ಮಂಗಳೂರು: ಕರಾವಳಿಯ ಖ್ಯಾತ ಉದ್ಯಮಿ, ಬಿಜೆಪಿ ಹಿರಿಯ ನಾಯಕ ಸುಧೀರ್ ಘಾಟೆ ವಿಧಿವಶರಾಗಿದ್ದಾರೆ. ಇಂದು ಅವರು ಮಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.
ರಾಜ್ಯದ ಪ್ರಮುಖ ಜಾಹೀರಾತು ಸಂಸ್ಥೆ,’ ಮ್ಯಾಗ್ನಮ್ ಇಂಟರ್ ಗ್ರಾಫಿಕ್ಸ್’ ಸಂಸ್ಥಾಪಕಾರಾಗಿರುವ ಸುಧೀರ್ ಘಾಟೆ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಸಂಘಪರಿವಾರದ ಹಿರಿಯರಾದ ದಿವಂಗತ ಪ್ರಭಾಕರ್ ಘಾಟೆ- ಶಾರದಾ ಘಾಟೆ ದಂಪತಿ ಪುತ್ರರಾದ ಸುಧೀರ್ ಘಾಟೆ, ಸುಮಾರು ಎರಡು ದಶಕಗಳ ಹಿಂದೆ ಕರಾವಳಿ ಬಿಜೆಪಿಯ ಮಾಸ್ಟರ್ ಮೈಂಡ್ ಎಂದೇ ಗುರುತಾಗಿದ್ದರು.
1995ರಲ್ಲಿ ರಾಜ್ಯ ಬಿಜೆಪಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಕಟ್ಟಿದ್ದ ಅವರು, ಸಂಘ ಅಥವಾ ಬಿಜೆಪಿಯಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲು ಎಂದೂ ಲಾಭಿ ನಡೆಸಿದವರಲ್ಲ ಎಂಬುದು ಅವರ ಆಪ್ತರ ನುಡಿ.
ಬಿಎಂಎಸ್ ಸಂಘಟನೆಯಲ್ಲೂ ಪ್ರಮುಖ ಜವಾಬ್ಧಾರಿ ಹೊಂದಿದ್ದ ಇವರು ವಿವಿಧ ಕಾರ್ಪೊರೇಟ್ ಕಂಪನಿಗಳ ಪ್ರಮುಖರ ಜೊತೆ ನಿಕಟ ಸಂಬಂಧ ಹೊಂದಿದ್ದರು. ಈ ಮೂಲಕ ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಮುಖ ಕಾರ್ಯಕ್ರಮಗಳ ಯಶಸ್ವೀ ಸಂಘಟಕರಾಗಿ ಗಮನಸೆಳೆದಿದ್ದರು. ಹಲವಾರು ಸಂಘಟನಾತ್ಮಕ ವಿಚಾರದಲ್ಲಿ ಇವರು ಅಡ್ವಾಣಿ, ವಾಜಪೇಯಿ, ಸುಷ್ಮಾ ಸ್ವರಾಜ್ ಸಹಿತ ಬಿಜೆಪಿ ರಾಷ್ಟ್ರೀಯ ಧುರೀಣರಿಂದ ಶಹಬ್ಬಾಸ್ಗಿರಿ ಗಿಟ್ಟಿಸಿಕೊಂಡಿದ್ದರು.
ನಾಯಕರ ಕಂಬನಿ:
ಸುಧೀರ್ ಘಾಟೆ ನಿಧನಕ್ಕೆ, ಸಂಸದ ನಳಿನ್ ಕುಮಾರ್, ಮಾಜಿ ಶಾಸಕ ಸುಧೀರ್ ಘಾಟೆ ಬಿಜೆಪಿ ನಾಯಕರನೇಕರು ಕಂಬನಿ ಮಿಡಿದಿದ್ದಾರೆ. ಪಕ್ಷದ ಹಲವಾರು ವಿಚಾರಗಳಲ್ಲಿ ಸುಧೀರ್ ಘಾಟೆ ಅವರು ನಾಯಕರಿಗೆ ಬೆನ್ನೆಲುಬಾಗಿ ನಿಂತಿದ್ದರು ಎಂದು ಮೋನಪ್ಪ ಭಂಢಾರಿಯವರು ತಾವು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದ ಸನ್ನಿವೇಶಗಳನ್ನು ನೆನಪಿಸಿಕೊಂಡಿದ್ದಾರೆ.

























































