ಬೆಂಗಳೂರು: ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಪತ್ರಕರ್ತರ ಸಮೂಹವು ಪತ್ರಿಕೋದ್ಯಮ ಚಟುವಟಿಕೆಯ ಜೊತೆ ಜನಪರ ಕಾರ್ಯಕ್ರಮಗಳ ಮೂಲಕ ಜನಹಿತ ನಡೆ ಅನುಸರಿಸಿದೆ. ಗ್ರಾಮೀಣ ಅಭಿವೃದ್ಧಿ ದಿಶೆಯಲ್ಲಿ ಈ ಸಂಘ ಕೈಗೊಂಡ ಕಾರ್ಯಕ್ರಮಗಳು ದೇಶವ್ಯಾಪಿ ಗಮನಸೆಳೆದಿವೆ. ಈ ಸಾಧನೆಯನ್ನು ಪರಿಗಣಿಸಿರುವ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.
ಮಂಗಳೂರಿನಲ್ಲಿ 1976, ಅಕ್ಟೋಬರ್ 6ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂತು. ಆ ಬಳಿಕ 46 ವರ್ಷಗಳಲ್ಲಿ ಸಂಘದ ಹಿರಿಯ ,ಕಿರಿಯ ಸದಸ್ಯರು ನಡೆಸಿದ ತ್ಯಾಗ, ಪರಿಶ್ರಮದ ಫಲವಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಹೊತ್ತು ರಾಜ್ಯದ ಅತ್ಯುತ್ತಮ ಸಂಘವಾಗಿ ಗುರುತಿಸಿಕೊಂಡಿದೆ. ಲೇಡಿಹಿಲ್ ನಲ್ಲಿ ಸ್ವಂತ ಕಚೇರಿ ಕಟ್ಟಡ ಪತ್ರಿಕಾಭವನವನ್ನು ಹೊಂದಿದೆ.
ಜಿಲ್ಲಾ ಸಂಘ ಸದಸ್ಯರ ಹಿತ ಕಾಯುವ ಜೊತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ.
ಸಂಘದ ಮೂರನೆಯ ವರ್ಷಗಳ ಸಾಧನೆಯ ಪ್ರಮುಖ ಹೆಜ್ಜೆಗಳು ಇಂತಿವೆ:
ಕುತ್ಲೂರು(2018),ಮಡಪ್ಪಾಡಿ (2020)ಮತ್ತು ಸಿರಿಬಾಗಿಲು-ಕೊಂಬಾರಿನಲ್ಲಿ(2021) ಗ್ರಾಮವಾಸ್ತವ್ಯ ಕಾರ್ಯಕ್ರಮ.
ಮಡಪ್ಪಾಡಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಗ್ರಾಮೀಣ ಅಭಿವೃದ್ಧಿ ಸಚಿವರ ಮೂಲಕಎರಡು ಕೋಟಿ ರೂ. ಅನುದಾನ ದೊರಕಿಸಿಕೊಡಲಾಗಿದೆ.

ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ (2020)
ಪ್ರಥಮ ಜಿಲ್ಲಾ ಸಮ್ಮೇಳನ(2019)
ಎರಡು ಬಾರಿ ಕೆಯುಡಬ್ಲ್ಯು ಜೆ ರಾಜ್ಯ ಕಾರ್ಯಕಾರಿಣಿ ಸಭೆ(2019 ಮತ್ತು2020)

ನಿಧನರಾದ ಐವರು ಪತ್ರಕರ್ತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೆಯುಡಬ್ಲ್ಯುಜೆ ಮೂಲಕ 19 ಲಕ್ಷ ರೂ.ಪರಿಹಾರ ಒದಗಿಸಿಕೊಡಲಾಗಿದೆ.
ಮಳೆಯಿಂದ ತೊಂದರೆಗೊಳಗಾದ ಪತ್ರಕರ್ತರಿಗೆ ಸಂಘ ನೆರವಾಗಿತ್ತು. ಮುಖ್ಯಮಂತ್ರಿ ಪರಿಹಾರ ನಿಧಿಗೆ 2018ರಲ್ಲಿ ನಿಧಿ ಸಮರ್ಪಿಸಿತ್ತು.
ಪತ್ರಕರ್ತರು ಮತ್ತು ಅವರ ಕುಟುಂಬದ ಆರೋಗ್ಯ ರಕ್ಷಣೆಗೆ ಪತ್ರಿಕಾಭವನದಲ್ಲಿ ಮಿಡಿಯಾ ಹೆಲ್ತ್ ಕ್ಲಿನಿಕ್. ಅನಾರೋಗ್ಯದ ಸಮಸ್ಯೆ ಎದುರಿಸಿದ ಪತ್ರಕರ್ತರ ಚಿಕಿತ್ಸೆಗೆ ಸ್ಪಂದನೆ. ಪತ್ರಕರ್ತರ ಹಿತಕಾಯಲು ಕ್ಷೇಮ ನಿಧಿ ಯೋಜನೆ.

