ಬೆಂಗಳೂರು: ಜಿಂದಾಲ್ ಭೂ ಚಕ್ರದ ವಿರುದ್ದ ಕಾನೂನು ಸಮರ ಕೈಗೊಂಡ ಸಾಮಾಜಿಕ ಹೋರಾಟಗಾರರ ಗುಂಪು ಇದೀಗ ಮತ್ತೊಂದು ಭೂ ಕರ್ಮಕಾಂಡದ ವಿರುದ್ದ ಹೋರಾಟದ ಅಖಾಡಕ್ಕಿಳಿದಿದೆ. ರಾಜಧಾನಿ ಬೆಂಗಳೂರಿನ ಸೆರಗಿನಲ್ಲೇ ನೂರಾರು ಕೋಟಿ ರೂಪಾಯಿ ಮೌಲ್ಯದ ನೂರಾರು ಎಕರೆ ಜಮೀನನ್ನು ಕಬಳಿಸಿರುವ ಭಾರಿ ಹಗರಣವನ್ನು ಈ ಹೋರಾಟದ ತಂಡ ಬೆನ್ನತ್ತಿದೆ.
ಏನಿದು ಪ್ರಕರಣ..?
ಬೆಂಗಳೂರು ದಕ್ಷಿಣ ತಾಲೂಕು ವ್ಯಾಪ್ತಿಯ ಕೆಂಗೇರಿ ಸಮೀಪದ ಕಂಬೀಪುರ ಗ್ರಾಮದಲ್ಲಿ ಕ್ರೈಸ್ತ ಧರ್ಮೀಯರ ಹೆಸರಲ್ಲಿ ಕೆಲವು ಟ್ರಸ್ಟ್ಗಳ ಮೂಲಕ ನೂರಾರು ಎಕರೆ ಜಮೀನು ಕಬಳಿಕೆಯಾಗಿವೆ ಎಂಬುದು ಸ್ಥಳೀಯರ ಆರೋಪ. ಜಿಂದಾಲ್ ಭೂ ಕರ್ಮಕಾಂಡದ ವಿರುದ್ದ ಕಾನೂನು ಸಮರ ಕೈಗೊಂಡು ಸಿಎಂ ಯಡಿಯೂರಪ್ಪ ರಾಜೀನಾಮೆಗೆ ಕಾರಣರಾಗಿದ್ದ ಕೆ.ಎ.ಪಾಲ್ ನೇತೃತ್ವದ ಸಿಟಿಜನ್ ರೈಟ್ಸ್ ಫೌಂಡೇಶನ್ ಈ ಕುರಿತು ಹೋರಾಟ ಆರಂಭಿಸಿದೆ. ಸ್ಥಳೀಯರ ದೂರನ್ನಾಧರಿಸಿ ಸಿಟಿಜನ್ ರೈಟ್ಸ್ ಫೌಂಡೇಶನ್ ಮುಖಂಡ ಕೆ.ಎ.ಪಾಲ್ ಅವರು ಈ ಆರೋಪ ಕುರಿತಂತೆ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ. ಈ ಮೂಲಕ ಭಾರೀ ಹಗರಣವೊಂದನ್ನು ಬೇಧಿಸುವ ಪ್ರಯತ್ನ ನಡೆದಿದೆ.
ಸಿಟಿಜನ್ ರೈಟ್ಸ್ನ ಪತ್ರದ ಸಂಚಲನ..?
ಕಂಬೀಪುರ ಗ್ರಾಮದಲ್ಲಿ ಕೆಲವು ಟ್ರಸ್ಟ್ಗಳು ಹಾಗೂ ನಕಲಿ ಸಂಸ್ಥೆಗಳು ಜಮೀನು ಕಬಳಿಸಿವೆ. ಈ ಪೈಕಿ ಸೈಂಟ್ ಜೋಸೆಫ್ ಡಿಸ್ಪೆನ್ಸರಿ, ಶಾಂತಿ ಡಿಸ್ಪೆನ್ಸರಿ, ಆಶೀರ್ವನಮ್ ಬೆನಡಿಕ್ಟ್ ಫಾರಂ, ಸೈಂಟ್ ಆ್ಯಂಡ್ರೋಸ್ ಬೆನಡಿಕ್ಟ್ ಗೆಸ್ಟ್ ಹೌಸ್, ಆಶೀರ್ವನಮ್ ಸ್ಟಡಿ ಹೌಸ್, ಆಶೀರ್ವನಮ್ ನೋವಿಷಿಯೇಟ್ ಗೆಸ್ಟ್ ಹೌಸ್ ಎಂಬ ಸಂಸ್ಥೆಗಳ ಹೆಸರಲ್ಲಿ ಹಾಗೂ ಕ್ರೈಸ್ತ ಸಮುದಾಯದ ಹೆಸರಿನಲ್ಲಿ ನೂರಾರು ಎಕರೆ ಜಮೀನು ಒತ್ತುವರಿಯಾಗಿದೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.
ಸರ್ವೇ ನಂಬರ್ 202, 203, 204, 206, 207, 208, 209, 210, 211, 212, 213, 214, 215, 216, 217, 218, 219, 220, 221, 222, 224, 226, 227, 229, 230, 232ರ ನೂರಾರು ಎಕರೆ ಸರ್ಕಾರಿ ಜಮೀನನ್ನು ತಪ್ಪು ಮಾಹಿತಿ ಒದಗಿಸಿ, ಅಕ್ರಮ ದಾಖಲೆಗಳೊಂದಿಗೆ ಹಂಚಿಕೆ ಮಾಡಿಸಿಕೊಂಡು, ಸದರಿಯವರು ಅಕ್ರಮ ಎಸಗಿದ್ದಾರೆ ಎಂಬುದು ಆರೋಪ. ಈ ಬಗ್ಗೆ ತನಿಖೆ ನಡೆಸಬೇಕೆಂದು ಸರ್ಕಾರವನ್ನು ಕೋರಿರುವ ಕೆ.ಎ.ಪಾಲ್, ಜಮೀನು ಒತ್ತುವರಿಯಾಗಿದ್ದಲ್ಲಿ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಕೆಗೆ ಸಂಚು ನಡೆದಿದ್ದಲ್ಲಿ ಸೂಕ್ತ ಕಾನೂನು ಕ್ರಮಕ್ಕೆ ಶಿಫಾರಸು ಮಾಡಬೇಕೆಂದು ಕೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಈ ಭೂ ಅಕ್ರಮ ಕುರಿತಂತೆ ಸಾಕಷ್ಟು ದಾಖಲೆಗಳನ್ನು ಒದಗಿಸಿದಲ್ಲಿ ತಪ್ಪಿತಸ್ಥರಿಂದ ಜಮೀನು ವಶಪಡಿಸಿ, ಕಾನೂನು ಕ್ರಮ ಅನುಸರಿಸಲಾಗುವುದು ಎಂದು ತಿಳಿಸಿದ್ದಾರೆ.