಗೌಡ ಸಾರಸ್ವತ ಸಮುದಾಯದ ವೇದವ್ಯಾಸ ಕಾಮತ್ ಅವರನ್ನೇ ಕಣಕ್ಕಿಳಿಸಲಿದೆ. ಆದರೆ, ಕಾಂಗ್ರೆಸ್ನ ಕೆಲವರ ಚಿತ್ತ ಬಿಲ್ಲವರತ್ತ ನೆಟ್ಟಿದೆ. ಹಾಗಾಗಿಯೇ ಪದ್ಮರಾಜ್ ಹೆಸರೇ ಮುಂಚೂಣಿಯಲ್ಲಿರುವುದು. ಆದರೆ ಪಕ್ಷಗಳಲ್ಲಿನ ಬಣ ರಾಜಕೀಯದಿಂದಾಗಿ ಟಿಕೆಟ್ ಯಾರ ಪಾಲಾಗುತ್ತೋ ಎಂಬ ಕುತೂಹಲ ಹೆಚ್ಚಿದೆ.