ಮಂಗಳೂರು: ವಿಧಾನಸಭಾ ಚುನಾವಣೆ ಮುಗಿದಿದೆ ಲೆಕ್ಜೆಚಾರದಲ್ಲಿ ತೊಡಗಿದ್ದವರ ಕುತೂಹಲವೂ ತಣಿದಿದೆ. ಇದೀಗ ಯಾರು ಸಚಿವರಾಗ್ತಾರೆ? ಯಾರಿಗೆ ಯಾವ ಖಾತೆ ಸಿಗುತ್ತೆ ಎಂಬ ಕುತೂಹಲವಷ್ಟೇ. ಈ ನಡುವೆ, ಹಿರಿಯ ಕಾಂಗ್ರೆಸ್ ನಾಯಕ ಜಿ.ಎ.ಬಾವಾ ಅವರು ವಿಭಿನ್ನ ನಡೆಯಿಂದ ಎಲ್ಲರ ಗಮನಕೇಂದ್ರೀಕರಿಸಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಕರಾವಳಿ, ಮಲೆನಾಡು, ಬಯಲುಸೀಮೆಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದ ಜಿ.ಎ.ಬಾವಾ ಅವರು ಹಲವಾರ ಗೆಲುವಿಗೆ ಸ್ಫೂರ್ತಿಯಾಗಿದ್ದರು ಎಂಬುದು ಪಕ್ಷದೊಳಗಿನ ಚರ್ಚೆ. ಇದೀಗ ಅವರು ಗೆದ್ದವರನ್ನು ಅಭಿನಂದಿಸುತ್ತಾ, ಸೋತವರಿಗೆ ಸಂತ್ವನ ಹೇಳುತ್ತಾ ಪಕ್ಷದೊಳಗೆ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ಜೆ.ಆರ್.ಲೋಬೋ, ಬಿ.ರಮಾನಾಥ ರೈ, ಮಿಥುನ್ ರೈ, ಇನಾಯತ್ ಆಲಿ, ರಕ್ಷಿತ್ ಸಹಿತ ಪರಾಜಿತ ಕಾಂಗ್ರೆಸ್ ನಾಯಕರನ್ನು ಅವರು ಭೇಟಿ ಮಾಡಿ ಫಲಿತಾಂಶ ಬಗ್ಗೆ ಪರಾಮರ್ಶೆ ನಡೆಸಿದರು. ‘ಸೋಲು-ಗೆಲುವು ಸಾಮಾನ್ಯ ಫಲಿತಾಂಶ. ಅದೇನಿದ್ದರೂ ಅಂತಿಮವಾಗಿ ಮಾಡಬೇಕಾದದ್ದು ಸಮಾಜಹಿತ ಕಾರ್ಯ. ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡೋಣ’ ಎಂದು ಜಿ.ಎ.ಬಾವಾ ಅಭಿಪ್ರಾಯ ಮುಂದಿಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಜಿ.ಎ.ಬಾವಾ, ಪ್ರಸ್ತುತ ಪರಿಸ್ಥಿತಿಯಲ್ಲಿ ಜನರು ಸದ್ಭಾವನೆಯತ್ತ ಗಮನಕೇಂದ್ರೀಕರಿಸಬೇಕು ಎಂದು ಪ್ರತಿಪಾದಿಸಿದರು. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭಿವೃದ್ಧಿ ಉದ್ದೇಶದ ಜೊತೆ ಸಾಮರಸ್ಯದ ಭರವಸೆಯನ್ನೂ ನೀಡಲಾಗಿದೆ. ಕರ್ನಾಟಕವನ್ನು ಸರ್ವ ಸಮುದಾಯದ ಶಾಂತಿಯ ತೋಟವನ್ಬಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರೂ ಆಗಿರುವ ಜಿ.ಎ.ಬಾವಾ ಅವರು, ತಾವು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ತಮ್ಮ ಮೇಲೆ ಎಲ್ಲಾ ಸಮುದಾಯದವರ ಆಶೀರ್ವಾದ ಇತ್ತು. ಎಲ್ಲರ ಪ್ರೀತಿ ವಿಶ್ವಾಸ ತಮ್ಮ ಮೇಲಿದ್ದುದರಿಂದ ಸಮಾಜದಲ್ಲಿ ಗೌರವದ ಸ್ಥಾನ ಪಡೆದಿದ್ದೇನೆ ಎಂದರು.