ಮಂಗಳೂರು: ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಈ ಬಾರಿ 50ನೇ ವರ್ಷದ ಸಾಮೂಹಿಕ ವಿವಾಹ ನೆರವೇರಲಿದೆ. ಏಪ್ರಿಲ್ 27ರಂದು ಬುಧವಾರ ಸಂಜೆ ಈ ವಿವಾಹ ವೈಭವ ನೆರವೇರಲಿದೆ. ಈ ಬಾರಿಯದ್ದು ಗೋಧೋಳಿ ಲಗ್ನ. ಅಂದರೆ 6.50ಕ್ಕೆ ಮುಹೂರ್ತ ನಿಗದಿಯಾಗಿದೆ.
ಪೂಜಾ ಕೈಂಕರ್ಯದ ಜೊತೆಯಲ್ಲೇ ಸಾಮಾಜಿಕ ಕೈಂಕರ್ಯ
ನ್ಯಾಯದಾನ, ಧರ್ಮೋತ್ಥಾನ, ದೇಗುಲಗಳ ಪುನರುತ್ಥಾನ ಹೀಗೆ ಹಲವು ಸಾಮಾಜಿಕ-ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯವಾಗಿರುವ ಧರ್ಮಸ್ಥಳ ದೇಗುಲ ಸಾಮಜಿಕ ಸ್ವಾಸ್ಥ್ಯದ ಉದ್ದೇಶದಿಂದ ಸರ್ವ ಧರ್ಮ ಸಮ್ನೇಳನ ಮೂಲಕ ನಾಡಿನ ಗಮನಸೆಳೆದಿದೆ. ಅದರ ಜೊತೆಯಲ್ಲೇ ಸಾಮೂಹಿಕ ವಿವಾಹ ಕಾರ್ಯಕ್ರಮವೂ ಕೈಂಕರ್ಯ ರೂಪದಲ್ಲಿ ಸಾಗಿದೆ.
1972ರಲ್ಲಿ ಆರಂಭವಾದ ಉಚಿತ ಸಾಮೂಹಿಕ ವಿವಾಹ ಸಮಾರಂಭ, ಈ ಬಾರಿ 50 ವರ್ಷಗಳನ್ನು ಪೂರೈಸುತ್ತಿದೆ. ಈ ವರೆಗೆ ಒಟ್ಟು 12,393 ಜೋಡಿ ಈ ಸಾಮೂಹಿಕ ವಿವಾಹ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳದಲ್ಲಿ ಈ ರೀತಿ ವಿವಾಹವಾದವರ ಬದುಕು ಬಂಗಾರವಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಸಾಮಾಜಿಕ ಪಿಡುಗಿಗೆ ಬ್ರೇಕ್..
ಸಾಮಾಜಿಕ ಪಿಡುಗಾಗಿರುವ ವರದಕ್ಷಿಣೆ ಭೂತ ಅವೆಷ್ಟೋ ಕುಟುಂಬಗಳನ್ನು ಬಲಿತೆಗೆದುಕೊಂಡಿದೆ. ಈ ಪಿಡುಗನ್ನು ನಿವಾರಿಸುವ ಉದ್ದೇಶದಿಂದ ಹಾಗೂ ಆರ್ಥಿಕ ತೊಂದರೆಯಿಂದಾಗಿ ಮದುವೆಗಳು ತಪ್ಪಬಾರಂದೆಂಬ ನಿಟ್ಟಿನಲ್ಲಿ ಬಡವರಿಗೂ ನೆರವಾಗುವ ನಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರದ್ದು.
ಅನನ್ಯ ವಿವಾಹ ವೈಭವ..
ಬಡವರ ಜೊತೆ ಕೈಜೋಡಿಸುವ ಮಹಾ ವೈಭವ ಇದಾಗಿದೆ. ಲಕ್ಷಾಂತರ ರೂಪಾಯಿಗಳನ್ನು ಈ ಸಾಮೂಹಿಕ ವಿವಾಹಕ್ಕೆ ಡಾ.ವೀರೇಂದ್ರ ಹೆಗ್ಗಡೆಯವರು ಖರ್ಚು ಮಾಡುತ್ತಾರೆ. ಮದುವೆಯ ಸಕಲ ವೆಚ್ಚವೂ ದೇವಾಲಯದ್ದೇ. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆಕಣ ಹಾಗೂ ಮಂಗಳ ಸೂತ್ರ, ಹೂವಿನ ಹಾರ ನೀಡಲಾಗುತ್ತದೆ. ಆದರೆ ಎರಡನೇ ವಿವಾಹಕ್ಕೆ ಅವಕಾಶವಿಲ್ಲ ಎಂಬುದು ಗಮನಾರ್ಹ.
ಈ ಬಾರಿಯ ಸಾಮೂಹಿಕ ವಿವಾಹದಲ್ಲಿ ಮದುವೆಯಾಗ ಬಯಸುವವರು ಏಪ್ರಿಲ್ 15ರೊಳಗೆ ಸಕಲ ಮಾಹಿತಿ ಹಾಗೂ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ದೇವಾಲಯದ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ಧರ್ಮಸ್ಥಳ ದೇವಾಲಯ ಕಚೇರಿಯ ದೂರವಾಣಿ ಸಂಖ್ಯರ 08256-266644 ಅಥವಾ ವಾಟ್ಸಪ್ ನಂಬರ್ 8147263422 ಮೂಲಕ ಪಡೆಯಬಹುದು.