ಹಾಸನ: ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ಮೂಲದ ಯುವಕರ ತಂಡಕ್ಕೆ ಭೀಕರ ದುರಂತ ಎದುರಾಗಿದ್ದು, ಸ್ನೇಹಿತರ ಕಣ್ಣೆದುರೇ ಮೂವರು ಯುವಕರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ಮೂಲದ ಯುವಕರ ತಂಡ ಧರ್ಮಸ್ಥಳ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಹಾಸನ ಜಿಲ್ಲೆಯ ಗೊರೂರು ಸಮೀಪದ ಹೇಮಾವತಿ ಜಲಾಶಯದ ಹಿನ್ನೀರಿಗೆ ಈಜಾಡಲು ಇಳಿದಿತ್ತು. ಈ ವೇಳೆ ನೀರಿನ ಆಳ ತಿಳಿಯದೆ ಮೂವರು ಯುವಕರು ಮುಳುಗಿ ನೀರುಪಾಲಾಗಿದ್ದಾರೆ.
ಈಜು ಬಾರದಿದ್ದರೂ ಜಲಾಶಯದ ನೀರಿಗೆ ಇಳಿದಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಸ್ನೇಹಿತರ ಕಣ್ಣೆದುರೇ ಯುವಕರು ಮುಳುಗುತ್ತಿದ್ದರೂ ರಕ್ಷಿಸಲು ಸಾಧ್ಯವಾಗದೆ ಉಳಿದವರು ಅಸಹಾಯಕವಾಗಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೃತರನ್ನು 20 ವರ್ಷದ ಮಣಿಕಂಠ, ಚರಣ್ ಹಾಗೂ 23 ವರ್ಷದ ಮಿಲನ್ ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನೀರುಪಾಲಾದ ಯುವಕರ ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಜಲಾಶಯಗಳು ಹಾಗೂ ಅಪಾಯಕಾರಿ ನೀರಿನ ಪ್ರದೇಶಗಳಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.





































































