ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನರಿಗೆ ವರದಾನ ಆಗಿರುವುದಂತೂ ಸತ್ಯ. ಅದರಲ್ಲೂ ‘ಶಕ್ತಿ’ ಯೋಜನೆಯಿಂದಾಗಿ ಸಾರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಈ ಅವಕಾಶದಿಂದಾಗಿ ಸಾರಿಗೆ ನಿಗಮಗಳಿಗೂ ಆದಾಯ ಹೆಚ್ಚಿದೆ, ಧಾರ್ಮಿಕ-ಪ್ರವಾಸಿ ಕೇಂದ್ರಗಳೂ ಶ್ರೀಮಂತವಾಗಿವೆ.
ಇಲ್ಲೊಬ್ಬಳು ವಿದ್ಯಾರ್ಥಿನಿ ಈ ‘ಶಕ್ತಿ’ ಯೋಜನೆಯನ್ನು ಯಾವರೀತಿ ಸದುಪಯೋಗಪಡಿಸಿದ್ದಾಳೆ ಎಂದರೆ, ಆಕೆ ಪ್ರಯಾಣ ಮಾಡಿದ ಸಂದರ್ಭದ ಬಸ್ ಟಿಕೆಟ್ಗಳನ್ನು ಮಾರುದ್ದದ ಹಾರವನ್ನಾಗಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಮರ್ಪಿಸಿದ್ದಾಳೆ.
ಹಾಸನ ಜಿಲ್ಲೆ ಅರಸೀಕೆರೆ ಮೂಲದ, ಮೊದಲ ವರ್ಷದ ಕಾನೂನು ವಿದ್ಯಾರ್ಥಿನಿ ಎಂ.ಎ. ಜಯಶ್ರೀ, ಅಇ ಉಚಿತ ಬಸ್ ಪ್ರಯಾಣದ ಟಿಕೆಟ್ಗಳಿಂದ ಹಾರ ತಯಾರಿಸಿ ಗಮನಸೆಳೆದಿದ್ದಾರೆ.
ಗ್ಯಾರಂಟಿಗಳ ಘೋಷಣೆ ಮೂಲಕ 136 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರವು ‘ಗ್ಯಾರಂಟಿ’ ಭರವಸೆಯಾಗಿ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ‘ಶಕ್ತಿ’ಯನ್ನು ಜಾರಿಗೆ ತಂದಿದೆ. ಈ ‘ಶಕ್ತಿ’ಯನ್ನು ಸದುಪಯೋಗ ಮಾಡಿಕೊಂಡ ವಿದ್ಯಾರ್ಥಿನಿ ಜಯಶ್ರೀ, ತಾನು ಪ್ರಯಾಣಿಸಿದಾಗ ಪಡೆದ ಉಚಿತ ಬಸ್ ಟಿಕೆಟುಗಳನ್ನು ಸಂಗ್ರಹಿಸಿಟ್ಟು ಅದರಿಂದ ಹಾರ ರಚಿಸಿದ್ದಾಳೆ. ಈ ಟಿಕೆಟ್ ಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮರ್ಪಿಸಿದ್ದಾಳೆ.
ವಿದ್ಯಾರ್ಥಿನಿಯ ಈ ನಡೆ ಕುತೂಹಲ ಎನಿಸಿದರೂ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಯಾಕಿದು ಟಿಕೆಟ್ ಹಾರ..?
ಈ ಟಿಕೆಟ್ ಹಾರ ಬಗ್ಗೆ ಹೇಳಿಕೊಂಡಿರುವ ವಿದ್ಯಾರ್ಥಿನಿ ಜಯಶ್ರೀ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ಗ್ಯಾರೆಂಟಿ ಭರವಸೆಯನ್ನು ಜಾರಿಗೊಳಿಸಿದ್ದಾರೆ ಅದರಂತೆ ಉಚಿತ ಪ್ರಯಾಣ ವ್ಯವಸ್ಥೆಯ ಫಲವಾಗಿ ನಾನು ಕಾನೂನು ವಿದ್ಯಾಭ್ಯಾಸವನ್ನು ನಿರಾತಂಕವಾಗಿ ಮಾಡಲು ಸಾಧ್ಯವಾಗಿದೆ. ಹಾಗಾಗಿ ಎಲ್ಲಾ ಫ್ರೀ ಟಿಕೆಟ್ಗಳನ್ನು ಜೋಡಿಸಿಟ್ಟುಕೊಂಡು ಹಾರ ಮಾಡಿ ಸಿಎಂಗೆ ಸಮರ್ಪಿಸಿರುವುದಾಗಿ ತಿಳಿಸಿದ್ದಾರೆ.