ಪತ್ರಕರ್ತರು ಮತ್ತು ಅವರ ಕುಟುಂಬದವರನ್ನು ಕೊರೋನ ಸೋಂಕಿನಿಂದ ಪಾರು ಮಾಡಲು ಲಸಿಕೆ ಒದಗಿಸಿಕೊಡುವಲ್ಲಿ ಗರಿಷ್ಠ ಪ್ರಯತ್ನ. ಈ ಅಭಿಯಾನದಲ್ಲಿ ಯಶಸ್ಸು.
ಪತ್ರಕರ್ತರಿಗೆ ನಿವೇಶನ ಒದಗಿಸಿಕೊಡಲು ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪನೆ.
ಕೊರೋನ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ರಕ್ತದ ಕೊರತೆ ಉಂಟಾದಾಗ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮೂಲಕ ರಕ್ತದಾನದ ಬಗ್ಗೆ ಜನಜಾಗೃತಿಮೂಡಿಸಿ, ರಕ್ತದ ಕೊರತೆ ನಿವಾರಿಸುವಲ್ಲಿ ಸಂಘ ಶ್ರಮಿಸಿದೆ.
ಪತ್ರಕರ್ತರಲ್ಲಿ ಪರಸ್ಪರ ಸಹಕಾರ ಮನೋಭಾವ, ಸಮಾಜಸೇವೆಯ ಮಹತ್ವ, ಒಗ್ಗಟ್ಟು, ಸೌಹಾರ್ದತೆ ಮೂಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವುದು.ತಾಲೂಕು ಸಂಘಗಳ ಬಲವರ್ಧನೆಗೆ ಕ್ರಮ.
ಸರ್ಕಾರ ಮತ್ತು ದಾನಿಗಳ ನೆರವಿನಿಂದ ಕುತ್ಲೂರು ಸರಕಾರಿ ಶಾಲೆಯ ಅಭಿವೃದ್ಧಿ
ಕುತ್ಲೂರು, ಮಡಪ್ಪಾಡಿ ಮತ್ತು ಕೊಂಬಾರುವಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಮಡಪ್ಪಾಡಿ ಮತ್ತು ಕಾವಳಮುಡೂರು ಗ್ರಾಮದಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜನಜಾಗೃತಿ ಕಾರ್ಯಕ್ರಮ.
ಪತ್ರಕರ್ತರಿಗೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವತಿಯಿಂದ ಉಚಿತ ಹೆಲ್ತ್ ಕಾರ್ಡ್ ವ್ಯವಸ್ಥೆ.
ಬ್ರ್ಯಾಂಡ್ ಮಂಗಳೂರು ಮೂಲಕ ಸತತ ಮೂರು ಬಾರಿ ಫ್ರೆಂಡ್ ಶಿಪ್ ಕ್ರಿಕೆಟ್ ಟೂರ್ನಮೆಂಟ್. ಡಿಸಿ, ಎಸ್ಪಿ, ವಿಸಿ, ಪೊಲೀಸ್ ಆಯುಕ್ತರ ಇಲೆವೆನ್ ಇದರಲ್ಲಿ ಭಾಗಿಯಾಗಿತ್ತು.
ಭತ್ತದ ಕೃಷಿಗೆ ಉತ್ತೇಜನ ನೀಡಲು ಪತ್ರಕರ್ತರಿಂದ ಭತ್ತದ ನಾಟಿ ಮತ್ತು ಕೊಯ್ಲು,
ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಪತ್ರಕರ್ತರ ನೆರವಿಗೆ ಧಾವಿಸಿರುವುದು. ದಾನಿಗಳ ಮೂಲಕ ಆಹಾರ ಕಿಟ್ ವ್ಯವಸ್ಥೆ ಮಾಡಿಕೊಟ್ಟಿದೆ.
ಯೋಗ ತರಬೇತಿ ಶಿಬಿರ
ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ.
ಬೀಚ್ ಸ್ವಚ್ಛತಾ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ
ಪ್ರತಿವರ್ಷ ವನಮಹೋತ್ಸವ ಕಾರ್ಯಕ್ರಮ.
ಪತ್ರಕರ್ತರಿಗೆ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ ಸೇರಿದಂತೆ ಪತ್ರಕರ್ತರಿಗೆ ಹಾಗೂ ಸಮಾಜದ ಹಿತದೃಷ್ಟಿಯಿಂದ ಹೀಗೆ ಹತ್ತು ಹಲವು ಕಾರ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲೆಯಲ್ಲಿ ಮನೆ ಮಾತಾಗಿದೆ. ಇದೀಗ ಈ ಸಂಘಕ್ಕೆ ಪ್ರಶಸ್ತಿ ಘೋಷಿಸಿರುವ ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.








































































