ಉಡುಪಿ: ಉಡುಪಿ ಚಿಕ್ಕಮಗಳೂರು ಜಿಲ್ಲೆಗಳ ಅಭಿವೃದ್ಧಿಗೆ ಕೇಂದ್ರದಿಂದ ಭರಪೂರ ಅನುದಾನ ತರುವಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಯಶಸ್ವಿಯಾಗಿದ್ದಾರೆ. ಕೆಲ ಸಮಯದ ಹಿಂದಷ್ಟೇ ಹೆದ್ದಾರಿ ವಿಸ್ತರಣೆ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ತಂದು ಕೊಟ್ಟ ಶೋಭಾ ಕರಾಂದ್ಲಾಜೆ ಅವರು ಇದೀಗ ಉಡುಪಿಯ ಕಟಪಾಡಿ ಬಳಿ ಓವರ್ ಪಾಸ್ ಕಾಮಗಾರಿಗೆ ಒಪ್ಪಿಗೆ ಪಡೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ಗೆ (NH-66) ಕಟಪಾಡಿಯಲ್ಲಿ 22.72 ಕೋಟಿ ರೂಗಳ ವೆಚ್ಚದಲ್ಲಿ ಓವರ್ ಪಾಸ್ (Over Pass) ನಿರ್ಮಿಸಲು ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.
ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಪ್ರದೇಶದಲ್ಲಿ ಅಂಡರ್ ಪಾಸಿನ ಅವಶ್ಯಕತೆಯಿದೆ ಎಂದು ಕ್ಷೇತ್ರದ ಜನತೆ ಹಲವಾರು ವರುಷಗಳಿಂದ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಹಲವಾರು ಬಾರಿ ಕೇಂದ್ರ ಭೂ ಸಾರಿಗೆ ಸಚಿವರನ್ನು ಭೇಟಿಯಾಗಿರುವ ಸಂಸದೆ ಶೋಭಾ ಕರಂದ್ಲಾಜೆಯವರು ಕಟಪಾಡಿ ನಗರ ಪ್ರದೇಶವಾಗಿದ್ದು, ಹೆಚ್ಚಿನ ಜನ ಸಂಚಾರವಿರುವ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ‘ಅಂಡರ್ ಪಾಸ್, ಓವರ್ ಪಾಸ್’ ಅನಿವಾರ್ಯತೆಯಿದೆ ಎಂದು ಮನದಟ್ಟು ಮಾಡಿದ್ದರು.
ಕ್ಷೇತ್ರದ ಜನರ ಅಪೇಕ್ಷೆಯಂತೆ, ಕೇಂದ್ರ ಸರಕಾರ ಕಟಪಾಡಿಯಲ್ಲಿ ಅಂಡರ್ ಪಾಸಿನ ಬದಲು, ‘ಓವರ್ ಪಾಸ್’ ನಿರ್ಮಿಸಲು ತಾತ್ವಿಕ ಅನುಮೋದನೆಯನ್ನು ನೀಡಿದೆ. ಈ ಯೋಜನೆಯು ಕಾಪು ವಿಧಾನ ಸಭಾ ಕ್ಷೇತ್ರದ ಕಟಪಾಡಿ, ಬಂಟಕಲ್, ಶಿರ್ವ, ಮಟ್ಟು, ಬೆಳ್ಮಣ್ ಪ್ರದೇಶದ ನಿವಾಸಿಗಳಿಗೆ ಸಹಕಾರಿಯಾಗಲಿದೆ.
ವಿಸ್ತೃತ ಯೋಜನಾ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರು ಮಾಡುತ್ತಿದೆ, ಮುಂದಿನ ತಿಂಗಳಲ್ಲಿ ಯೋಜನೆಯ ಪೂರ್ಣ ವಿವರಗಳು ಲಭ್ಯವಾಗಳಿವೆ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.
ಜನಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಕಟಪಾಡಿಯಲ್ಲಿ 22.72 ಕೋಟಿ ರೂಗಳ ವೆಚ್ಚದಲ್ಲಿ ಓವರ್ ಪಾಸ್ ನಿರ್ಮಿಸಲು ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಶೋಭಾ ಕರಂದ್ಲಾಜೆ ಕೃತಜ್ಞತೆ ಸಲ್ಲಿಸಿದ್ದಾರೆ.